i
ಯಾರದೋ ಬದುಕಿನ ತೆವಲುಗಳೊಳಗೆ ನಾವು ಬಂಧಿಯಾಗಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯಾರದೋ ಬದುಕಿನ ತೆವಲುಗಳೊಳಗೆ ನಾವು ಬಂಧಿಯಾಗಿ……….
2023 ವರ್ಷ ಆರಂಭವಾಗಿ ಇಲ್ಲಿಗೆ ಸುಮಾರು 70 ದಿನವಾಯಿತು. ಅಷ್ಟೂ ದಿನಗಳಲ್ಲಿ ಕರ್ನಾಟಕದ ಮಾಧ್ಯಮ ಲೋಕ, ಮುಖ್ಯವಾಗಿ ಎಲೆಕ್ಟ್ರಾನಿಕ್ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ ಸುದ್ದಿಗಳ ಕೇಂದ್ರ ಬಿಂದುಗಳು……..
ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಜೆ ಪಿ ನಡ್ಡಾ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡ, ಡಿ ಕೆ ಶಿವಕುಮಾರ್, ಬೊಮ್ಮಾಯಿ, ರಮೇಶ್ ಜಾರಕಿಹೊಳೆ, ಲಕ್ಷ್ಮಿ ಹೆಬ್ಬಾಳ್ಕರ್, ಭವಾನಿ ರೇವಣ್ಣ, ಡಿ ಕೆ ಸುರೇಶ್, ಅಶ್ವಥ್ ನಾರಾಯಣ್, ಸ್ಯಾಂಟ್ರೋ ರವಿ, ರೋಹಿಣಿ ಸಿಂಧೂರಿ, ರೂಪ ಮುದ್ಗಲ್, ಭವಾನಿ ರೇವಣ್ಣ, ಸುಮಲತಾ, ಸೋಮಣ್ಣ, ನಾರಾಯಣ ಗೌಡ, ಪ್ರತಾಪ್ ಸಿಂಹ, ಮಾಡಾಳ್ ವಿರೂಪಾಕ್ಷಪ್ಪ ಮತ್ತು ಇದೇ ರೀತಿಯ ಇನ್ನೂ ಕೆಲವು ಹೆಸರುಗಳು ಮಾತ್ರ. ಬಹುಶಃ 100 ಇರಬಹುದು.
ಅದನ್ನು ಇಡೀ ರಾಜ್ಯದ ಅತ್ಯಂತ ಪ್ರಮುಖ ಸುದ್ದಿ ಎಂದು ಪ್ರಸಾರ ಮಾಡಿದ ಪುಣ್ಯಾತ್ಮರು ಮುಖ್ಯವಾಗಿ ಪಬ್ಲಿಕ್ ಟಿವಿಯ ರಂಗನಾಥ್, ಸುವರ್ಣ ಟಿವಿಯ ಅಜಿತ್ ಹನುಮಕ್ಕನವರ್, ಟಿವಿ 9 ರಂಗನಾಥ್ ಭಾರದ್ವಾಜ್, ಟಿವಿ 5 ರಮಾಕಾಂತ್ , ಬಿಟಿವಿಯ ರಾಧಾ ಹಿರೇಗೌಡರ್, ಪವರ್ ಟಿವಿಯ ಚಂದನ್ ಶರ್ಮ, ನ್ಯೂಸ್ 18 ನ ನಿಖಿಲ್ ಜೋಷಿ, ದಿಗ್ವಿಜಯದ ಹರೀಶ್ ನಾಗರಾಜ್, ವಿಸ್ತಾರದ ಹರಿಪ್ರಕಾಶ್, ನ್ಯೂಸ್ ಫಸ್ಟ್ ಮತ್ತು ಇನ್ನೂ ಕೆಲವರು. ಸುಮಾರು 50 ಜನ ಇರಬಹುದು……
ಇಷ್ಟು ಬೆರಳೆಣಿಕೆಯಷ್ಟು ಜನರು ಮಾತ್ರ ಸುದ್ದಿಯನ್ನು ಹುಟ್ಟು ಹಾಕಿ, ಸುದ್ದಿಯನ್ನು ಪ್ರಸಾರ ಮಾಡಿ, ಅದಕ್ಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ರಾಜ್ಯದ ಹಿತಾಸಕ್ತಿಯ ನೆಪದಲ್ಲಿ ವೈಯಕ್ತಿಕ ಲಾಭ ಮಾಡಿಕೊಂಡು ಸುಖವಾಗಿ ಜೀವನ ಮಾಡುತ್ತಿದ್ದಾರೆ…..
ಒಂದಷ್ಟು ಮನರಂಜನೆ, ಇನ್ನೊಂದಿಷ್ಟು ಹಾಸ್ಯ, ಮತ್ತೊಂದಿಷ್ಟು ಜನರನ್ನು ಹೊರತುಪಡಿಸಿದರೆ ಇಡೀ ರಾಜ್ಯದ ಆಗುಹೋಗುಗಳು ಇವರ ಸುತ್ತಲೇ ಸುತ್ತುತ್ತಿದೆ ಎಂಬ ಭ್ರಮೆ ಸೃಷ್ಟಿಸಲಾಗಿದೆ. ಜೊತೆಗೆ ಇತರ ಕೋಟಿ ಕೋಟಿ ಜನರನ್ನು ನಿರ್ಲಕ್ಷಿಸಲಾಗಿದೆ.
ತಾಪಮಾನದ ಏರಿಳಿತಗಳಿಂದ, ಧೂಳಿನ ಕಣಗಳಿಂದ, ನೀರಿನಲ್ಲಿ ಬೆರೆಯುತ್ತಿರುವ ರಾಸಾಯನಿಕಗಳಿಂದ, ಆಹಾರದ ಕಲಬೆರಕೆಗಳಿಂದ ಮನುಷ್ಯರ ದೇಹದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಇವರಲ್ಲಿ ಯಾರೊಬ್ಬರೂ ಗಂಭೀರವಾಗಿ ಚರ್ಚಿಸುತ್ತಿಲ್ಲ……
ತಾಲ್ಲೂಕು ಮಟ್ಟದಲ್ಲೂ ವ್ಯಾಪಿಸುತ್ತಿರುವ, ಯುವಜನರ ಪಾಲಿಗೆ ಘೋರ ದುರಂತವಾಗಿ ಪರಿಣಮಿಸಿರುವ ಮಾದಕದ್ರವ್ಯಗಳ ವಿಷಯಗಳು ಇವರಿಗೆ ಮುಖ್ಯವಾಗುತ್ತಿಲ್ಲ…..
ಅಲ್ಲಿ ನೋಡಿ ತನ್ನ ಕಣ್ಣ ಮುಂದೆಯೇ ಮಗಳು ನೀರಿನಲ್ಲಿ ಕೊಚ್ಚಿ ಹೋಗಿ ಎರಡು ವರ್ಷವಾದರೂ ಇನ್ನೂ ಅಳುತ್ತಿರುವ ಆ ತಾಯಿಯನ್ನು…….ಮದುವೆಯಾಗಿ 6 ತಿಂಗಳಿಗೇ ಗಂಡ ಅಪಘಾತದಲ್ಲಿ ತೀರಿ ಹೋದದ್ದರಿಂದ ಇನ್ನೂ ಅಳುತ್ತಿರುವ ಆ ಹೆಣ್ಣನ್ನು…….
3 ಮತ್ತು 5 ವರ್ಷದ ಇಬ್ಬರೂ ಮಕ್ಕಳು ತಂದೆ ತಾಯಿಗಳನ್ನು ಕೊರೋನಾ ವೈರಸ್ ನಿಂದ ಕಳೆದುಕೊಂಡು ಅನಾಥರಾಗಿ ರೋದಿಸುತ್ತಿರುವ ಆ ಮಕ್ಕಳನ್ನು…….
ಇಳಿವಯಸ್ಸಿನಲ್ಲಿ ತನಗೆ ಅನ್ನ ಹಾಕುತ್ತಿದ್ದ ಒಬ್ಬನೇ ಮಗ ಕ್ಯಾನ್ಸರಿನಿಂದ ಸತ್ತ ನೆನಪಿನಲ್ಲಿ ದುಃಖಿಸುತ್ತಿರುವ ತಂದೆ ತಾಯಿಯನ್ನು……
ಅಲ್ಲಿ ನೋಡಿ, ಬಸ್ ನಿಲ್ದಾಣದಲ್ಲಿ ರಾತ್ರಿಯ ಮಳೆ ಚಳಿ ಗಾಳಿ ಬಿಸಿಲಿಗೆ ತತ್ತರಿಸಿ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಅಪರಿಚಿತ ನಗರದಲ್ಲಿ ಹಸಿವಿನಿಂದ ಪರಿತಪ್ಪಿಸುತ್ತಿರುವ ಹಳ್ಳಿಯಿಂದ ಗುಳೆ ಬಂದ ಅಲೆಮಾರಿ ರೈತ ಕುಟುಂಬವನ್ನು…….
ಬೀದಿ ಬದಿಯಲ್ಲಿ ಅಲಂಕಾರ ಮಾಡಿಕೊಂಡು ತನ್ನ ದೇಹವನ್ನು ಹಣಕ್ಕೆ ಮಾರಿಕೊಂಡು ಹಿಂಸೆ ನರಕಯಾತನೆ ಅನುಭವಿಸಿ ತನ್ನ ಮಕ್ಕಳನ್ನು ಸಾಕಲು ಶ್ರಮಪಡುತ್ತಿರುವ ಮಹಿಳೆಯರನ್ನು………
ರಾತ್ರಿ ಹನ್ನೆರಡಾದರು ಇನ್ನೂ ಗಿರಾಕಿಗಳು ತಿಂದು ಕುಡಿದ ಎಂಜಲು ಎಲೆಗಳನ್ನು, ತಟ್ಟೆಗಳನ್ನು ಎತ್ತುತ್ತಾ ಅವರಿಂದ ಅವಮಾನಕರ ಮಾತುಗಳನ್ನು ಕೇಳುತ್ತಾ, ತಮ್ಮ ಹಸಿವನ್ನು ನುಂಗಿಕೊಂಡು ದುಡಿಯುತ್ತಿರುವ ಆ ಎಳೆಯ ಬಾಲ ಕಾರ್ಮಿಕರನ್ನು…..
ಇನ್ನೂ ಎಷ್ಟು ಬೇಕು ಕೇಳಿ ಸ್ವಾಮಿ ಹೇಳುತ್ತಾ ಹೋಗುತ್ತೇನೆ……..ಮನೆ ಬಾಡಿಗೆ ಕಟ್ಟದ, ಮಕ್ಕಳ ಶಾಲೆಯ ಫೀಜು ತುಂಬದ, ಖಾಯಿಲೆಗೆ ಚಿಕಿತ್ಸೆ ಪಡೆಯಲು ಹಣವಿಲ್ಲದ, ನಿರುದ್ಯೋಗದಿಂದ ಪರಿತಪ್ಪಿಸುತ್ತಿರುವ ಎಷ್ಟೋ ಜನ, ಅದೆಷ್ಟೋ ಘಟನೆಗಳು ಈಗಲೂ ನಮ್ಮ ಕಣ್ಣ ಮುಂದೆಯೇ ಇದೆ.
ಬೆಲೆ ಏರಿಕೆಯಿಂದ ಕೊರಗುತ್ತಿರುವ, ಪ್ರಜಾಪ್ರಭುತ್ವದ ಮೂಲ ಆಶಯಗಳು ಸಾಯುತ್ತಿರುವ, ಅಪೌಷ್ಟಿಕತೆಯಿಂದ ನರುಳುತ್ತಿರುವ, ಭ್ರಷ್ಟಾಚಾರದಿಂದ ಬಳಲುತ್ತಿರುವ ಅನೇಕ ಮೂಲಭೂತ ಸಮಸ್ಯೆಗಳ ಸುತ್ತ ಸುದ್ದಿಗಳನ್ನು ಕೇಂದ್ರೀಕರಿಸದೆ ಯಾವುದೋ ವ್ಯಕ್ತಿಗಳ ಹುಚ್ಚಾಟಗಳನ್ನು, ಪಕ್ಷಾಂತರಗಳನ್ನು, ಸೀಡಿಗಳನ್ನು, ದ್ವೇಷದ ಮಾತುಗಳನ್ನು, ಅಸೂಯೆಯ ಜಗಳಗಳನ್ನು ಸುದ್ದಿ ಮಾಡುತ್ತಾ ದೇಶದ ಮತ್ತು ರಾಜ್ಯದ ಇಡೀ ಸಾಂಸ್ಕೃತಿಕ ವಾತಾವರಣವನ್ನು ಕಲುಷಿತಗೊಳಿಸುತ್ತಿರುವುದಲ್ಲದೇ ನಾಶವನ್ನು ಮಾಡುತ್ತಿದ್ದಾರೆ…….. ದಯವಿಟ್ಟು ಎಚ್ಚರಗೊಳ್ಳಿ. ಕೆಲವೇ ಜನರ ಬದುಕಿನ ತೆವಲಿಗಾಗಿ ನಾವು ಹುಟ್ಟಿಲ್ಲ, ಬದುಕುತ್ತಿಲ್ಲ, ಸಾಯುವುದು ಬೇಡ. ಪ್ರತಿ ವ್ಯಕ್ತಿಯ ಹುಟ್ಟು ಸ್ವತಂತ್ರ ಮತ್ತು ಅಮೂಲ್ಯ. ಸ್ವಾಭಿಮಾನದಿಂದ ಬದುಕನ್ನು ರೂಪಿಸಿಕೊಳ್ಳೋಣ……
ಒಬ್ಬ ವ್ಯಕ್ತಿ, ಒಂದು ಕುಟುಂಬ, ಒಂದು ಪಕ್ಷ ನಮಗೆ ಮುಖ್ಯವಾಗಬಾರದು. ಎಲ್ಲಕ್ಕಿಂತ ಹೆಚ್ಚು ನಮ್ಮ ಬದುಕು, ನಮ್ಮ ಖುಷಿ ನಮಗೆ ಮುಖ್ಯವಾಗಬೇಕು. ಅದೇ ಅಂತಿಮ ಸತ್ಯ. ಅದಕ್ಕಾಗಿ ಸದಾ ಜಾಗೃತರಾಗಿ ಇರಬೇಕಾದ ಸಾಮಾಜಿಕ ವಾತಾವರಣದಲ್ಲಿ ನಾವಿದ್ದೇವೆ. ಒಂದಷ್ಟು ಯೋಚಿಸಿ. ಮತ್ತಷ್ಟು ತಿರಸ್ಕರಿಸಿ……..
ಜಗವೆಲ್ಲ ನಗುತಿರಲಿ, ಜಗದಳವು ನನಗಿರಲಿ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…