i
ಲೋಕಾಯುಕ್ತ ದಾಳಿ ಗ್ರಾಪಂ ಪಿಡಿಒ-ಕಾರ್ಯದರ್ಶಿ ಬಂಧನ…
ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಇ-ಸ್ವತ್ತು ತಿದ್ದುಪಡಿ ಮಾಡಿಕೊಡಲು ಲಂಚ ಸ್ಪೀಕರಿಸುವ ವೇಳೆ ಲೋಕಾಯುಕ್ತರು ದಾಳಿ ಮಾಡಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಕಾರ್ಯದರ್ಶಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಕಳಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗವಿರಂಗಾಪುರ ಗ್ರಾಮದ ನಿವಾಸಿ ಕೆ.ಲೋಕೇಶ್ ಎನ್ನುವರ ತಾಯಿ ಲಲಿತಮ್ಮ ಎನ್ನುವರ ಹೆಸರಿನಲ್ಲಿದ್ದ ಖಾಲಿ ನಿವೇಶನ ಇ-ಸ್ವತ್ತು ಮಾಡಿಕೊಡಲು ಕುರುಬರಹಳ್ಳಿ ಗ್ರಾಪಂ ಕಾರ್ಯದರ್ಶಿ ಜಗದೀಶ್ 1ನೇ ಆಪಾದಿತನಾಗಿದ್ದು ಮತ್ತು ಪಿಡಿಒ ಬಸವರಾಜ 2ನೇ ಆಪಾದಿತನಾಗಿದ್ದು 6 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟು ಲಂಚ ಸ್ಪೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಇಬ್ಬರು ಆಪಾದಿತರನ್ನು ಬಂಧಿಸಿದ್ದಾರೆ.
ಈ ಮೊದಲು 10 ಸಾವಿರ ರೂ.ಗಳ ಲಂಚ ಪಡೆದು ಖಾಲಿ ನಿವೇಶನದ ಇ-ಸ್ವತ್ತು ಮಾಡುವ ಸಂದರ್ಭದಲ್ಲಿ ಕಟ್ಟಡ ಎಂದು ನಮೂದು ಮಾಡಿಕೊಟ್ಟಿರುತ್ತಾರೆ. ಬ್ಯಾಂಕ್ ಸಾಲ ಪಡೆದು ಮನೆ ನಿರ್ಮಾಣ ಮಾಡುವ ಸಲುವಾಗಿ ಕಟ್ಟಡದ ಬದಲು ತಿದ್ದುಪಡಿ ಮಾಡಿ ಖಾಲಿ ನಿವೇಶನ ಎಂದು ಇ-ಸ್ವತ್ತು ಮಾಡಿಕೊಡಲು ಮತ್ತೆ 6 ಸಾವಿರ ರೂ.ಗಳನ್ನು ಲಂಚಕ್ಕೆ ಬೇಡಿಕೆ ಇಟ್ಟು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲಾ ಲೋಕಾಯುಕ್ತ ಎಸ್ಪಿ ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಬಿ.ಕೆ.ಲತಾ, ವೈ.ಎಸ್.ಶಿಲ್ಪಾ ಮತ್ತಿತರ ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ಮಾಡಿ 1ನೇ ಆಪಾದಿತನಿಂದ ಲಂಚದ ಹಣವನ್ನು ವಶಕ್ಕೆ ಪಡೆದು ಬಂಧಿಸಿರುತ್ತಾರೆ.