i
ಸರ್ಕಾರಿ ನೌಕರರ ಸಂಘಕ್ಕೆ ಜಿಲ್ಲಾಡಳಿತ ಜಾಗ ಮಂಜೂರು ಮಾಡಲಿ-ಮಂಜುನಾಥ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಂದೆ ಅನೈತಿಕ ಚಟುವಟಿಕೆ ನಡೆಯುತ್ತಿರುವ ಕುರಿತು ಚಂದ್ರವಳ್ಳಿ ದಿನ ಪತ್ರಿಕೆ ವರದಿ ಮಾಡಿದ್ದು ಆ ವರದಿ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಇಂದಿನ ನಿಜಸ್ಥಿತಿ ಏನಂದರೆ ಕಚೇರಿಯ ಪಕ್ಕದಲ್ಲಿಯೇ 20 ವರ್ಷಗಳಿಂದ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಗ್ಯಾರೇಜ್ ಗಳು ನಡೆಯುತ್ತಿವೆ. ಇಲ್ಲಿ ಸಂಜೆಯಾದರೆ ಸಂಘದ ಕಚೇರಿಯ ಪಕ್ಕದಲ್ಲಿರುವ ಬಾರ್ ಗೆ ಬಂದು ಹೋಗುವವರ ಸಂಖ್ಯೆ ಹೆಚ್ಚಿದೆ. ರಾತ್ರಿ ಪೂರ ಅವರನ್ನು ಕಾಯುವುದಕ್ಕೆ ಆಗುವುದಿಲ್ಲ. ಈ ಕುರಿತು ಚಿತ್ರದುರ್ಗ ನಗರಸಭೆಯ ಅಧಿಕಾರಿಗಳನ್ನು ಸಂಪರ್ಕಿಸಿ ಇಲ್ಲಿನ ಸಮಸ್ಯೆ ಕುರಿತು ಮೌಖಿಕವಾಗಿ ಹಲವು ಬಾರಿ ಗಮನಕ್ಕೆ ತರಲಾಗಿತ್ತು. ಅವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೂ ವ್ಯವಸ್ಥೆ ಸರಿಪಡಿಸಿಲ್ಲ, ಹಾಗಾಗಿ ಮತ್ತೊಮ್ಮೆ ಚಿತ್ರದುರ್ಗ ನಗರದ ಮುನಿಸಿಪಲ್ ಕಮಿಷನರ್ ಅವರನ್ನು ಭೇಟಿಯಾಗಿ ಆ ಜಾಗದಲ್ಲಿ ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದರ ಜೊತೆಯಲ್ಲಿ ಈಗಾಗಲೇ ಜಿಲ್ಲಾಡಳಿತಕ್ಕೆ ಉಪಾಧ್ಯಾಯ ಹೋಟೆಲ್ ಪಕ್ಕದಲ್ಲಿ ಸರ್ಕಾರಿ ಜಾಗ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ.
ಕಳೆದ 10-15 ವರ್ಷಗಳಿಂದ ಸಂಘದ ಕಟ್ಟಡ ಸುತ್ತಮುತ್ತಲಿನ ಪರಿಸ್ಥಿತಿ ಸಕಷ್ಟು ಭಿನ್ನವಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಜಿಲ್ಲಾಡಳಿತ ಆದಷ್ಟು ಬೇಗ ಜಾಗ ಮಂಜೂರು ಮಾಡಬೇಕು. ಜಾಗ ಮಂಜೂರು ಮಾಡಿದರೆ ಸರ್ಕಾರಿ ನೌಕರರ ಸಮುದಾಯ ಭವನ ನಿರ್ಮಾಣ ಮಾಡಲು ಅನುಕೂಲವಾಗಲಿದೆ ಅಲ್ಲದೆ ಜಿಲ್ಲೆಯ ಎಲ್ಲಾ ಶಾಸಕರು ಸಂಸದರಿಗೆ ಮನವಿ ಸಲ್ಲಿಸುವ ಮೂಲಕ ಅನುದಾನ ತಂದು ಸಮುದಾಯ ಭವನ ನಿರ್ಮಾಣ ಮಾಡಲು ಪ್ರತಿನಿತ್ಯ ಶ್ರಮವಹಿಸಲಾಗುತ್ತದೆ ಎಂದು ಮಂಜುನಾಥ್ ತಿಳಿಸಿದ್ದಾರೆ.
ಸರ್ಕಾರಿ ನೌಕರರು ನನ್ನ ಮೇಲೆ ವಿಶ್ವಾಸ ಇಟ್ಟು ಗೆಲ್ಲಿಸಿದ ನಂತರ ಸರ್ಕಾರಿ ನೌಕರರ (ಆರೋಗ್ಯ,ಹಕ್ಕು,ಭತ್ಯೆ ಇತ್ಯಾದಿ) ಉದ್ದೇಶಗಳ ಈಡೇರಿಸುವ ಸಲುವಾಗಿ ಹಗಲಿರಳು ಕರ್ತವ್ಯ ಮಾಡುತ್ತಿದ್ದೇನೆ. ಮುಂದೆಯೂ ನೌಕರರ ಪರವಾಗಿ ನಿಸ್ವಾರ್ಥದಿಂದ ಕೆಲಸ ಮಾಡಲಾಗುತ್ತದೆ ಎಂದು ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.