i
ಒಕ್ಕಲಿಗರ ನಡೆ ಕಾಂಗ್ರೆಸ್ ಕಡೆ ಯಾಕೆ? ಕಾಂಗ್ರೆಸ್ ಪಡಸಾಲೆಯಲ್ಲಿ ಪೂರ್ಣಿಮಾ ಜಪ, ಹಿರಿಯೂರು ಕಾಂಗ್ರೆಸ್ ಟಿಕೆಟ್ ಯಾರಿಗೆ?…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ವಿವಿಧ ರಾಜಕೀಯ ಪಕ್ಷಗಳು ಬಲಿಷ್ಠ ಮತ್ತು ಗೆಲ್ಲುವ ಸಾಮರ್ಥ್ಯ ಇರುವಂತ ಅಭ್ಯರ್ಥಿಗಳಿಗೆ ಗಾಳ ಹಾಕುತ್ತಿವೆ. ಶತಗತಾಯ 2023ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯಬೇಕು ಎನ್ನುವ ಒಂದೇ ಕಾರಣಕ್ಕಾಗಿ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್ ಈ ಮೂರು ಪಕ್ಷಗಳು ಪಕ್ಷದ ತತ್ವ, ಸಿದ್ದಾಂತಗಳಿಗೆ ತಿಲಾಂಜಲಿ ನೀಡಿ ಅನುಕೂಲ ಸಿಂಧು ರಾಜಕಾರಣಕ್ಕೆ ಮುಂದಾಗಿವೆ.
ರಾಷ್ಟ್ರೀಯ ಪಕ್ಷಗಳಲ್ಲೂ ಬಲಿಷ್ಠ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ಅದಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜೆಡಿಎಸ್ ಪಕ್ಷದ ಹಾಲಿ ಶಾಸಕರಿಗೆ ಗಾಳ ಹಾಕಿ ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತಿವೆ. ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಸೆಡ್ಡೊಡೆದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಟಿಕೆಟ್ ವಂಚಿತ ನಾಯಕರಿಗೆ ಮಣೆ ಹಾಕಲು ಸರ್ವ ಸಿದ್ಧತೆ ಮಾಡುತ್ತಿರುವುದು ಯಾವುದು ಗುಟ್ಟಾಗಿ ಉಳಿದಿಲ್ಲ.
ಇನ್ನೂ ಹಿರಿಯೂರು ವಿಧಾನಸಭಾ ಕ್ಷೇತ್ರವು 2008 ರಿಂದ ಸಾಮಾನ್ಯ ಕ್ಷೇತ್ರವಾಗಿ ರೂಪಗೊಂಡನಂತರ ಎರಡು ಬಾರಿ ಜಯಭೇರಿ ಭಾರಿಸಿದ್ದ ಮಾಜಿ ಸಚಿವ ಡಿ.ಸುಧಾಕರ್ ಗೆ ಪೂರ್ಣಿಮಾ ಶ್ರೀನಿವಾಸ್ ಚೆಳ್ಳೆಹಣ್ಣು ತಿನ್ನಿಸಿ ಸುಧಾಕರ್ ಅವರ ಹ್ಯಾಟ್ರಿಕ್ ಜಯಕ್ಕೆ ಕಡಿವಾಣ ಹಾಕಿದ್ದು ಇತಿಹಾಸ.
ಇನ್ನೂ ಪೂರ್ಣಿಮಾ ಶ್ರೀನಿವಾಸ್ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಒಂದಿಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ 2023ರ ಚುನಾವಣೆಯಲ್ಲಿ ನನ್ನನ್ನೂ ಅಷ್ಟು ಸುಲಭವಾಗಿ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ಈಗಾಗಲೇ ಕ್ಷೇತ್ರದಲ್ಲಿ ರವಾನೆ ಮಾಡಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಪೂರ್ಣಿಮಾ ಮತ್ತು ಸುಧಾಕರ್ ವಿರುದ್ಧ ನೇರಾ ಹಣಾಹಣಿ ಇದೆ. ಇಲ್ಲಿ ಇನ್ನೂ ಜೆಡಿಎಸ್ ಟಿಕೆಟ್ ಯಾರಿಗೆಂದು ತೀರ್ಮಾನ ಆಗಿಲ್ಲ, ಕೆಲ ಆಂತರೀಕ ಸಮೀಕ್ಷೆಗಳು ಪೂರ್ಣಿಮಾ ಮತ್ತು ಸುಧಾಕರ್ ಅವರುಗಳು ಮುಂದಿದ್ದಾರೆಂದು ಹೇಳುತ್ತಿವೆ. ಆದರೆ ವಾಸ್ತವದಲ್ಲಿ ಇಬ್ಬರಿಗೂ ಸೋಲಿನ ಅಂಜಿಕೆ ಇದ್ದೆ ಇದೆ.
ಕಾಂಗ್ರೆಸ್ ಅಂಗಳದಲ್ಲಿ ಪೂರ್ಣಿಮಾ ಜಪ-
ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನವಾದ ಮೇಲೆ ಹಸಿದ ಹೆಬ್ಬುಲಿಯಂತೆ ಮಾಜಿ ಸಚಿವ ಡಿ.ಸುಧಾಕರ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿಸಿರುವ ಕೀರ್ತಿ ಇದೇ ಸುಧಾಕರ್ ಗೆ ಇದೆ. ಆದರೂ ಇವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲೇ ಭಿನ್ನಾಭಿಪ್ರಾಯ ಏಕೆ ಎನ್ನುವ ಪ್ರಶ್ನೆ ಎದ್ದಿದೆ. ಕಾಂಗ್ರೆಸ್ ಪಕ್ಷ ಮಾಡಿಸಿದ ಆಂತರೀಕ ಸಮೀಕ್ಷೆಯಲ್ಲಿ ಸುಧಾಕರ್ ಅವರಿಗೆ ಸೋಲು ಗ್ಯಾರಂಟಿನಾ ಅಥವಾ ಡಿಕೆ ಶಿವಕುಮಾರ್ ಅಪ್ಪಟ ಶಿಷ್ಯ ಎನ್ನುವ ಕಾರಣಕ್ಕೆ ಬೇರೊಬ್ಬ ಅಭ್ಯರ್ಥಿ ಹೆಸರು ಅದರಲ್ಲೂ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೆಸರು ಕಾಂಗ್ರೆಸ್ ಕೋರ್ ಕಮಿಟಿಯಲ್ಲಿ ಪ್ರಸ್ತಾಪವಾಗಿದ್ದು ಏಕೆ, ಸಿದ್ದರಾಮಯ್ಯ, ಡಾ.ಪರಮೇಶ್ವರ್ ಮತ್ತಿತರರು ಹಿರಿಯೂರು ಕ್ಷೇತ್ರಕ್ಕೆ ಪೂರ್ಣಿಮಾ ಶ್ರೀನಿವಾಸ್ ಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದರು ಎನ್ನಲಾಗುತ್ತಿದ್ದು ಈ ಸನ್ನಿವೇಶ ಸೃಷ್ಠಿಯಾಗಲು ಕಾರಣ ಯಾರು, ಅಥವಾ ಪೂರ್ಣಿಮಾ ಶ್ರೀನಿವಾಸ್ ಅವರೇ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲ್ಲ, ಕಾಂಗ್ರೆಸ್ ಟಿಕೆಟ್ ನೀಡಲಿ ಎಂದು ಕಾಂಗ್ರೆಸ್ ನಾಯಕರಲ್ಲಿ ಕೋರಿಕೊಂಡಿದ್ರಾ ಇತ್ಯಾದಿ ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ.
ಆದರೆ ಡಿ.ಕೆ.ಶಿವಕುಮಾರ್ ಮಾತ್ರ ಯಾರು ಎಷ್ಟೇ ಹೇಳಿದರೂ ಡಿ.ಸುಧಾಕರ್ ಅವರೇ ಹಿರಿಯೂರು ಕಾಂಗ್ರೆಸ್ ಅಭ್ಯರ್ಥಿ, ಬೇರೆ ಯಾವುದೇ ಚರ್ಚೆ ಮಾಡುವುದು ಬೇಡ, ಹಿರಿಯೂರು ಕ್ಷೇತ್ರದಲ್ಲಿ ನಾನೇ ಸ್ಪರ್ಧೆ ಮಾಡಿದಂತೆ ಎನ್ನುವ ವಿಷಯವನ್ನು ಕೋರ್ ಕಮಿಟಿಯಲ್ಲಿ ಮುಂದಿಟ್ಟ ಮೇಲೆ ಸಿದ್ದರಾಮಯ್ಯ, ಪರಮೇಶ್ವರ್ ಎಲ್ಲರೂ ಸುಮ್ಮನಾದರು ಎನ್ನುವ ಮಾಹಿತಿ ಮಾಧ್ಯಮಗಳಿಗೆ ಲಭ್ಯವಾಗುತ್ತಿವೆ.
ಕುಂಚಿಟಿಗ ಅಲಿಯಾಸ್ ಒಕ್ಕಲಿಗರ ನಡೆ ಕಾಂಗ್ರೆಸ್ ಕಡೆ ಯಾಕೆ?…
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿರುವ ಕುಂಚಿಟಿಗ ಅಲಿಯಾಸ್ ಒಕ್ಕಲಿಗ ಮುಖಂಡರು ಕುಂಚಿಟಿಗ ಒಕ್ಕಲಿಗರ ನಡೆ ಕಾಂಗ್ರೆಸ್ ಕಡೆ ಎನ್ನುವ ಸ್ಲೋಗನ್ ಹಾಕಿಕೊಂಡು ಸಭೆ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರ.
ಆದರೆ ಕುಂಚಿಟಿಗ ಅಲಿಯಾಸ್ ಒಕ್ಕಲಿಗರ ನಡೆ ಕಾಂಗ್ರೆಸ್ ಕಡೆ ಯಾಕೆ ಎನ್ನುವ ಅಂಶವನ್ನು ಕಾಂಗ್ರೆಸ್ ಪಕ್ಷವೇ ಉತ್ತರ ನೀಡಬೇಕು. ಮೊದಲಿಗೆ ಕುಂಚಿಟಿಗ ಜಾತಿಯವರು ಒಕ್ಕಲಿಗರಲ್ಲ ಎನ್ನುವ ಸತ್ಯವನ್ನು ಮೂರು ರಾಜಕೀಯ ಪಕ್ಷಗಳು ತಿಳಿದುಕೊಳ್ಳಬೇಕು. ಆದರೆ ರಾಜಕೀಯ ನಾಯಕರು ಮತ್ತು ಪಕ್ಷಗಳು ಕುಂಚಿಟಿಗ ಜಾತಿಯನ್ನು ಒಕ್ಕಲಿಗ ಜಾತಿಯ ಉಪ ಜಾತಿ ಎನ್ನುವಂತೆ ಬಿಂಬಿಸಿಕೊಂಡು ಕುಂಚಿಟಿಗ ಜಾತಿಯ ಅಸ್ಮಿತೆಗೆ ಧಕ್ಕೆ ತಂದಿರುವುದಷ್ಟೇ ಅಲ್ಲ ಕುಂಚಿಟಿಗರನ್ನ ಮತ ಬ್ಯಾಂಕ್ ಮಾಡಿಕೊಂಡು ಶೋಷಿಸಲಾಗುತ್ತಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕುಂಚಿಟಿಗ ಜಾತಿಯವರಿದ್ದಾರೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಹೊರೆತು ಪಡಿಸಿದರೆ ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ಮತ್ತು ಚಿತ್ರದುರ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು ಮತದಾರರಿದ್ದಾರೆ. ಆದರೂ ಇಡೀ ಜಿಲ್ಲೆಯಲ್ಲಿ ಒಂದೇ ಒಂದು ಟಿಕೆಟ್ ಅನ್ನು ಕುಂಚಿಟಿಗ ಜಾತಿಗೆ ಕಾಂಗ್ರೆಸ್ ಪಕ್ಷ ಕಳೆದ 40-50 ವರ್ಷಗಳಿಂದ ನೀಡಿಲ್ಲ ಮತ್ತು ನೀಡುತ್ತಲ್ಲೂ ಇಲ್ಲ. ಸ್ವಾತಂತ್ರ್ಯ ನಂತರದ ಆರಂಭಿಕ ಚುನಾವಣೆಯಲ್ಲಿ ವಿ.ಮಸಿಯಪ್ಪ ಅವರಿಗೆ ಬಿಟ್ಟರೆ ಮತ್ತೆಂದೂ ಕಾಂಗ್ರೆಸ್ ಪಕ್ಷ ಕುಂಚಿಟಿಗ ಜಾತಿಗೆ ಮಣೆ ಹಾಕಿಲ್ಲ. ಅದೂ ಹೋಗಲಿ ಕನಿಷ್ಠ 2ನೇ ಸಾಲಿನ(ದರ್ಜೆ) ಕುಂಚಿಟಿಗ ಜಾತಿಯ ನಾಯಕರನ್ನು ಯಾರೊಬ್ಬರು ಬೆಳೆಸಿಲ್ಲ ಎನ್ನುವುದಕ್ಕಿಂತ ಬೆಳೆಯಲು ಬಿಟ್ಟಿಲ್ಲ ಎನ್ನುವುದೇ ಸತ್ಯ.
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 40-50 ಮತಗಳಿರುವ ಜೈನ ಸಮುದಾಯದ ಡಿ.ಸುಧಾಕರ್ ಅವರ ಮೇಲೆ ಡಿಕೆಶಿ ಅವರಿಗೆ ಅಷ್ಟೊಂದು ಪ್ರೀತಿ ಇದ್ದರೆ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ಡಿ.ಕೆ.ಶಿವಕುಮಾರ್ ಗೆಲ್ಲಿಸಲಿ, ಕ್ಷೇತ್ರದಲ್ಲಿ ಸುಮಾರು 40 ಸಾವಿರದಷ್ಟು ಮತದಾರರಿರುವ ಕುಂಚಿಟಿಗ ಜಾತಿಗೆ ಕಾಂಗ್ರೆಸ್ ಪಕ್ಷ ಏಕೆ ರಾಜಕೀಯ ಶೋಷಣೆ(ಅನ್ಯಾಯ) ಮಾಡುತ್ತಿದೆ, ಹಿರಿಯೂರು ಮೀಸಲು ವಿಧಾನಸಭಾ ಆಗಿದ್ದ ಸಂದರ್ಭದಲ್ಲಿ ಕುಂಚಿಟಿಗರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಕೆಹೆಚ್ ರಂಗನಾಥ್ ಅವರನ್ನು ನಿರಂತರವಾಗಿ ಗೆಲ್ಲಿಸುತ್ತಿದ್ದ ಜಾತಿಗಳಲ್ಲಿ ಕುಂಚಿಟಿಗ ಜಾತಿಯೂ ಒಂದು ಎನ್ನುವುದನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ, ಮೀಸಲು ಕ್ಷೇತ್ರ ಹೋಗಿ ಸಾಮಾನ್ಯ ಕ್ಷೇತ್ರವಾಗಿ 20 ವರ್ಷಗಳಾಗುತ್ತಿದೆ. ಅಂದರೆ ಮೂರು ಚುನಾವಣೆಗಳು ಮುಗಿದಿದ್ದು ನಾಲ್ಕನೆ ವಿಧಾನಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಾಮಾನ್ಯ ಕ್ಷೇತ್ರವಾದರೂ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕುಂಚಿಟಿಗರಿಗೆ ಏಕೆ ಟಿಕೆಟ್ ಕೊಟ್ಟು ಗೆಲ್ಲಿಸುತ್ತಿಲ್ಲ, ಕುಂಚಿಟಿಗ ಜಾತಿಗೆ ಸ್ವಾಭಿಮಾನ ಇಲ್ಲವೇ, ರಾಜಕೀಯ ನಾಯಕರಿಗೆ ಜೈ ಜೈ ಎನ್ನುವ ಪರಿಪಾಠವನ್ನು ಕುಂಚಿಟಿಗ ಸಮಾಜ ಬಿಟ್ಟು ಸ್ವಾಭಿಮಾನದಿಂದ ಬದುಕುವಂತೆ ಕುಂಚಿಟಿಗ ಸಮಾಜದ ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.
ಕುಂಚಿಟಿಗ ಜಾತಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟು ಕುಂಚಿಟಿಗ ಅಲಿಯಾಸ್ ಒಕ್ಕಲಿಗರ ನಡೆ ಕಾಂಗ್ರೆಸ್ ಕಡೆಗೆ ಎಂದು ಸ್ಲೋಗನ್ ಹಾಕಿಕೊಂಡು ಹೋಗಲಿ, ಅದು ಬಿಟ್ಟು ಕುಂಚಿಟಿಗ ಜಾತಿ ಏನು ಕಾಂಗ್ರೆಸ್ ಪಕ್ಷಕ್ಕೆ ಅಡ ಬಿದ್ದಿಲ್ಲ, ಅದರಲ್ಲೂ ಹಿರಿಯೂರು ಅಥವಾ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಕುಂಚಿಟಿಗರಿಗೆ ಏನು ರಾಜಕೀಯ ಸ್ಥಾನಮಾನ, ಸೌಲಭ್ಯ ನೀಡಿದೆ ಎನ್ನುವುದನ್ನು ಶ್ವೇತ ಪತ್ರ ಹೊರಡಿಸಲಿ ಎನ್ನುವುದು ಕುಂಚಿಟಿಗರ ಪ್ರಶ್ನೆಯಾಗಿದೆ.
ಹಿರಿಯೂರು ಒಕ್ಕಲಿಗರ ನಡೆ ಡಿಕೆ ಕಡೆ ಅಥವಾ ಕಾಂಗ್ರೆಸ್ ಪಕ್ಷದ ಕಡೆ ಆಗಲಿ, ಏಕೆಂದರೆ ಒಕ್ಕಲಿಗ ಮಹಾ ನಾಯಕರಾದ ದೇವೇಗೌಡರು, ಕುಮಾರಸ್ವಾಮಿ ಅವರು ಈಗಾಗಲೇ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳಾಗಿದ್ದಾರೆ. ಡಿಕೆ ಶಿವುಕುಮಾರ್ ಕೂಡಾ ಮುಖ್ಯಮಂತ್ರಿ ಆಗಲಿ ಎನ್ನುವುದು ಹಿರಿಯೂರು ಒಕ್ಕಲಿಗರ ಕೂಗಾಗಿದೆ. ಆದರೆ ಹಿರಿಯೂರು ಸಾಮಾನ್ಯ ಕ್ಷೇತ್ರವಾಗಿ ಮೂರು ಅವಧಿ ಕಳೆದಿದ್ದು ನಾಲ್ಕನೇ ಅವಧಿಗೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಾದರೂ ಹಿರಿಯೂರು ಒಕ್ಕಲಿಗರಿಗೆ ಅಥವಾ ಮೂಲ ಕುಂಚಿಟಿಗರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟು ಒಕ್ಕಲಿಗರ ನಡೆ ಡಿಕೆ ಅಥವಾ ಕಾಂಗ್ರೆಸ್ ಕಡೆ ಎನ್ನಲಿ. ಡಿಕೆ ಶಿವಕುಮಾರ್ ಅವರು ಇಂದು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಅವರು ಮನಸು ಮಾಡಿದರೆ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಮಂಜು ರಾಕ್ ಮಾಲೀಕ ಬಿ.ಎಚ್.ಮಂಜುನಾಥ್ ಅಥವಾ ಗನ್ನಾಯಕನಹಳ್ಳಿ ಆರ್.ಮಂಜುನಾಥ್ ಅವರು ಸೇರಿದಂತೆ ಇತರೆ ಯಾವುದೇ ಕುಂಚಿಟಿಗ ಅಲಿಯಾಸ್ ಒಕ್ಕಲಿಗರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಳ್ಳಲಿ. ಆಗ ಒಕ್ಕಲಿಗರ ನಡೆ ಡಿಕೆ ಆದರೂ ಆಗಲಿ ಅಥವಾ ಕಾಂಗ್ರೆಸ್ ಪಕ್ಷದ ಕಡೆಯಾದರೂ ಆಗಲಿ. ಇದರ ಬಗ್ಗೆ ಕುಂಚಿಟಿಗ ಅಲಿಯಾಸ್ ಒಕ್ಕಲಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.