i
ವೇದಾಂತ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ, ಪದಾಯಾತ್ರೆಗೆ ಸಜ್ಜಾದ ಕಾಂಗ್ರೆಸ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾರ್ವಜನಿಕರ ವಿರೋಧದದ ನಡುವೆಯೂ, ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಅಕ್ರಮ ಗಣಿಗಾರಿಕೆಯಿಂದಾಗಿ ಸಾಕಷ್ಟು ಜನ ಜಾನುವಾರುಗಳಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೂ ತನ್ನ ಕಾರ್ಯ ಚಟುವಟಿಕೆಯನ್ನು ಕಾನೂನಾತ್ಮಕವಾಗಿ ಮಾಡದ ವೇದಾಂತ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದು ಇದರ ವಿರುದ್ದ ಉಗ್ರ ಹೋರಾಟ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ 20 ವರ್ಷಗಳಿಂದ ಮೈನಿಂಗ್ ಕಂಪನಿಯು ಅಕ್ರಮವಾಗಿ ಗಣಿಗಾರಿಕೆ ನಡೆಸಿಕೊಂಡು ಬರುತ್ತಿದ್ದು, ಯಾವುದೇ ಮನವಿಗೂ ಸ್ಪಂಧಿಸದೇ ಸರ್ಕಾರದ ಬೆಂಬಲದಿಂದ ಅಕ್ರಮ ನಡೆಸುತ್ತಾ ಬಂದಿದೆ. ಸರ್ಕಾರವು ಅವರಿಗೆ 164.79 ಎಕರೆ ಗಣಿಗಾರಿಕೆ ಮಾಡಲು ಅನುಮತಿ ನೀಡಿದ್ದು, ಅದನ್ನು ಹೊರತಾಗಿ ಸುಮಾರು 500 ಕ್ಕೂ ಹೆಚ್ಚು ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಜಿಲ್ಲಾ ನ್ಯಾಯಾಧೀಶರು ಅಕ್ರಮ ಗಣಿಗಾರಿಕೆ ಬಗ್ಗೆ ವರದಿ ಮಾಡಿದ್ದು ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಹಾಗೂ ಪ್ರತಿ ಲಾರಿ ಮಾಲೀಕರಿಂದ ಪ್ರತಿ ಟ್ರಿಪ್ಗೂ 800 ರಿಂದ 900 ರೂ.ಗಳನ್ನು ಅಕ್ರಮವಾಗಿ ಸುಲುಗೆ ಮಾಡುತ್ತಿದ್ದಾರೆ. ಇದರಿಂದ ಲಾರಿ ಮಾಲೀಕರಿಗೆ ಬರುವ ಆದಾಯವನ್ನು ಪ್ರಭಾವಿ ರಾಜಕಾರಣಿ ಜಿ.ಎಂ.ಸಿದ್ದೇಶ್ ಅವರು ಗೂಂಡಾಗಳನ್ನು ಬಿಟ್ಟು ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ವೇದಾಂತ ಕಂಪನಿ ಯಾವುದೇ ಹೊರ ಗುತ್ತಿಗೆ ನೀಡದೇ ಅವರದೇ ಲಾರಿಗಳನ್ನು ಉಪಯೋಗಿಸಿಕೊಂಡು ಸರ್ಕಾರದ ಬೆಂಬಲದಿಂದ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ಇದರಿಂದ ಚಿತ್ರದುರ್ಗ ಜಿಲ್ಲೆಯ ಸುಮಾರು 2 ಸಾವಿರ ಲಾರಿ ಮಾಲೀಕರ ಕುಟುಂಬ ಬೀದಿ ಬಿದ್ದಿದೆ ಎಂದು ಅವರು ದೂರಿದರು.
ವೇದಾಂತ ಮೈನಿಂಗ್ ಕಂಪನಿಯಲ್ಲಿ ಸುಮಾರು ೬ ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದು, ಅವರಿಗೆ ಯಾವುದೇ ತರಹದ ಆಸ್ಪತ್ರೆ, ಇ.ಎಸ್.ಐ, ಪಿ.ಎಫ್ ಕಾರ್ಮಿಕರ ಮೂಲ ಸೌಲಭ್ಯ ಕೊಡದೇ ವಂಚಿಸುತ್ತಾ ಬಂದಿದೆ. ಲಾರಿ ಮಾಲೀಕರು ಹಲವಾರು ಮನವಿಯನ್ನು ಜಿಲ್ಲಾಡಳಿತಕ್ಕೆ ಕೊಟ್ಟರು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಸರ್ಕಾರದ ಆದೇಶದಂತೆ ಒಂದು ಲಾರಿಯಲ್ಲಿ 7.50 ಟನ್ ಸಾಗಾಣಿಕೆ ಮಾಡಲು ಅನುಮತಿ ಇದ್ದರೂ ಅಕ್ರಮವಾಗಿ ಪ್ರಭಾವಿ ರಾಜಕಾರಣಿಗಳ ಲಾರಿಗಳ ಮುಖಾಂತರ 20-30 ಟನ್ ಹೆಚ್ಚುವರಿಯಾಗಿ ಸಾಗಿಸುವ ಮುಖಾಂತರ ಅಕ್ರಮ ಗಣಿಗಾರಿಕೆಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಯಾವುದೇ ಮೈನಿಂಗ್ ಕಂಪನಿಯಲ್ಲಿ ಒಳಗಡೆ ತನಿಖಾ ಠಾಣಾ ಇರಬೇಕಾಗಿರುತ್ತದೆ. ಆದರೆ ಇಲ್ಲಿ ಯಾವುದೇ ತನಿಖಾ ಠಾಣಾ ಇಲ್ಲದೇ ರ್ಯಾಕ್ ಮುಮೆಂಟ್ ನಡೆಯುತ್ತಿದೆ. ಹಾಗೂ 5 ಕಿ.ಮೀ ಅರಣ್ಯ ಜಾಗವನ್ನು ರಸ್ತೆಗಾಗಿ ಉಪಯೋಗಿಸಿರುವುದಾಗಿ ಕಂಡು ಬಂದಿದೆ. ಸುಮಾರು 22 ಹಳ್ಳಿಗಳು ಅಕ್ರಮ ಗಣಿಗಾರಿಕೆಯಿಂದ ವ್ಯವಸಾಯ ನಷ್ಟವಾಗಿದೆ. ಮೈನಿಂಗ್ ಗಣಿಗಾರಿಕೆಯಿಂದಾಗಿ ಅನೇಕ ಜನರ ಆರೋಗ್ಯದಲ್ಲಿ ದುಷ್ಪರಿಣಾಮ ಬೀರಿದ್ದು, ಖಾಯಿಲೆಯಿಂದ ನರಳುತ್ತಿದ್ದಾರೆ ಅಲ್ಲದೆ ಧೂಳು ತುಂಬಿದ ಮೇವು ತಿಂದ ಜಾನುವಾರುಗಳ ಆರೋಗ್ಯದಲ್ಲೂ ಸಾಕಷ್ಟು ಸಮಸ್ಯೆಗಳಾಗಿದ್ದು ಸಾವು ನೋವು ಆಗಿ ರೈತರು ಲಕ್ಷಾಂತರ ರೂ.ಗಳ ನಷ್ಟ ಅನುಭವಿಸಿ ಸಾಲದ ಹೊರೆಯಲ್ಲಿ ಸಿಲುಕಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸಬೇಕು, ಅಕ್ರಮ ಗಣಿಗಾರಿಕೆ ನಿಲ್ಲಸದಿದ್ದರೆ ರಾಜ್ಯಪಾಲರಿಗೆ ಮನವಿ ಮಾಡಿ ಚಿತ್ರದುರ್ಗದ ಭೀಮಸಮುದ್ರದ ವೇದಾಂತ ಮೈನ್ಸ್ರವರೆಗೆ ಬೃಹತ್ ಪಾದಯಾತ್ರೆ ಮಾಡಲು ನಿರ್ಧರಿಸಲಾಗಿದೆ. ಈ ಬೃಹತ್ ಪಾದಯಾತ್ರೆಗೆ ಚಿತ್ರದುರ್ಗ ಜಿಲ್ಲಾ ಲಾರಿ ಮಾಲೀಕರು ಹಾಗೂ ಕಾರ್ಮಿಕರು, ಜಿಲ್ಲಾ ಕಾಂಗ್ರೆಸ್ ಸಮಿತಿ ಬೆಂಬಲ ನೀಡಿದೆ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಉಚಿತ ಉದ್ಯೋಗ ಮೇಳ ಮತ್ತು ಉಚಿತ ಆರೋಗ್ಯ ಶಿಬಿರವನ್ನು ಇದೇ ತಿಂಗಳ ೨೪, ೨೫, ೨೬ ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಮಿಕ ವಿಭಾಗದಿಂದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ ತಿಳಿಸಿದರು.
ಗೋಷ್ಟಿಯಲ್ಲಿ ಜಿಲ್ಲಾ ಕಾರ್ಮಿಕ ವಿಭಾಗದ ಅಧ್ಯಕ್ಷ ಸೈಯದ್ ಮೊಹಿದ್ದೀನ್, ಲಾರಿ ಮಾಲಿಕರ ಸಂಘದ ಉಪಾಧ್ಯಕ್ಷ ಮಹಮ್ಮದ್ ಇಮ್ರಾನ್, ಜಂಟಿ ಕಾರ್ಯದರ್ಶಿ ಮಹಮ್ಮದ್ ಯೂಸಫ್, ಅಬ್ದುಲ್ ಖೂಯಂ, ರಾಜ್ಯ ಕಾರ್ಯದರ್ಶೀ ಶ್ರೀನಿವಾಸ್ ಸೇರಿದಂತೆ ಇತರರು ಭಾಗವಹಿಸಿದ್ದರು.