i
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೋ ಕಾಯ್ದೆ ಅಡಿ ಕಾರಾಗೃದಲ್ಲಿರುವ ಆರೋಪಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯನವರು ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ ಎಂದು ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಹಾಗೂ ಮುರುಘಾ ಶ್ರೀಗಳ ಆಪ್ತ ಜಿತೇಂದ್ರ ಎನ್ ಹುಲಿಕುಂಟೆ ವ್ಯಂಗ್ಯವಾಡಿದ್ದಾರೆ.
ಮುರುಘಾ ಶರಣರು ಪೋಕ್ಸೋ ಕಾಯ್ದೆ ಅಡಿ ನ್ಯಾಯಾಂಗ ಬಂಧನದಲ್ಲಿರುವುದನ್ನು ಮರೆತು, ಮುರುಘಾ ಶರಣರು ಹೊರಗೆ ಬರಲು ಸಾಧ್ಯವಿಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ. ಬಿ.ಎಸ್.ಪರಮಶಿವಯ್ಯನವರು ಹಿರಿಯರು ಹಾಗೂ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿರುವವರು, ಇವರು ಮುರುಘಾ ಶರಣರ ಬಗ್ಗೆ ನೀಡಿರುವ ಹೇಳಿಕೆಯು ಕಾನೂನಿನಲ್ಲಿಯೇ ಇಲ್ಲದ ಹೊಸ ಪದವಾಗಿದೆ. ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳಿಗೆ ಅನ್ವಯವಾಗುವ ಹೇಳಿಕೆಯನ್ನು ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶರಣರ ಬಗ್ಗೆ ನೀಡಿದ ಹೇಳಿಕೆ ಬಾಲಿಶ ಎನ್ನಿಸುತ್ತದೆ ಎಂದು ಹುಲಿಕುಂಟೆ ಬೇಸರ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಮಾತನಾಡಿರುವ ವೀರಶೈವ ನಿಗಮದ ಅಧ್ಯಕ್ಷರು, ಸರ್ಪಭೂಷಣ ಮಠದ ಸ್ವಾಮೀಜಿಗಳನ್ನು ಮುರುಘಾ ಮಠದ ಪೀಠಾಧ್ಯಕ್ಷರನ್ನಾಗಿ ಮಾಡಬೇಕೆಂದು ಹೇಳಿರುವುದು ಬೇಸರ ಮೂಡಿಸಿದೆ ಏಕೆಂದರೆ, ಮುರುಘಾ ಮಠದ ಮೇಲೆ ಹಲವು ಕೇಸುಗಳನ್ನು ಸರ್ಪಭೂಷಣ ಮಠದವರು ದಾಖಲಿಸಿದ್ದು 3-4 ಕೇಸುಗಳು ವಿಚಾರಣೆ ಹಂತದಲ್ಲಿವೆ. ಲಿಂಗೈಕ್ಯ ಜಗದ್ಗುರುಗಳಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳ ವಿರುದ್ಧ ಅವರ ಕೊನೆಯ ದಿನಗಳಲ್ಲಿ ಜಾಮೀನು ರಹಿತ ಬಂಧನದ ನೋಟಿಸನ್ನು ನೀಡಿದ್ದನ್ನು ಭಕ್ತರು ಇನ್ನು ಮರೆತಿಲ್ಲ. ಇಂತಹ ನೋವುಗಳನ್ನು ನೀಡಿದ ಸರ್ಪಭೂಷಣ ಮಠದ ಸ್ವಾಮೀಜಿಗಳನ್ನು ಮುರುಘಾ ಮಠದ ಪೀಠಾಧ್ಯಕ್ಷರನ್ನಾಗಿ ಮಾಡಲು ಹೇಗೆ ಸಾಧ್ಯ ಎಂದು ಜಿತೇಂದ್ರ ಪ್ರಶ್ನಿಸಿದ್ದಾರೆ.
ಮುರುಘಾ ಮಠದ ಉತ್ತರಾಧಿಕಾರಿ ಅಥವಾ ಪೀಠಾಧ್ಯಕ್ಷರನ್ನು ನೇಮಿಸುವ ಅಧಿಕಾರ ಶಿವಮೂರ್ತಿ ಮುರುಘಾ ಶರಣರಿಗೆ ಮಾತ್ರ ಇದೆ. ಏಕೆಂದರೆ ಮುರುಘಾ ಮಠವು ಏಕ ವ್ಯಕ್ತಿ ಟ್ರಸ್ಟ್ ಆಗಿದ್ದು, ಪೀಠಾಧ್ಯಕ್ಷರಾದ ಶಿವಮೂರ್ತಿ ಮುರುಘಾ ಶರಣರು ಉತ್ತರಾಧಿಕಾರಿ ಅಥವಾ ಸ್ವಾಮೀಜಿ ನೇಮಕ ವಿಚಾರವಾಗಿ ಸರ್ವಾಧಿಕಾರ ಹೊಂದಿರುತ್ತಾರೆ. ಈ ರೀತಿ ಹೇಳಿಕೆಗಳನ್ನು ನೀಡುವ ಬದಲು ಲಿಂಗೈಕ್ಯ ಜಗದ್ಗುರುಗಳಾದ ಶ್ರೀ ಜಯದೇವ ಮಹಾಸ್ವಾಮಿಗಳು ನೀಡಿರುವ ಅಪಾರ ಕೊಡುಗೆಯಿಂದ ಇಂದು ಲಾಭ ಮತ್ತು ಅಭಿವೃದ್ಧಿ ಕಾಣುತ್ತಿದ್ದೀರಿ. 1909ರಲ್ಲಿ ಜಗದ್ಗುರುಗಳು 30000 ರೂ.ಗಳ ದೇಣಿಗೆಯನ್ನು ನೀಡಿ ಮೈಸೂರು ಮಹಾರಾಜರಿಂದ ಬೆಂಗಳೂರಿನ ಹೃದಯಭಾಗ ಗಾಂಧಿನಗರದಲ್ಲಿ 1-33 ಗುಂಟೆ ಜಾಗವನ್ನು ಕೊಡಿಸಿರುವುದನ್ನು ಮರೆತು ಅವರ ಸ್ಮರಣೆ ಮಾಡದೆ ಜಯಂತೋತ್ಸವವನ್ನು ಆಚರಿಸದೆ, ಅವರ ಒಂದು ಭಾವಚಿತ್ರವನ್ನು ಸಹ ಹಾಕದೇ ತಮ್ಮ ಫೋಟೋಗಳನ್ನು ಹಾಕಿಕೊಂಡು ಮೆರೆಯುತ್ತಿದ್ದೀರಿ ಇದು ಯಾವ ನ್ಯಾಯ ಎಂದು ಜಿತೇಂದ್ರ ಕಿಡಿ ಕಾರಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಹಲವು ಮಠಗಳಿಗೆ. ಪ್ರತಿಯೊಂದು ಮಠಕ್ಕೂ ತನ್ನದೇ ಆದ ಆಚಾರ-ವಿಚಾರ, ಪದ್ಧತಿ, ಪರಂಪರೆ, ಕಾನೂನು ಇರುತ್ತವೆ. ಮಠಗಳು ಪರಸ್ಪರ ಮಾರ್ಗದರ್ಶನವನ್ನಷ್ಠೆ ಮಾಡಿಕೊಂಡು ಬಂದಿರುತ್ತವೆ. ಆಂತರಿಕ ವಿಚಾರದಲ್ಲಿ ಮೂಗು ತೂರಿಸಿರುವುದಿಲ್ಲ, ಆದರೆ ಹಿರಿಯರಾದ ಬಿ.ಎಸ್. ಪರಮಶಿವಯ್ಯನವರು ಈ ರೀತಿ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದಾರೆ. ಹಿರಿಯರಾದ ತಾವು ಬೇಡವಾದ ವಿಚಾರಗಳಿಗೆ ಮೂಗು ತೂರಿಸುವ ಬದಲು ಸರ್ಕಾರವು ಸಮಾಜದ ಅಭಿವೃದ್ಧಿಗಾಗಿ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದೆ. ಆ ಜವಾಬ್ದಾರಿಯನ್ನು ತಾವುಗಳು ಸರಿಯಾಗಿ ನಿಭಾಯಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಿ ಸರ್ವರ ಅಭಿವೃದ್ಧಿಗೆ ಶ್ರಮವಹಿಸುವಂತೆ ಜಿತೇಂದ್ರ ಹುಲಿಕುಂಟೆ ಆಗ್ರಹಿಸಿದ್ದಾರೆ.