i
ಕೋವೇರಹಟ್ಟಿಯಲ್ಲಿ ನಡೆದಿರುವ ಕೊಲೆಯನ್ನು ಸಿಓಡಿ ತನಿಖೆಗೆ ವಹಿಸಿ- ಗ್ರಾಪಂ ಸದಸ್ಯೆ ರಾಧಾ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋವೇರಹಟ್ಟಿಯಲ್ಲಿ ನಡೆದಿರುವ ವ್ಯವಸ್ಥಿತ ಕೊಲೆಯನ್ನು ಸಿಓಡಿ ತನಿಖೆಗೆ ವಹಿಸಿ ತಪ್ಪಿತಸ್ಥ ಇಬ್ಬರು ಯುವಕರಿಗೆ ಶಿಕ್ಷೆ ಕೊಡಿಸಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಮೃತ ಯುವಕ ಧನರಾಜ್ ಅತ್ತೆ ರಾಧಾ ಆಗ್ರಹಿಸಿದರು. ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದ್ದ ಮೂರು ಸ್ನೇಹಿತರಲ್ಲಿ ಕೊಲೆ ಮಾಡಿದವರು ಯಾರು ಎನ್ನುವ ಸತ್ಯ ಅರಿಯಬೇಕಾದರೆ ಕೂಡಲೇ ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಿ ಕೊಲೆ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಬೇಕು, ಐಮಂಗಲ ಪೊಲೀಸ್ ಠಾಣೆಯಲ್ಲಿ ಮೃತ ಯುವಕನ ಕುಟುಂಬಕ್ಕೆ ನ್ಯಾಯ ದೊರೆಯುವ ಸಾಧ್ಯತೆ ತೀರಾ ಕಮ್ಮಿ ಇದೆ ಎಂದು ಅವರು ಆತಂಕ ವ್ಯಕ್ತ ಪಡಿಸಿದರು.
ಮೃತ ಧನರಾಜ್ ನನ್ನ ಅಳಿಯನಾಗಬೇಕಿದ್ದು ಆತನ ಸ್ನೇಹಿತರಾದ ನಮ್ಮೂರಿನವರೇ ಆದ ಇಬ್ಬರು ಯುವಕರಾದ ಕಿಶೋರ್ ಮತ್ತು ಪ್ರದೀಪ್ ಅವರ ಕ್ಷಣ ಕ್ಷಣದ ಹೇಳಿಕೆಗಳು ಗೊಂದಲದಿಂದ ಕೂಡಿವೆ. ಅಲ್ಲದೆ ಇತ್ತೀಚೆಗೆ 400 ಅಡಿಕೆ ಮರಗಳನ್ನು ಈ ಇಬ್ಬರು ಯುವಕರು ಕಡಿದಿದ್ದರು. ಈ ಸತ್ಯವನ್ನು ಪೊಲೀಸರ ಬಳಿ ಬಾಯಿ ಬಿಡುವುದಾಗಿ ಹೇಳಿದ್ದ ಧನರಾಜ್ ನನ್ನು ಈ ಇಬ್ಬರು ಯುವಕರು ಕೊಲೆ ಮಾಡಿರುವ ಸಾಧ್ಯತೆ ಹೆಚ್ಚಾಗಿದೆ. ಈ ಸಾವು ಸಾಮಾನ್ಯವಾದ ಸಾವಲ್ಲ ಇದು ದುರುದ್ದೇಶ ಪೂರ್ವಕವಾಗಿ ಮಾಡಿದ ಕೂಲೆಯಾಗಿದೆ. ಧನರಾಜ್ ಮೃತ ಪಟ್ಟಾಗ ದೇಹದ ಮೇಲೆ ಕಲೆಯಾಗಿರಲಿಲ್ಲ, ನೀರಿನಲ್ಲಿ ಮುಳುಗಿದ್ದರೂ ದೇಹದ ಯಾವ ಭಾಗದಲ್ಲೂ ನೀರು ತುಂಬಿಕೊಂಡು ಊತ ಬಂದಿರಲಿಲ್ಲ ಸಾಮಾನ್ಯ ಮೃತ ದೇಹದಂತೆ ಇದ್ದು ಕೊಲೆ ಮಾಡಿ ನೀರಿಗೆ ಎಸೆದಿದ್ದಾರೆ, ಅಲ್ಲದೆ ನೀರಿನಲ್ಲಿ ಮುಳುಗಿ ಸತ್ತ ಎಂದು ನಂಬಿಸಲು ಕೆರೆಯಲ್ಲಿ ಈಜಾಡುವುದನ್ನು ವಿಡಿಯೋ ಮಾಡಿರುವುದು ಸಾವಿಗೆ ಮತ್ತಷ್ಟು ಅನುಮಾನ ಬರಲು ಕಾರಣವಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಈ ಕೂಡಲೇ ಸಿಓಡಿಗೆ ತನಿಖೆ ವಹಿಸಬೇಕು ಎಂದು ರಾಧಾ ಆಗ್ರಹ ಮಾಡಿದರು.
ಕೋವೇರಹಟ್ಟಿಯ ಅಮರ ಗೌಡ ಮಾತನಾಡಿ, ಮೃತನಾಗಿರುವ ಧನರಾಜ್ ನನ್ನ ಮೊಮ್ಮಗನಾಗಿದ್ದು ಈತನ ಸಾವು ಸಹಜವಾಗಿಲ್ಲ, ಅದೊಂದು ಸಂಚಿನ ಕೊಲೆಯಾಗಿದ್ದು ಇದರ ಬಗ್ಗೆ ಪೋಲಿಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಅರೋಪಿಗಳಿಗೆ ಶಿಕ್ಷೆ ಕೊಡಿಸುವಂತೆ ಮನವಿ ಮಾಡಿದರು.
ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ ಜಮೀನಿಗೆ ಮಾ.೧೧ರಂದು ನನ್ನ ಮೊಮ್ಮಗ ಧನರಾಜ್ ಹೋಗಿ ಬರುತ್ತೇನೆಂದು ಹೇಳಿ ಹೋದವನು ಹೆಣವಾಗಿದ್ದಾನೆ. ಈತನ ಸ್ನೇಹಿತರಾದ ಕಿಶೋರ್ ಮತ್ತು ಪ್ರದೀಪ್ ಇವರ ಜೊತೆಗೆ ಕೆರೆಯಲ್ಲಿ ಈಜಾಡಲು ಹೋಗಿದ್ದು ಮೂರು ಮಂದಿ ಈಜಾಡಿದ್ದಾರೆ. ಸ್ವಲ್ಪ ಸಮಯದಲ್ಲಿ ಇಬ್ಬರು ಅಲ್ಲಿಂದ ವಾಪಸ್ ಆಗಿದ್ದಾರೆ ಆದರೆ ಧನರಾಜ್ ಮಾತ್ರ ಬಂದಿರಲಿಲ್ಲ, ಮಾರನೇ ದಿನ ಆತನ ಮೃತ ದೇಹ ಕೆರೆಯಲ್ಲಿ ಸಿಕ್ಕಿದೆ. ಧನರಾಜ್ ಸಾವಿನ ಕುರಿತು ಅನುಮಾನ ಇದ್ದು ಸಮಗ್ರ ತನಿಖೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ಸುದ್ದಿ ಗೋಷ್ಟಿಯಲ್ಲಿ ಕೋವೇರಹಟ್ಟಿ ಗ್ರಾಮದ ಶಿವಮೂರ್ತಿ, ಹನುಮಂತಪ್ಪ, ಸುರೇಶ್, ಮತ್ತಿತರರು ಇದ್ದರು.