i
ನಿಮಗೆ ಮಾನವೀಯತೆ ಇಲ್ವಾ, ಯಾವ ಸೀಮೆ ಎಂಎಲ್ಸಿ?…
ಚಂದ್ರವಳ್ಳಿ ನ್ಯೂಸ್, ಕೋಲಾರ: mlc car accident in kolar
ಬಿಜೆಪಿ ಪಾರ್ಟಿಯ ನಾಯಕ ಹಾಗೂ ವಿಧಾನ ಪರಿಷತ್ ಶಾಸಕ ಎನ್.ರವಿಕುಮಾರ್ ಪ್ರಯಾಣಿಸುತ್ತಿದ್ದ ಕಾರು ಕೋಲಾರ ತಾಲೂಕಿನ ಲಕ್ಷ್ಮಿ ಸಾಗರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಪಘಾತಕ್ಕೀಡಾಗಿದೆ. ವಿಧಾನ ಪರಿಷತ್ ಶಾಸಕರ ಕಾರು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಹಿಂದೇಟು ಹಾಕಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಅಸಮಾಧಾನ ಹೊರ ಹಾಕಿದರು.
ರವಿಕುಮಾರ್ ಅವರು ಕನಿಷ್ಠ ಸೌಜನ್ಯ ತೋರದಿದ್ದಾಗ ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ನೀವು ಯಾವ ಸೀಮೆ ಎಂಎಲ್ಸಿ? ನಿನಗೆ ಮಾನ ಮರ್ಯಾದೆ ಇದೆಯಾ? ಎಂಎಲ್ಸಿ, ಎಂಎಲ್ಎಯಾದರೆ ಏನ್ ಬೇಕಾದರೂ ಮಾಡಬಹುದಾ? ಚೂರಾದರೂ ಮಾನವೀಯತೆ, ಸೌಜನ್ಯ ಇರಬೇಕಲ್ಲವೇ ಎಂದು ಹಿಗ್ಗಾಮುಗ್ಗಾ ಪ್ರಶ್ನಿಸಿ ತರಾಟೆ ತೆಗೆದುಕೊಂಡಿದ್ದಾರೆ.
ಅಪಘಾತ ಎಸಗಿದ ಕಾರನ್ನು ಕೂಡಲೇ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ದೂರು ದಾಖಲಿಸಿ ಎಂದು ಪಟ್ಟು ಹಿಡಿದ್ದಾರೆ. ರಸ್ತೆಯಲ್ಲಿ ಅಪಘಾತ ಸಂಭವಿಸಿದಾಗ ಕೆಲ ಸಚಿವರು ಮಾನವೀಯತೆ ಮೆರೆದು ತಮ್ಮ ಕಾರಿನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೋಡಿಸಿರುವುದನ್ನ ನೀವು ಕೇಳಿಲ್ಲವೇ, ನಿಮಗೆಲ್ಲಿದೆ ಸಂಸ್ಕಾರ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಸಾರ್ವಜನಿಕರ ಪ್ರತಿರೋಧ ಎದುರಿಸಲಾಗದೆ ರವಿಕುಮಾರ್ ತಮ್ಮ ಕಾರು ಹತ್ತಿ ಕುಳಿತಾಗ ಮತ್ತಷ್ಟು ಆಕ್ರೋಷ ವ್ಯಕ್ತಪಡಿಸಿದ ಜನತೆ ಕಾರು ಬಿಟ್ಟು ಇಳಿಯಯ್ಯಾ ಕೆಳಗೆ, ಪೊಲೀಸರೇನು ನಿನ್ನ ಜೇಬಿನಲ್ಲಿದ್ದಾರಾ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ತಲೆ ತಗ್ಗಿಸುವಂತೆ ಮಾಡಿದಾಗ ಅನಿವಾರ್ಯವಾಗಿ ರವಿಕುಮಾರ್ ಅವರನ್ನು ಜನತೆ ಕಾರಿನಿಂದ ಕೆಳಗಿಳಿಸಿದರು.
ಅಪಘಾತದಲ್ಲಿ ಕೈ ಮತ್ತು ಕಾಲಿಗೆ ಗಾಯವಾಗಿರುವ ಬೈಕ್ ಸವಾರ ಹೊಸಕೋಟೆ ತಾಲೂಕಿನ ಶಿವನಾಪುರ ಗ್ರಾಮದ ಗೋಪಾಲ್ ಎಂದು ತಿಳಿದು ಬಂದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ, ಪರಿಸ್ಥಿತಿ ತಿಳಿಗೊಳಿಸಿದರು.