i
ಇ-ಸ್ವತ್ತು ಸರಳೀಕರಣ ಮಾಡಲು ಸಮಗ್ರ ಬದಲಾವಣೆ ತರುತ್ತಿರುವ ಪೌರಾಡಳಿತ ನಿರ್ದೇಶಕರು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ವಿವಿಧ ನಗರಸಭೆ, ಪುರಸಭೆ, ಪಪಂಗಳು ಸೇರಿದಂತೆ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ಮಾಲೀಕರು, ತಮ್ಮ ಆಸ್ತಿಗಳಿಗೆ ಇ-ಆಸ್ತಿ ನಮೂನೆ -3 ಪಡೆಯುವುದು ದುಸ್ಸಾಹಸವಾಗಿದ್ದು ಇದನ್ನು ಸರಳೀಕರಣ ಮಾಡಲು ಪೌರಾಡಳಿತ ನಿರ್ದೇಶಕರು ಮುಂದಾಗುವ ಮೂಲಕ ಅತ್ಯುತ್ತಮ ಕಾರ್ಯ ಮಾಡಿದ್ದಾರೆಂದು ಎಲ್. ನಾರಾಯಣಾಚಾರ್ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅನಗತ್ಯ ಅಲೆದಾಟವನ್ನು ತಪ್ಪಿಸಲು ಪೌರಾಡಳಿತ ನಿರ್ದೇಶಕರಾದ ಎನ್.ಮಂಜುಶ್ರೀ ಅವರು ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ ಇವರ ಸಹಯೋಗದೊಂದಿಗೆ ಮಹತ್ವದ ಸುಧಾರಣೆ ತರಲು ಮುಂದಾಗಿದ್ದಾರೆ. ಅಧಿಕೃತ ಮತ್ತು ಅನಧಿಕೃತ ಆಸ್ತಿಗಳಿಗೆ ಇ-ಆಸ್ತಿ ಉತಾರ ಒದಗಿಸಲು ಕ್ರಮ ವಹಿಸಿದ್ದು ಇದೊಂದು ಕ್ರಾಂತಿಕಾರಕ ಬದಲಾವಣೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2001-02ರ ಪೂರ್ವದಲ್ಲಿ ಡಿ.ಸಿ.ಬಿ. ರಿಜಿಸ್ಟರ್ ಇತ್ತು. 2002-03 ನಂತರ ಸ್ವಯಂಘೋಷಿತ ಆಸ್ತಿ-ತೆರಿಗೆ ಪದ್ದತಿ ಜಾರಿಗೆ ಬಂದ ಮೇಲೆ ಡಿ.ಸಿ.ಬಿ. ರಿಜಿಸ್ಟರ ಇಲ್ಲದೇ ಕೆ.ಎಂ.ಎಫ್-24 ಸರಿಯಾಗಿ ನಿರ್ವಹಿಸದೇ ಇದ್ದ ಕಾರಣ ಯಾರು ಎಷ್ಠು ತೆರಿಗೆ ಪಾವತಿಸಿದ್ದಾರೆ, ಎಷ್ಟು ಬಾಕಿ ಇದೆ ಎಂಬುದನ್ನು ಗುರುತಿಸಲಾಗದ ಪರಿಸ್ಥಿತಿಗೆ ನಗರ ಸ್ಥಳೀಯ ಸಂಸ್ಥೆಗಳು ಬಂದಿದ್ದವು. ಅನಧೀಕೃತ ಕಟ್ಟಡದ ಮಾಲೀಕರಿಗೆ ನಗರ ಸ್ಥಳೀಯ ಸಂಸ್ಥೆಗಳು ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದರೂ ಸಹ, ಅವರಿಂದ ತೆರಿಗೆ ಪಾವತಿಸಿಕೊಳ್ಳಲು ವಿಫಲರಾಗಿದ್ದರು. ನೂತನ ವ್ಯವಸ್ಥೆ ಜಾರಿಗೆ ಬಂದ ನಂತರ ಪ್ರತಿಯೊಬ್ಬ ಆಸ್ತಿಗಳ ಮಾಲೀಕರಿಗೂ ವಿಶಿಷ್ಠ ಸಂಖ್ಯೆ ನೀಡಲಿದ್ದು, ತಾಲೂಕು ಕಛೇರಿಗಳಲ್ಲಿ ಪಹಣಿ ಪಡೆಯುವ ರೀತಿಯಲ್ಲಿ ನಾಗರೀಕರು ಇ-ಆಸ್ತಿ ಉತಾರಗಳನ್ನು ಪಡೆಯಬಹುದಾಗಿರುತ್ತದೆ. ಈ ಮಹತ್ವದ ಬದಲಾವಣೆ ತರುತ್ತಿರುವ ಪೌರಾಡಳಿತ ನಿರ್ದೇಶಕರಿಗೂ ಹಾಗೂ ಜಂಟಿ ನಿರ್ದೇಶಕರು ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ ಬೆಂಗಳೂರು ಇವರಿಗೆ ಸಮಸ್ತ ನಾಗರೀಕರ ಪರವಾಗಿ ಎಲ್.ನಾರಾಯಣಾಚಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಲಭ್ಯ ಮಾಹಿತಿಯ ಪ್ರಕಾರ, ಕರ್ನಾಟಕ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ “ಆಸ್ತಿ ಕಣಜ” ತಂತ್ರಾಂಶದಲ್ಲಿ ಆಸ್ತಿಗಳ ನೋಂದಣಿ ಕೆಲಸವು ಭರದಿಂದ ಸಾಗುತ್ತಿದ್ದು, ಹಗಲು ರಾತ್ರಿ ಎನ್ನದೆ ಎಲ್ಲ ಪೌರ ನೌಕರರು ಶ್ರಮಿಸುತ್ತಿರುವುದು ತಿಳಿದುಬಂದಿದೆ, ಆದರೆ ಅತೀ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುವ ಇವರು ಅತೀ ಸೂಕ್ಷ್ಮವಾದ ನಾಗರಿಕರ ಆಸ್ತಿಗಳ ವಿವರಗಳನ್ನು ದಾಖಲಿಸುವಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪ್ರಮಾದಗಳಾಗುವ ಸಾಧ್ಯತೆಯಿದ್ದು, ಆದ್ದರಿಂದ ಇವರಿಗೂ ಸಹ ಒತ್ತಡದ ಜೊತೆಗೆ ಸೂಕ್ತ ಕಾಲಾವಕಾಶ ಒದಗಿಸುವುದೂ ಸಹ ಸೂಕ್ತವೆನಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಆಸ್ತಿ ಕಣಜ ತಂತ್ರಾಂಶದಲ್ಲಿ ಈಗ ಗಣಕೀಕರಣಗೊಳಿಸುತ್ತಿರುವ ಆಸ್ತಿಗಳ ವಿವರಗಳು, ಸಾರ್ವಜನಿಕರಿಂದ ಕೇವಲ ತೆರಿಗೆ ಸಂಗ್ರಹಿಸಲು ಮಾತ್ರ ಸೀಮಿತವಾಗದೇ, ಸಾರ್ವಜನಿಕರ ಅವಶ್ಯಕತೆಗಳಾದ ಮನೆಯಲ್ಲಿಯೇ ಕುಳಿತು ತೆರಿಗೆ ತುಂಬಲು, ಅವರ ಆಸ್ತಿಯ ನಮೂನೆ -3 ಪಡೆಯಲು, ಆಸ್ತಿ ಮಾಲೀಕತ್ವ ಬದಲಾವಣೆ ಮುಂತಾದ ಸೇವೆಗಳನ್ನು ನಾಗರೀಕರು ಮನೆಯಲ್ಲಿಯೇ ಕುಳಿತು ಪಡೆಯಲು ಶ್ರಮಿಸುತ್ತಿರುವುದು ಸ್ವಾಗತಾರ್ಹವಾಗಿದೆ.
ಈ ಹಿಂದೆ ಇದ್ದಂತೆ, ಆಸ್ತಿ ತೆರಿಗೆ ಲೆಕ್ಕ ಹಾಕಲು ಒಂದು ತಂತ್ರಾಂಶ, ತೆರಿಗೆ ಪಾವತಿಸಲು ಒಂದು ತಂತ್ರಾಂಶ, ಆ ತೆರಿಗೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಒಂದು ತಂತ್ರಾಂಶ, ನಮೂನೆ -3 ಪಡೆಯಲು ಮತ್ತೊಂದು ತಂತ್ರಾಂಶ ಹೀಗೆ ಪೌರ ನೌಕರರ ಮೇಲೆ ವೃಥಾ ಹೊರೆ ಮಾಡದೇ, ನಾಗರಿಕರಿಗೂ ಕಾಲಹರಣ ವಾಗದೇ ಒಂದೇ ಸೂರಿನಡಿ ಎಲ್ಲ ಸೇವೆ ಸೌಲಭ್ಯಗಳು ದೊರೆಯುವಂತೆ ಒಂದು ಸದೃಢ ವ್ಯವಸ್ಥೆ ಕಲ್ಪಿಸುವ ಪೌರಾಡಳಿತ ನಿರ್ದೇಶಕರಾದ ಎನ್.ಮಂಜುಶ್ರೀ ಇವರನ್ನು ಕರ್ನಾಟಕ ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್. ನಾರಾಯಣಾಚಾರ್ ಹಿರಿಯೂರು ಅಭಿನಂದನೆಗಳನ್ನು ತಿಳಿಸಿದ್ದಾರೆ.