i
ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ, ಸುರೇಶಬಾಬುಗೆ ಮಂತ್ರಿ ಭಾಗ್ಯ…
ಚಂದ್ರವಳ್ಳಿ ನ್ಯೂಸ್, ಚಿಕ್ಕನಾಯಕನಹಳ್ಳಿ:
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಆಯೋಜಿಸಿರುವ ಪಂಚರತ್ನ ರಥಯಾತ್ರೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿಲ್ಲೂ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ತುರುವೇಕೆರೆಯಲ್ಲಿ ಯಶಸ್ವಿ ಯಾತ್ರೆ ಮುಗಿಸಿದ ಬಳಿಕ ಚಿಕ್ಕನಾಯಕನಹಳ್ಳಿಗೆ ಪ್ರವೇಶಿಸುತ್ತಿದ್ದಂತೆ ಕೊಬ್ಬರಿ ಹಾರ ಹಾಕಿ ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು. ಬೆಳಿಗ್ಗೆಯಿಂದ ಆರಂಭವಾದ ರಾತ್ರಿ ಮಧ್ಯರಾತ್ರಿಯವರೆಗೂ ಮುಂದುವರೆದಿದ್ದು ವಿಶೇಷವಾಗಿತ್ತು.
ಹುಳಿಯಾರು ಸಮೀಪದ ಬೋರನಕಣಿವೆ ಜಲಾಶಯ ಭರ್ತಿಯಾಗಿದ್ದು ಭಾರಿ ಜನಸ್ತೋಮದೊಂದಿಗೆ ಕುಮಾರಸ್ವಾಮಿ ಅವರು ಬಾಗಿನ ಅರ್ಪಿಸಿದರು. 22 ವರ್ಷಗಳ ಬಳಿಕ ಈ ಕೆರೆ ತುಂಬಿದ್ದು ವಿಶೇಷ. ಇದೇ ಸಂದರ್ಭದಲ್ಲಿ ತೋರಿ ಕಣಿವೆಗೂ ಕೂಡ ಕುಮಾರಸ್ವಾಮಿ ಬಾಗಿನ ಅರ್ಪಿಸಿದರು.
ಹುಳಿಯಾರು ಸಮೀಪದ ಹೊಯ್ಸಳಕಟ್ಟೆಗೆ ಪಂಚರತ್ನ ರಥ ಯಾತ್ರೆ ಬರುತ್ತಿದ್ದಂತೆ ಬೃಹತ್ ಕೊಬ್ಬರಿ ಹಾರ ಹಾಕಿ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಮಾರ್ಗಮಧ್ಯೆ ಕಾಡುಗೊಲ್ಲ ಸಮುದಾಯದವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕುರಿಯನ್ನು ಕಾಣಿಕೆ ನೀಡಿ ತಮ್ಮ ಪ್ರೀತಿ ಮೆರೆದರು.
ಕಾಡುಗೊಲ್ಲರು ನೀಡಿದ ಕುರಿಯನ್ನು ಸ್ವೀಕರಿಸಿ ಮಾತನಾಡಿದ ಕುಮಾರಸ್ವಾಮಿ ಅವರು ಕಾಡುಗೊಲ್ಲ ಸಮುದಾಯದ ಎಸ್ಟಿ ಮೀಸಲಾತಿ ಒತ್ತಾಯ ಇದ್ದು. ಇದಕ್ಕೆ ನಾನು ಕೂಡ ಬೆಂಬಲ ನೀಡಿ ನಿಮ್ಮ ಜೊತೆ ಇದ್ದು ಹೋರಾಟ ಮಾಡುವುದಾಗಿ ಭರವಸೆ ನೀಡಿದರು.
ನಿಮ್ಮ ಸಮುದಾಯವನ್ನು ಎಸ್ಟಿಮೀಸಲಾತಿಗೆ ಸೇರಿಸುವುದು ನಮ್ಮ ಜವಾಬ್ದಾರಿ ಎಂದ ಅವರು ಕಾಡುಗೊಲ್ಲ ಸಮಾಜ ವಾಸಿಸುವ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡುವುದಾಗಿ ತಿಳಿಸಿದರು.
ಹೊಯ್ಸಳಕಟ್ಟೆಯಲ್ಲಿ ಬೃಹತ್ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಈ ಬಾರಿ ಚುನಾವಣೆಯಲ್ಲಿ ಸುರೇಶಬಾಬು ಅವರನ್ನು ಗೆಲ್ಲಿಸಿ ಅವರನ್ನು ತಪ್ಪದೇ ಮಂತ್ರಿ ಮಾಡುತ್ತೇನೆಂದು ಭರವಸೆ ನೀಡಿದಾಗ ಸೇರಿದ್ದ ಜನಸ್ತೋಮ ಜೋರು ತಪ್ಪಾಳೆ ತಟ್ಟಿಸ್ವಾಗತಿಸಿದಾಗ ಸುರೇಶಬಾಬು ಭಾವುಕರಾದರು.