i
ಶಾಸಕ ತಿಪ್ಪಾರೆಡ್ಡಿ ಕೂಡಲೇ ತನಿಖೆಗೆ ಒಳಗಾಗಬೇಕು-ರಘುಆಚಾರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮೇಲೆ ಬಂದಿರುವ ಭ್ರಷ್ಟಾಚಾರ ಆರೋಪದಿಂದಾಗಿ ಇಡೀ ಮತದಾರರು ತಲೆ ತಗ್ಗಿಸುವಂತಾಗಿದ್ದು ಕೂಡಲೇ ಶಾಸಕರು ಸ್ವಯಂ ಆಗಿ ತನಿಖೆ ಮಾಡಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ನಾನು ಭ್ರಷ್ಟಾಚಾರ ಎಸಗಿಲ್ಲ ಎಂದು ಸಾಬೀತು ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಶಾಸಕ ಜಿ.ರಘು ಆಚಾರ್ ಒತ್ತಾಯಿಸಿದರು.
ಅವರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ತಿಪ್ಪಾರೆಡ್ಡಿ ಮೇಲೆ ಲಕ್ಷಾಂತರ ಮಂದಿ ನಂಬಿಕೆ ಇಟ್ಟು ಮತ ನೀಡಿದ್ದಾರೆ. ಆ ಎಲ್ಲ ಮತದಾರರ ಗೌರವ ಉಳಿಯಬೇಕಾದರೆ ಸಿಎಂ ಬಳಿಕೆ ಇವರೇ ಹೋಗಿ ತನಿಖೆ ಮಾಡಿಸುವಂತೆ ಒತ್ತಾಯಿಸಬೇಕು ಆಗ ಶಾಸಕರ ಮೇಲೆ ಗೌರವ ಹೆಚ್ಚುತ್ತದೆ ಎಂದು ಅವರು ಹೇಳಿದರು.
ಗಾಜಿನ ಮನೆಯಲ್ಲಿ ಕುಳಿತಿರುವ ಶಾಸಕರ ಬೆಂಬಲಿಗರಿಂದ ನನ್ನ ವಿರುದ್ಧ ಹೇಳಿಕೆ ಕೊಡಿಸಿದ್ದಾರೆ. ಶಾಸಕರೇ ನೇರವಾಗಿ ನಾನೇನು ತಪ್ಪು ಮಾಡಿಲ್ಲ ನಾನು ಪ್ರಮಾಣಿಕವಾಗಿದ್ದೇನೆ, ನಾನು ಭ್ರಷ್ಟಾಚಾರ ಎಸಗಿಲ್ಲ ಎಂದು ಹೇಳಿಕೆ ನೀಡಬೇಕಿತ್ತು. ಅದರ ಬಲಿಗೆ ಹಿಂಬಾಲಕರ ಮೂಲಕ ಉತ್ತರ ಕೊಡಿಸುವ ಕಾರ್ಯ ಮಾಡಿರುವುದು ಶಾಸಕರಿಗೆ ಶೋಭೆ ತರುವುದಿಲ್ಲ ಎಂದರಲ್ಲದೆ ಪುರಾತತ್ವ ಇಲಾಖೆ ಮಾರ್ಗಸೂಚಿ ಮತ್ತು ಕಾಯ್ದೆ ಪ್ರಕಾರ ಕೋಟೆ ಸುತ್ತ ಮುತ್ತ 100 ರಿಂದ 300 ಮೀಟರ್ ತನಕ ಯಾವುದೇ ರೀತಿಯ ಬೃಹತ್ ಕಟ್ಟಡ ನಿರ್ಮಾಣ ಮಾಡುವಂತಿಲ್ಲ, ಆದರೂ ಕೋಟೆಗಿಂತ ಎಚ್ಚರವಾಗಿ ಕಟ್ಟಡಗಳು ತಲೆ ಎತ್ತಿ ನಿಂತಿವೆ, ಶಾಸಕರು ಏಕೆ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ರಘು ಆಚಾರ್ ಹೆಲಿಕ್ಯಾಪ್ಟರ್ ಮೂಲಕ ಬಂದು ಹೋಗುತ್ತಾನೆ, ಯಾವ ಹಳ್ಳಿಗೆ ಆತ ಭೇಟಿ ನೀಡಿದ್ದಾನೆ ಎಂದು ಶಾಸಕರು ನನ್ನ ವಿರುದ್ಧ ಟೀಕಿಸಿದ್ದಾರೆ, ಖಂಡಿತ ನಾನು ಹೆಲಿಕ್ಯಾಪ್ಟರ್ ನಲ್ಲೇ ಓಡಾಡಿದ್ದೇನೆ, ಅದು ನನ್ನ ಇಷ್ಟ, ಅಲ್ಲದೆ ಆರೋಗ್ಯ ಸಮಸ್ಯೆಯಿಂದಾಗಿ ಓಡಾಡುತ್ತಿದ್ದೇನೆ. ನಾನು ಎಲ್ಲೂ ಭ್ರಷ್ಟಾಚಾರ ಎಸಗಿಲ್ಲ, ಲಂಚಕ್ಕೆ ಬೇರೊಬ್ಬರಿಗೆ ಕೈ ಮುಂದೆ ಚಾಚಿಲ್ಲ, ಪ್ರತಿ ವಾರ್ಡ್, ಹಳ್ಳಿಗಳಿಗೆ ಬರುತ್ತೇನೆ, ಶಾಸಕರು ಏನು ಅಭಿವೃದ್ಧಿ ಕಾರ್ಯ ಮಾಡಿದ್ದಾರೆಂದು ಹೇಳಲಿ, ಶಾಸಕರು ಮಾಡಿಸಿರುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ತನಿಖೆಗೆ ಒಳಪಡಿಸಬೇಕು, ಇದರ ಜೊತೆಯಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಶಾಸಕರು ಭ್ರಷ್ಟಾಚಾರ ಎಸಗಿದ್ದಾರೆಂದು ಆರೋಪಿಸಲಾಗುತ್ತಿದ್ದು ಈ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ರಘು ಆಚಾರ್ ಶಾಸಕರಿಗೆ ತಿರುಗೇಟು ನೀಡಿದರು.
ಫೆ.7ರೊಳಗೆ ಶಾಸಕರು ಸ್ವಯಂ ಪ್ರೇರಣೆಯಿಂದ ಹಾಲಿ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರಿಂದ ಸಮಗ್ರ ತನಿಖೆಗೆ ಒಳಗಾಗಬೇಕು, ಅವರು ಯಾವುದೇ ತಪ್ಪು ಮಾಡಿಲ್ಲ ಎನ್ನುವುದಾದರೆ ತನಿಖೆ ಮಾಡಿಸಲು ಏಕೆ ಹಿಂದೇಟು ಎಂದು ಪ್ರಶ್ನಿಸಿದ ಅವರು ನಂತರ ನಾನೇ ಪ್ರತಿ ಹಳ್ಳಿಗೂ ಭೇಟಿ ನೀಡಿ ಶಾಸಕರ ಭ್ರಷ್ಟಾಚಾರ ಕುರಿತು ಮತದಾರರಲ್ಲಿ ಹೇಳುತ್ತೇನೆಂದು ತಿಳಿಸಿದರು.
ನಾನು ಎರಡು ಸಲ ನಿಂತು ಗೆದ್ದಿದ್ದೇನೆ, ನನ್ನ ರಾಜಕೀಯ ಜೀವನ ಚಿತ್ರದುರ್ಗವೇ ಆಗಿರುತ್ತದೆ. ನಾನು ಕ್ಲೀನ್ ಇದ್ದೇನೆ ಎಂದರು.
35-40 ವರ್ಷಗಳ ರಾಜಕೀಯ ರಂಗದಲ್ಲಿರುವ ತಿಪ್ಪಾರೆಡ್ಡಿ ಅವರು ಎಷ್ಟು ಸಲ ಅಸೆಂಬ್ಲಿಯಲ್ಲಿ ಮಾತನಾಡಿದ್ದಾರೆ, ಯಾವ ವಿಷಯ ಕುರಿತು ಗಂಭೀರ ಚರ್ಚೆ ಮಾಡಿದ್ದಾರೆ, ನಾನು ಎರಡು ಸಲ ಗೆದ್ದಿದ್ದರೂ ಅಸೆಂಬ್ಲಿಯಲ್ಲಿ ನಾನು ಮಾತನಾಡಿದ್ದೇನೆ ಎಂದ ರಘು ಆಚಾರ್ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ ಎಂದು ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್ ಪೀರ್ ಮಾತನಾಡಿ, ಶಾಸಕ ತಿಪ್ಪಾರೆಡ್ಡಿ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿದ್ದರೂ ಬಿಜೆಪಿ ಪಕ್ಷ ಅವರ ಬೆನ್ನಿಗೆ ನಿಂತಿಲ್ಲ, ಒಮ್ಮೆಯೂ ಹೇಳಿಕೆ ನೀಡಿಲ್ಲ, ಇದನ್ನ ನೋಡಿದರೆ ಶಾಸಕರು ತಪ್ಪು ಮಾಡಿದ್ದಾರೆ ಎನ್ನುವ ಅನುಮಾನ ಬಲವಾಗುತ್ತಿದೆ ಎಂದು ದೂರಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮುಖಂಡ ಓ.ಶಂಕರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.