i
ವಾಣಿ ವಿಲಾಸ ಜಲಾಶಯ ಸುರಕ್ಷತೆ, ಡ್ರೋಣ್ ಸಮೀಕ್ಷೆ ಆರಂಭ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲೆಯ ರೈತರ ಜೀವನಾಡಿ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಸಮೀಪ 115 ವರ್ಷಗಳಿಂದೆ ನಿರ್ಮಾಣ ಮಾಡಲಾದ ವಾಣಿವಿಲಾಸ ಜಲಾಶಯದ ಅಣೆಕಟ್ಟು ಸುರಕ್ಷತೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉಂಟಾಗಿದ್ದ ಆತಂಕ ಸಂಶಯ ನಿವಾರಣೆಗಾಗಿ ವಿಶ್ವೇಶ್ವರಯ್ಯ ನೀರಾವರಿ ನಿಗಮವು ಕೇರಳ ಮೂಲದ ಐರೋ ಟಿಕ್ನಾಲಜಿ ತಜ್ಞರ ನೆರೆವು ಪಡೆದು ಎರಡು ಕ್ಯಾಮೆರಾ ಹೊಂದಿರುವ ಜಲಾಂತರ್ಗಾಮಿ ಡ್ರೋಣ್ ಮೂಲಕ ಪರಿಶೀಲನಾ ಕಾರ್ಯ ಆರಂಭಿಸಿದೆ.
ಡ್ರೋಣ್ ಗೆ ಅಳವಡಿಸಿರುವ ಎರಡು ಕ್ಯಾಮೆರಾಗಳು ನೀರಿನ ಆಳಕ್ಕೆ ಇಳಿದು, ಅಣೆಕಟ್ಟೆಯ ಒಳಗೋಡೆಯ ಸ್ಥಿತಿಗತಿ ಕುರಿತು ಜಲಾಂತರ್ಗಾಮಿ ಡ್ರೋಣ್ ಕ್ಯಾಮೆರಾ ಸೆರೆ ಹಿಡಿದ ದೃಶ್ಯಗಳನ್ನು ಅಣೆಕಟ್ಟೆಯ ಮೇಲೆ ಕುಳಿತು ದಾಖಲಿಸುತ್ತಿದೆ.
ಅಲ್ಲದೆ ನೀರಿನ ತಳ ಮಟ್ಟದ ಒಂದು ತುದಿಯಿಂದ ಮತ್ತೊಂದು ತುದಿಯ ತನಕ ಸೆರೆ ಹಿಡಿಯುವ ಕಾರ್ಯ ಮಾಡಲಾಗುತ್ತಿದೆ.
ಅದು ಡ್ರೋನ್ ಕ್ಯಾಮೆರಾ ಸೆರೆಹಿಡಿಯುವ ದೃಶ್ಯಗಳನ್ನು ಅಣೆಕಟ್ಟೆಯ ಮೇಲೆ ಕುಳಿತಿರುವ ತಜ್ಞರು ಕಂಪ್ಯೂಟರ್ ನಲ್ಲಿ ದಾಖಲಿಸಿಕೊಳ್ಳುತ್ತಾರೆ. ಈ ಕಾರ್ಯಚರಣೆ ಶನಿವಾರದವರೆಗೆ ನಡೆಯಲಿದೆ. ನಂತರ ಕೊಚ್ಚಿನ್ ಗೆ ಮರಳುವ ತಂಡ, ಅಣ್ಣೆಕಟ್ಟೆ ಸುರಕ್ಷತೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ನೀಡಿಲಿದೆ ಎಂದು ವಿಶ್ವೇಶ್ವರಯ್ಯ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಮೌಳಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಾಣಿವಿಲಾಸ ಜಲಾಶಯ ಪ್ರಥಮ ಬಾರಿಗೆ 135 ಅಡಿ ದಾಟಿದ್ದರಿಂದ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂಬ ವದಂತಿ ಹಬ್ಬಿತ್ತು. ಅಣೆಕಟ್ಟೆಯ ಗೋಡೆಗಳ ಬಗ್ಗೆ ಅಣೆಕಟ್ಟು ರಕ್ಷಣಾ ಸಂಸ್ಥೆ ಅಧ್ಯಯನ ನಡೆಸಿ ವರದಿ ನೀಡಿತ್ತು. ಡ್ರೋನ್ ಸಮೀಕ್ಷೆಯಿಂದ ನಿಖರವಾದ ಮಾಹಿತಿ ತಿಳಿಯುತ್ತದೆ ಎಂಬ ಕಾರಣಕ್ಕೆ ಐರೋ ಟೆಕ್ನಾಲಜಿ ಬಳಸಿಕೊಳ್ಳಲಾಗುತ್ತದೆ ಎಂದು ಚಂದ್ರಮೌಳಿ ಹೇಳಿದರು.
ಅಣ್ಣೆಕಟ್ಟೆ ನಿರ್ಮಾಣ ತಜ್ಞ ಹಾಗೂ ನಿವೃತ್ತ ಚೀಫ್ ಎಂಜಿನಿಯರ್ ಎಸ್.ಬಿ.ಕೊಯಮತ್ತೂರ್, ಕರ್ನಾಟಕ ಎಂಜಿನಿಯರ್ಸ್ ರಿಸರ್ಚ್ ಸ್ಟೇಷನ್ ಮುಖ್ಯ ಎಂಜಿನಿಯರ್ ಮಹೇಶ್, ಅಣ್ಣೆಕಟ್ಟೆ ಸುರಾಕ್ಷ ಸಮಿತಿ ಸದಸ್ಯರಾದ ಕಮಲ ಶೇಖರನ್, ಭದ್ರಾ ಮೇಲ್ಕಂಡೆ ಯೋಜನೆ ಅಧೀಕ್ಷಕ ಶಿವಪ್ರಕಾಶ್ ನೇತೃತ್ವ ತಂಡ ಸೆಪ್ಟೆಂಬರ್ ೮ ರಂದು ವಾಣಿವಿಲಾಸ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುರಕ್ಷತೆ ಕುರಿತು ಹಲವು ಸಲಹೆ ಹಾಗೂ ಸೂಚನೆಗಳನ್ನು ನೀಡಲಾಗಿತ್ತು ಎನ್ನಲಾಗಿದೆ.