i
ಬೆಸ್ಕಾಂ ಅಧಿಕಾರಿಗಳೇ ಗುತ್ತಿಗೆ ಗುತ್ತಿಗೆದಾರರು-ಜಯರಾಮಪ್ಪ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬೆಸ್ಕಾಂ ಇಲಾಖೆಯ ಸ್ಥಳೀಯ ಅಧಿಕಾರಿಗಳು ಮತ್ತು ಗ್ರಾಮ ಪ್ರತಿನಿಧಿಗಳೇ ಸ್ಥಳೀಯವಾಗಿ ವಿದ್ಯುತ್ ಕಾಮಗಾರಿಗಳ ಗುತ್ತಿಗೆ ನಿರ್ವಹಿಸುತ್ತಿದ್ದು, ಇದರಿಂದ ಅರ್ಹ ಲೈಸನ್ಸ್ ಪಡೆದ ವಿದ್ಯುತ್ ಗುತ್ತಿಗೆದಾರರಿಗೆ ಯಾವುದೇ ಕೆಲಸ ಕಾರ್ಯವಿಲ್ಲದಾಗಿದೆ ಎಂದು ಆರೋಪಿಸಿ ಬೆಸ್ಕಾ ಇಲಾಖೆಯ ಇಂತಹ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಜಯರಾಮಪ್ಪ ಒತ್ತಾಯಿಸಿದ್ದಾರೆ.
ನಗರದ ಬೆಸ್ಕಾಂ ಇಲಾಖೆ ಆವರಣದಲ್ಲಿ ವೃತ್ತಿ ನಿರತ ವಿದ್ಯುತ್ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಬೆಸ್ಕಾಂ ಇಲಾಖೆಯ ಸಹಾಯಕ ಲೆಕ್ಕಾಧಿಕಾರಿಗಳನ್ನು ಪುನಃ ಹಿರಿಯೂರಿಗೆ ವಾಪಸ್ ಕರೆಯಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಲೂಕಿನ ಗುತ್ತಿಗೆದಾರರ ಅನೇಕ ಕೆಲಸಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಬಿಲ್ಲುಗಳು ಬಾಕಿ ಉಳಿದಿದ್ದು, ಸಹಾಯಕ ಲೆಕ್ಕಾಧಿಕಾರಿಗಳನ್ನು ನಿಯೋಜನೆ ಮೇಲೆ ಚಿತ್ರದುರ್ಗಕ್ಕೆ ಕಳುಹಿಸಲಾಗಿದ್ದು, ಇದರಿಂದ ಇಲ್ಲಿನ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ. ಇದರಿಂದ ಯಾವುದೇ ಬಜೆಟ್ ಕಾಮಗಾರಿಗಳಾಗಲಿ ಮತ್ತು ಅನುಮೋದನೆಗಳಾಗಲಿ ದೊರೆತಿಲ್ಲ, ಆದ್ದರಿಂದ ಸಹಾಯಕ ಲೆಕ್ಕಾಧಿಕಾರಿ ಮಂಜುನಾಥ್ ರವರನ್ನು ಈ ಕೂಡಲೇ ವಾಪಸ್ ಹಿರಿಯೂರು ಇಲಾಖೆಗೆ ಕಳುಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸ್ಥಳೀಯ ಬೆಸ್ಕಾಂ ಇಲಾಖೆಯಲ್ಲಿ ಸತತವಾಗಿ 3 ವರ್ಷಗಳಿಂದ ಸಾರ್ವಜನಿಕರಿಗೆ ತಾಲೂಕಿನ ರೈತ ಬಾಂಧವರಿಗೆ ಅನುಕೂಲವಾಗುವಂತಹ ಯಾವುದೇ ಕೆಲಸ ಕಾರ್ಯಗಳು ನಡೆದಿಲ್ಲ, ಅಲ್ಲದೆ ವಿದ್ಯುತ್ ಗ್ರಾಹಕರಿಗೂ ಸಹ ತೀವ್ರ ತೊಂದರೆಯಾಗಿದ್ದು, ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟಿಲ್ಲ, ಈ ಬಗ್ಗೆ ಬೆಸ್ಕಾಂ ಇಲಾಖೆಯ ಉನ್ನತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ವೃತ್ತಿ ನಿರತ ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ರಘು ಮಾತನಾಡಿ, ಪ್ರತಿಭಟನೆ ಸ್ಥಳಕ್ಕೆ ಬಂದ ಚೀಫ್ ಇಂಜಿನಿಯರ್ ನಮ್ಮ ಯಾವುದೇ ಅಹವಾಲುಗಳನ್ನು ಸ್ವೀಕರಿಸದೇ ಹಾಗೆಯೇ ವಾಪಸ್ಸು ಹೋಗಿದ್ದಾರೆ, ಇದು ಅವರ ಬೇಜಾಬ್ದಾರಿ ತೋರಿಸುತ್ತದೆ, ಈ ಬಗ್ಗೆ ಸ್ಥಳೀಯ ಎಕ್ಸುಕ್ಯೂಟೀವ್ ಇಂಜಿನಿಯರ್ ಬಳಿ ಮಾತನಾಡಿ ಬಂದಿದ್ದೇವೆ, ಇದರಿಂದ ವಿದ್ಯುತ್ ಗ್ರಾಹಕರಿಗೆ ಹಾಗೂ ತಾಲೂಕಿನ ರೈತರಿಗೆ ತೀವ್ರ ಸಮಸ್ಯೆಯಾಗುತ್ತಿದ್ದು, ಇದನ್ನು ಸರಿಪಡಿಸದಿದ್ದರೆ ಮುಂದಿನ ದನಗಳಲ್ಲಿ ಈ ಬಗ್ಗೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಜಯರಾಮಪ್ಪ, ಜಿಲ್ಲಾ ಉಪಾಧ್ಯಕ್ಷ ಅನಿಲ್ ಕುಮಾರ್, ತಾಲೂಕು ಅಧ್ಯಕ್ಷ ಮುಕ್ತಾನಂದ, ಉಪಾಧ್ಯದಕ್ಷ ಪ್ರಹ್ಲಾದ,ಕಾರ್ಯದರ್ಶಿ ಬೊಮ್ಮಲಿಂಗನಾಯ್ಕ, ಮಾಜಿ ಅಧ್ಯಕ್ಷ ರಘು, ಸಂಘಟನಾ ಕಾರ್ಯದರ್ಶಿ ವಿನಯ್, ಹಿರಿಯ ಗುತ್ತಿಗೆದಾರರಾದ ಸಿದ್ದೇಶ್ವರಾಚಾರ್, ಇಸ್ಮಾಯಿಲ್, ಮುಬಾರಕ್, ಹರೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.