i
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೊದಲು ತಮ್ಮ ಕುಟುಂಬ ಸಮಸ್ಯೆ ಬಗೆಹರಿಸಿಕೊಳ್ಳಲಿ-ಎಚ್ ಡಿಕೆ…
ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಹಾಸನದಲ್ಲಿ ಟಿಕೆಟ್ ಗಾಗಿ ಕುಟುಂಬದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಯನ್ನೇ ನಿರ್ವಹಿಸಲಾಗದವರು ರಾಜ್ಯವನ್ನು ಹೇಗೆ ನಿರ್ವಹಿಸುತ್ತಾರೆ ಎಂಬ ಹೇಳಿಕೆ ನೀಡಿದ್ದು ಆ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡಿ, ಮೊದಲು ಜೋಶಿಯವರು ತಮ್ಮ ಕುಟುಂಬದ ಸಮಸ್ಯೆ ಬಗೆಹರಿಸಿಕೊಳ್ಳಲಿ. ಪ್ರಹ್ಲಾದ್ ಜೋಶಿಯವರಿಗೆ ತಮ್ಮ ಸಹೋದರನನ್ನೇ ನೆಟ್ಟಗೆ ಇಟ್ಟುಕೊಳ್ಳಲು ಆಗಿಲ್ಲ. ಜೋಶಿಯವರ ಕುಟುಂಬದಲ್ಲಿಯೇ ಅಸಮಾಧಾನಗಳಿವೆ. ಹೀಗಿರುವಾಗ ಅವರೇನು ನಮಗೆ ಹೇಳುವುದು? ಎಂದು ಜೋಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಜೋಶಿ ಸಹೋದರ ಕರೆ ಮಾಡಿ ಜೋಶಿಯವರ ಅಕ್ರಮದ ಬಗ್ಗೆ ದಾಖಲೆಗಳನ್ನು ಕೊಡುವುದಾಗಿ ಹೇಳುತ್ತಿದ್ದಾರೆ. ಮೊದಲು ಅವರ ಕುಟುಂಬದ ಸಮಸ್ಯೆ ಬಗೆಹರಿಸಿಕೊಳ್ಳಲಿ. ಜನರ ಸಮಸ್ಯೆಗೆ ಸ್ಪಂದಿಸಲು ನಮ್ಮ ಕುಟುಂಬ ಹೋರಾಟ ನಡೆಸುತ್ತಿದೆ. ರಾಮಾಯಣ, ಮಹಾಭಾರತದಲ್ಲಿಯೂ ಹೋರಾಟಗಳು ನಡೆದಿವೆ. ಇದು ನಮ್ಮ ಸಂಸ್ಕೃತಿ. ಬದಲಾಯಿಸಲು ಸಾಧ್ಯವಿಲ್ಲ. ದೇವೇಗೌಡರ ಕುಟುಂಬ ಜನರ ಸೇವೆಗಾಗಿ ಹೋರಾಡುತ್ತಿದೆ ಎಂದು ಎನ್ನುವುದನ್ನು ವಿರೋಧಿಗಳು ಮರೆಯಬಾರದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.