i
ಕಾಡುಗೊಲ್ಲ ಎಸ್ಟಿ ಮೀಸಲಾತಿಗೆ ಕೇಂದ್ರಕ್ಕೆ ನಿಯೋಗ ಸಂತಸ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಾಡುಗೊಲ್ಲ ಎಸ್ಟಿ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧಪಕ್ಷಗಳು ಒಮ್ಮತದ ಚರ್ಚೆಯ ಮೂಲಕ ಸಂಪೂರ್ಣ ಸಮ್ಮತಿಯೊಂದಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡದ ಹೇರುವ ನಿರ್ಣಯಕ್ಕೆ ಬಂದಿದ್ದು ಅಭಿನಂದನೀಯ ಎಂದು ಕಾಡುಗೊಲ್ಲ ಸಮುದಾಯದ ಯುವ ಮುಖಂಡ ಎನ್. ಧನಂಜಯ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಜಿಲ್ಲೆಯ ಶಾಸಕರು ನಮ್ಮ ಸಮಾಜದ ಕಾಳಜಿಯೊಂದಿಗೆ ಸದನದಲ್ಲಿ ಚರ್ಚೆ ನಡೆಸಿದ್ದು ಅವರ ಬಗ್ಗೆ ಕೃತಜ್ಞತೆ ಇದೆ ಆದರೆ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿದ್ದು ಆರು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಡುಗೊಲ್ಲ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಕೆಲವೇ ಕ್ಷೇತ್ರದ ಶಾಸಕರು ಧ್ವನಿಯೆತ್ತಿದ್ದು ಸಮಾಜ ಎಲ್ಲವನ್ನು ಗಮನಿಸುತ್ತಿದೆ. ನಮ್ಮ ಸಮಾಜದ ಪರವಾಗಿ ನಿಲ್ಲದ ನಮ್ಮ ಮತ ಪಡೆದು ನಮ್ಮ ಬಗ್ಗೆ ಧ್ವನಿ ಎತ್ತದೇ ಇರುವ ಶಾಸಕರುಗಳಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರದ ಅಂಗಳಕ್ಕೆ ಕಾಡುಗೊಲ್ಲರಿಗೆ ಪರಿಶಿಷ್ಟ ಪಂಗಡ ಮೀಸಲಾತಿ ನೀಡುವಂತಹ ಕಡತ ಹೋಗಿದ್ದು ಬಹುಮುಖ್ಯವಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ರಾಜ್ಯದ ಸಂಸದರು ನಮ್ಮ ಸಮಾಜದ ವಾಸ್ತವ ಸ್ಥಿತಿಯ ಬಗ್ಗೆ ಗಮನ ಸೆಳೆದು ಒತ್ತಡ ಹೇರುವುದರೊಂದಿಗೆ ಶೀಘ್ರ ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸಲು ಪ್ರಯತ್ನಿಸಬೇಕು. ಪ್ರಸಕ್ತ ಚಿತ್ರದುರ್ಗ ಲೋಕಸಭಾ ಸಂಸದರು ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಖಾತೆಯ ಸಚಿವರಾಗಿರುವ ಎ. ನಾರಾಯಣಸ್ವಾಮಿಯವರು ಈ ವಿಷಯದ ಬಗ್ಗೆ ಹೆಚ್ಚು ಗಮನಹರಿಸುವಂತೆ ಕಾಡುಗೊಲ್ಲ ಸಮುದಾಯದ ಮನವಿ ಮಾಡಿದೆ ಅವರು ಎಂದಿದ್ದಾರೆ.