i
ಭಿನ್ನತೆಯಲ್ಲಿ ಏಕತೆ ಸಾಧಿಸಿದ ರಾಷ್ಟ್ರ ಭಾರತ–ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಿನ್ನತೆಯಲ್ಲಿ ಏಕತೆಯ ಸಮ್ಮಿಲನದೊಂದಿಗೆ ಅಭೂತಪೂರ್ವ ಪ್ರಗತಿ ಸಾಧಿಸಿದ ರಾಷ್ಟ್ರ ಭಾರತವಾಗಿದೆ. ಸಂವಿಧಾನದಿಂದಾಗಿ ದೇಶಕ್ಕೆ ಭದ್ರ ಬುನಾದಿ ಲಭಿಸಿದೆ ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ 74ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮೈದಾನದಲ್ಲಿ ತೆರೆದ ಜೀಪಿನಲ್ಲಿ ಕವಾಯತು ತಂಡಗಳ ಬಳಿ ಸಾಗಿ, ಗೌರವವಂದನೆ ಸ್ವೀಕರಿಸಿದರು. ನಂತರ ಗಣರಾಜ್ಯೋತ್ಸವದ ಸಂದೇಶ ನೀಡುವ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿದ ಸಚಿವರು, ಸಂವಿಧಾನ ರಚನೆ ಪೂರ್ಣಗೊಳಿಸಲು 2 ವರ್ಷ 11 ತಿಂಗಳು ಬೇಕಾಯಿತು. ಈ ಸಂವಿಧಾನ 1950 ಜನವರಿ 26 ರಂದು ಜಾರಿಗೆ ಬಂದಿತು. ಇದರ ನೆನಪಿಗಾಗಿ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಅಚರಣೆ ಮಾಡಲಾಗುತ್ತಿದೆ. ನಮ್ಮದು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ, ಇಲ್ಲಿ ಪ್ರಜೆಗಳು ಆಳುವವರನ್ನು ಆಯ್ಕೆ ಮಾಡುತ್ತಾರೆ. ಈ ಮೂಲಕ ಪ್ರಜೆಗಳೇ ಸ್ವತಃ ಆಡಳಿತ ನಡೆಸುವ ಮಾದರಿ ದೇಶದಲ್ಲಿದೆ ಎಂದ ಸಚಿವರು, ವೀರ ಸಂಗೊಳ್ಳಿ ರಾಯಣ್ಣ ಒಬ್ಬ ದೇಶಭಕ್ತ, ಇಂತಹ ವೀರಯೋಧ ಬಲಿದಾನಗೊಂಡ ದಿನವೂ ಇದಾಗಿದೆ ಎಂದು ಸಂಗೊಳ್ಳಿ ರಾಯಣ್ಣರನ್ನು ಕೂಡ ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಚಿತ್ರದುರ್ಗ ಐತಿಹಾಸಿಕ ನಗರ, ವೀರಮದಕರಿ ಆಳಿದ ನಾಡು. ಇಲ್ಲಿನ ಒನಕೆ ಓಬವ್ವ ನಾಡಿಗೆ ಮಾದರಿಯಾಗಿದ್ದಾಳೆ. ದೇಶದ ಆರ್ಥಿಕತೆ ಅಭಿವೃದ್ಧಿ ಹೊಂದುತ್ತಿದ್ದು, ಕೋವಿಡ್ನಂತಹ ಮಹಾಮಾರಿಯಿಂದಾಗಿ ನಮ್ಮ ದೇಶ ಸವಾಲು ಎದುರಿಸಬೇಕಾಯಿತು. ಆದರೆ, ಇಂದು ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಶೀಘ್ರದಲ್ಲಿಯೇ ನಮ್ಮ ಆರ್ಥಿಕ ಪ್ರಗತಿ ವಿಶ್ವದಲ್ಲೇ 03 ನೇ ಸ್ಥಾನಕ್ಕೆ ಏರಲಿದೆ. ಕೋವಿಡ್ ಮಹಾಮಾರಿಗೆ ದೇಶದಲ್ಲಿ ಲಸಿಕೆ ಕಂಡುಹಿಡಿದು, ಹೊರದೇಶಗಳಿಗೂ ಲಸಿಕೆ ಸರಬಾರಾಜು ಮಾಡಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿ ಹೊಂದುತ್ತಿದ್ದು ಭದ್ರಾ ಮೇಲ್ದಂಡೆ ಯೋಜನೆ, ವೈದ್ಯಕೀಯ ವಿಜ್ಞಾನ ಕಾಲೇಜು, ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಯೋಜನೆ ಜಾರಿ ಗೊಳಿಸಲಾಗುತ್ತಿದೆ. ಸರ್ಕಾರದಿಂದ ರೈತರಿಗಾಗಿ ಹಲವು ಯೋಜನೆ ಹಾಕಿಕೊಳ್ಳಲಾಗಿದೆ. ರೈತ ವಿದ್ಯಾನಿಧಿ ಮೂಲಕ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಕೃಷಿ ವಿ.ವಿ ಗಳಲ್ಲಿ ರೈತರ ಮಕ್ಕಳಿಗೆ ಶೇ.50 ರಷ್ಟು ಸ್ಥಾನ ಮೀಸಲಿಡಲಾಗಿದೆ. ಹೆಣ್ಣು ಮಕ್ಕಳಿಗಾಗಿ ಸ್ತ್ರೀಸಾಮರ್ಥ್ಯ ಯೋಜನೆ ಜಾರಿಗೆ ಬರಲಿದ್ದು, ಪ್ರತಿ ಸಂಘಕ್ಕೆ 05 ಲಕ್ಷ ರೂ., ಸ್ವಾಮಿ ವಿವೇಕಾನಂದ ಯುವ ಸಾಮಥ್ರ್ಯ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತ್ನ ಯುವ ಸಂಘಗಳಿಗೆ ತಲಾ 05 ಲಕ್ಷ ರೂ. ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಇದೇ ಜ. 31 ರಂದು ಮುಖ್ಯಮಂತ್ರಿಗಳು ರೈತಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಗರಿಷ್ಠ 5 ಎಕರೆವರೆಗೆ ರೈತರು ಬಳಸುವ ಡೀಸೆಲ್ಗೆ ಸಹಾಯಧನ ಒದಗಿಸಲಾಗುವುದು. ಚಿತ್ರದುರ್ಗ ಜಿಲ್ಲೆಯಲ್ಲಿ 200 ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ರೈತರಿಗೆ ಪಹಣಿ ಸೇರಿದಂತೆ ಹಲವು ಸೇವೆಗಳನ್ನು ನೀಡಲಾಗುವುದು. ಆರೋಗ್ಯ ಸೇವೆ ಜನರಿಗೆ ತಲುಪಿಸಲು ನಮ್ಮ ಕ್ಲಿನಿಕ್ ತೆರೆಯಲಾಗಿದೆ. ಜಿಲ್ಲೆಯ ಕೆರೆಗಳನ್ನು ತುಂಬಿಸಿ ರೈತರ ಕಣ್ಣೀರು ಒರೆಸು ಕೆಲಸ ಮಾಡಲಾಗಿದೆ. ಜಿಲ್ಲೆಯ ಸಮಗ್ರ ಅಬಿವೃದ್ಧಿಗೆ ನಮ್ಮ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಆಕರ್ಷಕ ಪಥಸಂಚಲನ :
ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಈ ಬಾರಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಆರ್ಪಿಐ ಯುವರಾಜ್ ಎಸ್.ಎಸ್. ಪರೇಡ್ ಕಮಾಂಡರ್ ಅವರ ಮುಂದಾಳತ್ವದಲ್ಲಿ ಒಟ್ಟು 23 ತಂಡಗಳಿಂದ ಆಕರ್ಷಕ ಪಥಸಂಚಲನ ಜರುಗಿತು. ಪಿಎಸ್ಐ ಮಂಜುನಾಥ ಲಿಂಗಾರೆಡ್ಡಿ ನೇತೃತ್ವದಲ್ಲಿ ನಾಗರಿಕ ಪೊಲೀಸ್ ತುಕಡಿ, ತಿಪ್ಪೇಸ್ವಾಮಿ ನೇತೃತ್ವದಲ್ಲಿ ಗೃಹರಕ್ಷಕ ದಳ, ನಾಗರಾಜ್ ನೇತೃತ್ವದಲ್ಲಿ ಅಬಕಾರಿ ಇಲಾಖೆ, ಅರಣ್ಯ ಇಲಾಖೆ- ವಸಂತ, ಸರ್ಕಾರಿ ವಿಜ್ಞಾನ ಕಾಲೇಜು ಎನ್ಸಿಸಿ- ಸಹನಾ ಬಿ., ಸಂತ ಜೋಸೆಫ್ ಕಾನ್ವೆಂಟ್- ಮೋಹನಾಂಬ, ಆದಿಯಾ ರಜ್ವಿ, ವಿದ್ಯಾ ವಿಕಾಸ ಶಾಲೆ- ಧರಣಿ, ಗೂಳಯ್ಯನಹಟ್ಟಿ ಮೊರಾರ್ಜಿ ದೇಸಾಯಿ ಬಾಲಕಿಯರ ಪ್ರೌಢಶಾಲೆ- ಸಾಧನಾ, ಸಂತ ಜೋಸೆಫ್ ಇಂಗ್ಲೀಷ್ ಶಾಲೆ- ರಿತಿಕಾ, ಗಾರ್ಡಿಯನ್ ಏಂಜಲ್ ಶಾಲೆ- ಬಿಂದುಶ್ರೀ, ಪಾಶ್ರ್ವನಾಥ ಶಾಲೆ- ಊರ್ಮಿಳಾ, ಮೌಲಾನಾ ಆಜಾದ್ ವಸತಿ ಶಾಲೆ- ಫರ್ಮಾನ್, ಬಾಲಕರ ಸ.ಪ.ಪೂ. ಕಾಲೇಜು- ಬಸವರಾಜ ಎಂ., ವಿದ್ಯಾ ವಿಕಾಸ ಆಂಗ್ಲ ಪ್ರೌಢಶಾಲೆ- ಶ್ರೀರಾಮ, ಬಾಲಕಿಯರ ಸ.ಪ.ಪೂ. ಕಾಲೇಜು- ಶಾಫಿಯಾ, ವಾಸವಿ ಪ್ರೌಢಶಾಲೆ- ಭೂಮಿಕಾ, ಗೂಳಯ್ಯನಹಟ್ಟಿ ಬಾಲಕರ ಮೊರಾರ್ಜಿ ದೇಸಾಯಿ ವಸತಿ ಶಾಲೆ- ಗಣೇಶ್, ಡಾನ್ಬೋಸ್ಕೋ ಶಾಲೆ- ಚೇತನ್, ಜ್ಞಾನಭಾರತಿ ಶಾಲೆ- ಕಾರ್ತಿಕ್, ಮದಕರಿಪುರ ಶಾಲೆ ಭಾರತ ಸೇವಾ ದಳ- ಗೀತಶ್ರೀ ನೇತೃತ್ವದ ಕವಾಯತು ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿ ಗಮನ ಸೆಳೆದರು.