i
ಸರ್ವೇಯರ್, ರೈತ ಮುಖಂಡ ಲೋಕಾಯುಕ್ತ ಬಲೆಗೆ…
ಚಂದ್ರವಳ್ಳಿ ನ್ಯೂಸ್, ಚಿಂತಾಮಣಿ:
ನಿವೃತ್ತ ಯೋಧನಿಗೆ ಭೂಮಿ ಮಂಜೂರು ಮಾಡಲು ₹5 ಲಕ್ಷ ಬೇಡಿಕೆ ಇಟ್ಟಿದ ಸರ್ವೇಯರ್, ಡಿ ಗ್ರೂಪ್ ನೌಕರ ಹಾಗೂ ರೈತ ಸಂಘದ ಮುಖಂಡ ಲೋಕಾಯುಕ್ತ ಬಲೆಗೆ ಬಿದ್ದಿದ್ದು ಈಗ ಜೈಲು ಕಂಬಿ ಏಣಸುತ್ತಿದ್ದಾರೆ.
ನಗರದ ಭೂದಾಖಲೆ ಉಪನಿರ್ದೇಶಕರ ಕಚೇರಿಯ ಸರ್ವೇಯರ್ ನಾಗರಾಜ್, ಡಿ ಗ್ರೂಪ್ ನೌಕರ ಪ್ರಕಾಶ್, ರೈತ ಸಂಘದ ಮುಖಂಡ ಕದಿರೇಗೌಡ ಬಂಧಿತ ಆರೋಪಿಗಳಾಗಿದ್ದಾರೆ.
ಮಾಜಿ ಯೋಧನಿಂದ 1 ಲಕ್ಷ ಲಂಚ ಪಡೆಯುತ್ತಿರುವಾಗ ಆರೋಪಿಗಳನ್ನು ಲೋಕಾಯುಕ್ತ ಡಿವೈಎಸ್ಪಿ ಭೂತೇಗೌಡ, ಇನ್ಸ್ಸ್ಪೆಕ್ಟರ್ ಸಲೀಂ ನದಾಫ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿ, ಉಪ್ಪರಪೇಟೆ ಗ್ರಾಮ ಪಂಚಾಯಿತಿಯ ರಾಯಪ್ಪಲ್ಲಿ ಗ್ರಾಮದ ಮಾಜಿ ಯೋಧ ಶಿವಾನಂದ ರೆಡ್ಡಿ 20 ವರ್ಷಗಳಿಂದ ತನಗೆ ಬರಬೇಕಾಗಿದ್ದ ಭೂಮಿ ಮಂಜೂರಾತಿಗಾಗಿ ಹೋರಾಟ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಲಂಚಕ್ಕಾಗಿ ಅಧಿಕಾರಿಗಳು ಬೇಡಿಕೆ ಇಟ್ಟು ಈಗ ಜೈಲು ವಾಸ ಮಾಡುತ್ತಿದ್ದಾರೆ.
ನಿವೃತ್ತ ಯೋಧ ಭೂಮಿಗಾಗಿ ತಹಶೀಲ್ದಾರ್, ಜಿಲ್ಲಾಧಿಕಾರಿ ಹೀಗೆ ಮುಖ್ಯಮಂತ್ರಿ ವರೆಗೂ ಮನವಿ ಸಲ್ಲಸಿ ಸೋತಿದ್ದರು. ನಗರದಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಾ ನಡೆಸಿದ್ದರು. ಅದರ ಫಲವಾಗಿ ಭೂ ಮಂಜೂರಾತಿಗೆ ಸರ್ವೇ ಮಾಡಲು ಆದೇಶವಾಗಿತ್ತು. ಮಂಜೂರಾದ ಭೂಮಿಯನ್ನು ಸರ್ವೇ ಮಾಡಲು ಸರ್ವೇಯರ್, ಡಿ ಗ್ರೂಪ್ ನೌಕರ ಹಾಗೂ ರೈತ ಸಂಘದ ಮುಖಂಡ ಸೇರಿಕೊಂಡು 5 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಯೋಧ ಶಿವಾನಂದ ರೆಡ್ಡಿ ಲೋಕಾಯುಕ್ತಕ್ಕೆ ದೂರು ನೀಡಿದ್ದರಿಂದ ಲೋಕಾಯುಕ್ತ ದಾಳಿ ಮಾಡಿ ಮೂರು ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.