i
ಮದುವೆಗಾಗಿ ಸಾವಿರಾರು ರೈತ ಮಕ್ಕಳು ಕ್ಯೂ ನಿಂತರೂ ಹೆಣ್ಣು ಸಿಗುತ್ತಿಲ್ಲ….
ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಸಾವಿರಾರು ಸಂಖ್ಯೆಯಲ್ಲಿ ಮದುವೆಯಾಗದೆ ಇರುವಂತ ರೈತಾಪಿ ಕುಟುಂಬದ ಯುವಕರಿಗೆ ಹೆಣ್ಣು ನೀಡಲು ಯಾರೊಬ್ಬರು ಒಪ್ಪಿತ್ತಿಲ್ಲ, ರೈತ ಕುಟುಂಬಗಳು ಮುಂದಿನ 20 ವರ್ಷಗಳಲ್ಲಿ ಕಣ್ಮರೆಯಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದೆ. ಹೊಲ ಮನೆ ಕೆಲಸ ಮಾಡಿಕೊಂಡಿರುವ ರೈತರ ಮಕ್ಕಳಿಗೆ ಮದುವೆ ಮಾಡಲು ಹೆಣ್ಣು ಕೇಳಲು ಹೋದರೆ ಹೆಣ್ಣೆತ್ತವರು ಹುಡುಗ ಏನು ಮಾಡ್ಕೊಂಡು ಇದ್ದಾನೆ ಅಂದಾಗ ರೈತಾಪಿ ಕೆಲಸ ಮಾಡಿಕೊಂಡಿದ್ದಾನೆ ಎಂದರೆ ಸಾಕು ಮೂಗು ಮುರಿಯುತ್ತಾರೆ. ಹೀಗಾಗಿ ಯುವಕರು ಮದುವೆಯಾಗಲು ಹೆಣ್ಣು ಸಿಗದೇ ಇದೀಗ ವಧು-ವರರ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾಳ ಸಂಗಾತಿಗಾಗಿ ಕ್ಯೂ ನಿಂತಿರುವ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿಯಲ್ಲಿ ಜರುಗಿದೆ.
ಆದಿಚುಂಚನಗಿರಿ ಮಠದ ವತಿಯಿಂದ ರೈತ ಮಕ್ಕಳಿಗಾಗಿ ಆಯೋಜಿಸಿದ್ದ ಒಕ್ಕಲಿಗ ವಧುವರ ಸಮಾವೇಶದಲ್ಲಿ ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಧು-ವರರ ಆಯ್ಕೆಗಾಗಿ ಯುವಕ-ಯುವತಿಯರು ಬಂದಿದ್ದರು. 12 ಸಾವಿರ ಮಂದಿ ವಧುವರರ ಸಮಾವೇಶದಲ್ಲಿ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 250 ಮಂದಿ ಹುಡುಗಿಯರು ಮಾತ್ರ ವರನಿಗಾಗಿ ನೋಂದಣಿ ಮಾಡಿಕೊಂಡಿದ್ದರು. ಉಳಿದ 11,750 ಮಂದಿ ರೈತಾಪಿ ಕೆಲಸ ಮಾಡುವ ಯುವಕರು ವಧುವಿಗಾಗಿ ನೋಂದಣಿ ಮಾಡಿಕೊಂಡಿದ್ದರು. ಮದುವೆಯಾಗಲು ರೈತಾಪಿ ವರ್ಗದ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ, ಬೆಂಗಳೂರು ನಂತಹ ನಗರದಲ್ಲಿ ವಾಚ್ ಮ್ಯಾನ್ ಆಗಿದ್ದರೂ ಪರವಾಗಿಲ್ಲ, ರೈತರಿಗೆ ಹೆಣ್ಣು ಕೊಡುವುದಿಲ್ಲ ಎಂದು ರೈತಾಪಿ ವರ್ಗಗಳ ಪೋಷಕರೇ ಹೇಳುತ್ತಿರುವುದನ್ನು ನೋಡಿದರೆ ಬೇಸಾಯದ ಬದುಕು ಸಾಕಾಗಿದೆ ಎನ್ನಲಾಗಿದೆ. ದೇಶದ ರೈತರ ಸ್ಥಿತಿ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಇದರಿಂದ ಗೊತ್ತಾಗುತ್ತಿದೆ.