i
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಬಹುತೇಕ ಫೆ.10ರ ವೇಳೆಗೆ ಪ್ರಕಟಗೊಳ್ಳುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಮೂರ್ನಾಲ್ಕು ಮಂದಿಯನ್ನು ಹೊರತುಪಡಿಸಿ ಬಹುತೇಕ ಎಲ್ಲ ಹಾಲಿ ಶಾಸಕರು, ಜೆಡಿಎಸ್ನಿಂದ ಇನ್ನೂ ಕಾಂಗ್ರೆಸ್ ಸೇರದ 2-3 ಮಂದಿ ಶಾಸಕರು ಹಾಗೂ ಅತ್ಯಂತ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಫೆ.10ರೊಳಗೆ ಪ್ರಕಟಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಫೆ.2ರಂದು ಪ್ರದೇಶ ಚುನಾವಣಾ ಸಮಿತಿಯ ಸಭೆಯನ್ನು ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದು, ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಸಮಿತಿಯ 30 ಸದಸ್ಯರು ಚರ್ಚಿಸಿ 100ಕ್ಕೂ ಹೆಚ್ಚು ಮಂದಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಆಖೈರುಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾವಗಡದ ಹಾಲಿ ಶಾಸಕ ವೆಂಕಟರಮಣಪ್ಪ, ಅಫಜಲ್ಪುರದ ಎಂ.ವೈ.ಪಾಟೀಲ್ ಅವರು ತಮ್ಮ ಪುತ್ರರಿಗೆ ಟಿಕೆಟ್ ಕೇಳಿದ್ದಾರೆ. ಆದರೆ, ಎಲ್ಲರಿಗಿಂತ ವಯಸ್ಸಿನಲ್ಲಿ ಹಿರಿಯರಾದರೂ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ದಕ್ಷಿಣ ಕ್ಷೇತ್ರ ಹಾಗೂ ಅವರ ಪುತ್ರ ಮಲ್ಲಿಕಾರ್ಜುನ್ ದಾವಣಗೆರೆ ಉತ್ತರ ಕ್ಷೇತ್ರಗಳ ಟಿಕೆಟ್ಗೆ ಆಕಾಂಕ್ಷಿಯಾಗಿದ್ದು, ಈ ಇಬ್ಬರ ಹೆಸರು ಪಟ್ಟಿಸೇರಲಿದೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷ ಸೇರದಿರುವ ಜೆಡಿಎಸ್ನ ಶಾಸಕರಾದ ಗುಬ್ಬಿಯ ವಾಸು, ಅರಸೀಕೆರೆಯ ಶಿವಲಿಂಗೇಗೌಡ ಅವರ ಹೆಸರು ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯಲತೆಯಿದೆ ಎನ್ನಲಾಗಿದೆ. ಪಕ್ಷೇತರರಾದ ಶರತ್ ಬಚ್ಚೇಗೌಡ ಅವರಿಗೆ ಹೊಸಕೋಟೆ ಕ್ಷೇತ್ರದ ಟಿಕೆಟ್ ದೊರೆಯುವುದು ಖಚಿತ ಎನ್ನಲಾಗಿದೆ. ಮತ್ತೊಬ್ಬ ಪಕ್ಷೇತರ ನಾಗೇಶ್ ಅವರಿಗೂ ಪಕ್ಷದ ಟಿಕೆಟ್ ಲಭ್ಯ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.