i
ಕಾಂಗ್ರೆಸ್-ಜೆಡಿಎಸ್ ಟಿಕೆಟ್ ಆಕಾಂಕ್ಷಿ ವೀರೇಂದ್ರ ಪಪ್ಪಿ ನಾಪತ್ತೆ, ಆರೋಪಿಗಾಗಿ ಪೊಲೀಸರ ಹುಡುಕಾಟ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಜೆಡಿಎಸ್-ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಉದ್ಯಮಿ ವೀರೇಂದ್ರ ಪಪ್ಪಿ ತಲೆಮರೆಸಿಕೊಂಡಿದ್ದು ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಒಂದರಲ್ಲಿ 4ನೇ ಆರೋಪಿಯಾಗಿರುವ ಕ್ಯಾಸಿನೋ ದಂಧೆ ನಡೆಸುತ್ತಿರುವ ಉದ್ಯಮಿ ಹಾಗೂ ನಟ ದೊಡ್ಡಣ್ಣ ಅವರ ಅಳಿಯ ಕೆ.ಸಿ.ವೀರೇಂದ್ರ ಅಲಿಯಾಸ್ ಪಪ್ಪಿ ವಿರುದ್ಧ 420 ಪ್ರಕರಣ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕೇಸ್ ದಾಖಲು ಆಗುತ್ತಿದ್ದಂತೆ ವೀರೇಂದ್ರ ಪಪ್ಪಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಪಕ್ಷದಲ್ಲಿ ಗುರಿಸಿತಿಸಿಕೊಂಡು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದ ಪಪ್ಪಿ, ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಸಲುವಾಗಿ ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗಷ್ಟೆ ಸಂಸದ ಡಿಕೆ ಸುರೇಶ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆಯಾಗುವ ಸುಳಿವು ನೀಡಿದ್ದರು. ಆದರೆ ಈಗ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ದಾವಣಗೆರೆ ಪೊಲೀಸ್ ಠಾಣೆಗೆ ಸಂತ್ರಸ್ತ ವೆಂಕಟೇಶ್ ಎನ್ನುವ ರೈತ ಲಕ್ಷಾಂತರ ರೂ.ಕಳೆದುಕೊಂಡು 4 ಮಂದಿ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಹಿರಿಯೂರು ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಜಾತ್ಯತೀತ ಜನತಾದಳ ಪಕ್ಷದಿಂದ ಪಪ್ಪಿಗೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಜೆಡಿಎಸ್ ಪಾರ್ಟಿ ಅವರಿಗೆ ಟಿಕೆಟ್ ಖಚಿತ ಮಾಡಿರಲಿಲ್ಲ. ಹಾಗಾಗಿ ಅವರು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಇಂತಹ ಕುಖ್ಯಾತಿ ಹೊಂದಿರುವಂತ ಆರೋಪಿಗೆ ರಾಜಕೀಯ ಪಕ್ಷಗಳು ಮಣೆ ಹಾಕುವಷ್ಟು ದಿವಾಳಿಯಾಗಿರುವುದು ಸೋಜಿಗ ತಂದಿದೆ. ಇಂತಹ ದಂಧೆ ನಡೆಸಿ ಮುಗ್ದ ಕುಟುಂಬಗಳನ್ನು ವಿನಾಶಕ್ಕೆ ತಳ್ಳುತ್ತಿರುವಂತ ಆರೋಪಿಗಳ ಪರವಾಗಿ ಮತದಾರರು ನಿಲ್ಲುತ್ತಿರುವುದು ಕೂಡ ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವ ಪ್ರಶ್ನೆ ಮೂಡಿದೆ.
ಗೋವಾ ಕ್ಯಾಸಿನೋದಲ್ಲಿ ದಂಧೆ, ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮಾಡಿರುವ ಆರೋಪಿ ವೀರೇಂದ್ರ ಪಪ್ಪಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ಶೌಚಾಲಯದಲ್ಲೂ ಕಂತೆ ಕಂತೆ ನೋಟುಗಳು ಸಿಕ್ಕು ಇಡೀ ದೇಶ ಮತ್ತು ರಾಜ್ಯದ ಗಮನ ಸೆಳೆದಿದ್ದರು.
ಈಗಿನ ಅಸಲಿ ಪ್ರಕರಣ ಏನಂದರೆ ದಾವಣಗೆರೆ ನಿವಾಸಿ ರೈತ ವೆಂಕಟೇಶ್ ಎನ್ನುವವರು ದಾವಣಗೆರೆಯ ಕಿರಣ್, ಚೇತನ್, ಸೂರಜ್ ಕುಟ್ಟಿ, ವೀರೇಂದ್ರ ಅಲಿಯಾಸ್ ಪಪ್ಪಿ ಈ ನಾಲ್ಕು ಮಂದಿ ವಿರುದ್ಧ ದೂರು ದಾಖಲಾಗಿದೆ. ದಾವಣಗೆರೆ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
4 ಮಂದಿ ಆರೋಪಿಗಳು ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ಇವರು ಬೆಟ್ಟಿಂಗ್ ಮಾಡಿದ್ದರು. ಪಂದ್ಯ ಅಕ್ಟೋಬರ್ 20ರಂದು ರಂದು ನಡೆದಿತ್ತು. ಕ್ರಿಕೆಟ್ ಬೆಟ್ಟಿಂಗ್ ಆಸೆ ಹುಟ್ಟಿಸಿ ಮೊಬೈಲ್ ಆಪ್ ಮೂಲಕ ಹಣ ಸಂಗ್ರಹ ಮಾಡಿ ವಂಚನೆ ಮಾಡಲಾಗಿದೆ ಎಂಬುದು ಸಂತ್ರಸ್ತ ರೈತ ಎಚ್.ವೆಂಕಟೇಶ್ ಅವರ ದೂರಿನ ಸಾರಾಂಶವಾಗಿದೆ.
ಪೊಲೀಸರು ಕಿರಣ್, ಚೇತನ್ ಅವರುಗಳನ್ನು ಬಂಧಿಸಿ ಆರೋಪಿಗಳಿಂದ 7 ಲಕ್ಷ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಸೂರಜ್ ಕುಟ್ಟಿ, ವೀರೇಂದ್ರ ಅಲಿಯಾಸ್ ಪಪ್ಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ವೀರೇಂದ್ರ ಪಪ್ಪಿ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ. ಈಗಾಗಲೇ ಆರೋಪಿ ಕೆ.ಸಿ.ವೀರೇಂದ್ರ ಪಪ್ಪಿಗೆ ಸೇರಿದ ಬ್ಯಾಂಕ್ ಅಕೌಂಟ್ ಸೀಜ್ ಮಾಡಲಾಗಿದ್ದು, ಚಳ್ಳಕೆರೆ ಕೆನರಾ ಬ್ಯಾಂಕ್ ಸೇರಿ ವಿವಿಧ ಬ್ಯಾಂಕ್ಗಳ ಅಕೌಂಟ್ ಸೀಜ್ ಮಾಡಲಾಗಿದೆ ಎನ್ನಲಾಗುತ್ತಿದೆ. ಪೊಲೀಸರು ತನಿಖೆಯನ್ನ ತೀವ್ರಗೊಳಿಸಿದ್ದು ಮತಷ್ಟು ಮಾಹಿತಿ ಹೊರ ಬರುವ ಸಾಧ್ಯತೆ ಇದೆ.