i
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಚಂದ್ರಮ್ಮ ನಿಧನ…
ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಹೊಸದುರ್ಗದ ಗೊರವಿನಕಲ್ಲು ಚಂದ್ರಮ್ಮ(80) ವಯೋ ಸಹಜ ಕಾಯಿಲೆಯಿಂದ ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
1943ರಲ್ಲಿ ಜನಿಸಿದ ಚಂದ್ರಮ್ಮ ಸುದೀರ್ಘವಾಗಿ 80 ವರ್ಷ ಪೂರೈಸಿ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಸ್ವಗ್ರಾಮ ಗೊರವಿನಕಲ್ಲು ಗ್ರಾಮದ ಮನೆಯಲ್ಲಿ ಪಾರ್ಥಿವ ಶರೀರ ನೋಡಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮದ ಸಮೀಪದ ತೋಟದಲ್ಲಿ ಮಧ್ಯಾಹ್ನ 12ಗಂಟೆಗೆ ಅಂತ್ಯಕ್ರಿಯೆ ನೆರವೇರಲಿರಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಗ್ರಾಮೀಣ ಭಾಗ ಸೇರಿದಂತೆ ನಾಡಿನ ವಿವಿಧಡೆ ನಡೆದ ಕಾರ್ಯಕ್ರಮಗಳಲ್ಲಿ ಹಲವು ವರ್ಷಗಳಿಂದ ಮದುವೆ ಹಾಡುಗಳನ್ನು ಹಾಡುತ್ತಿದ್ದ ತಾಲೂಕಿನ ಗೊರವಿನಕಲ್ಲು ಗ್ರಾಮದ ಜಾನಪದ ಕಲಾವಿದೆ ಚಂದ್ರಮ್ಮ ಅವರ ಪ್ರತಿಭೆ ಗುರುತಿಸಿ 2021ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಲಾಗಿತ್ತು. ಬಡತನದ ಕುಟುಂಬವಿದ್ದರೂ ಜಾನಪದ ಕಲೆಗಳಲ್ಲಿ ಶ್ರೀಮಂತರು ಚಂದ್ರಮ್ಮ ಅವರು. ಬಾಲ್ಯದಿಂದಲೇ ಮದುವೆ ಹಾಡುಗಳನ್ನು ಹೇಳುವುದನ್ನು ಕಲಿತ್ತಿದ್ದರು. ಅವರ ತಂದೆ, ತಾಯಿ, ಅಣ್ಣ ಸಾಕಷ್ಟು ಜಾನಪದ ಹಾಡುಗಳನ್ನು ಹೇಳುತ್ತಿದ್ದರು. ಹಾಗಾಗಿ ಅವರ ಜೊತೆ ಮದುವೆ, ದೇವರನಾಮ ಸೇರಿದಂತೆ ಶುಭ ಕಾರ್ಯಗಳಲ್ಲಿ ಹಾಡುಗಳನ್ನು ಹಾಡುತ್ತಾ ಕಲಿತ್ತಿದ್ದರು. ಚಿಕ್ಕಂದಿನಿಂದಲೇ ಲಯಬದ್ದವಾಗಿ ಜಾನಪದ ಗೀತೆಗಳನ್ನು ಹಾಡುವುದನ್ನು ಕಲಿತಿದ್ದ ಚಂದ್ರಮ್ಮ, ಯಾರೇ ಕಾರ್ಯಕ್ರಮಕ್ಕೆ ಕರೆದರೂ ಹೋಗಿ ಹಾಡುತ್ತಿದ್ದದ್ದು ಅವರಲ್ಲಿನ ವಿಶೇಷತೆ.
ಒಂದಿನವಾದರೂ ಶಾಲೆ ಮುಖ ನೋಡದ ಚಂದ್ರಮ್ಮ, ಓದು ಬರಹ ಬರುತ್ತಿರಲಿಲ್ಲ. ಮಕ್ಕಳಿಗೆ ಮದುವೆ ಪದಗಳನ್ನು ಕಲಿಸುವ ಇಚ್ಚೆ ಉಳ್ಳವರಾಗಿದ್ದರು. ಆದರೆ ಕಲಿಯಲು ಇಂದಿನ ಮಕ್ಕಳಿಗೆ ಸಮಯ ಮತ್ತು ಆಸಕ್ತಿಯಿಲ್ಲ. ಗೊರವಿನಕಲ್ಲು ಗ್ರಾಮದಲ್ಲಿ ಶ್ರೀರಾಮಂಜನೇಯ ಭಜನಾ ಮಂಡಳಿಯ ಕಂಬದ ನರಸಿಂಹಸ್ವಾಮಿ ದೇವಸ್ಥಾನ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಸೇರಿ ಹಾಡುವ ಮೂಲಕ ಭಕ್ತಿ ಸಮರ್ಪಿಸುವ ಸಂಪ್ರದಾಯ ಬೆಳೆಸಿಕೊಂಡಿದ್ದರು. ಒಟ್ಟಾರೆ ಚಂದ್ರಮ್ಮ ಅವರ ಸಾಧನೆಗೆ ಸೆಲ್ಯೂಟ್ ಮತ್ತು ನಿಧನಕ್ಕೆ ಚಿರಶಾಂತಿ ದೊರೆಯಲಿ ಎಂದು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.