i
ರೈತರಿಗೆ ಭದ್ರಾ ಯೋಜನೆಯಲ್ಲಿ ತಡೆ ಹಿಡಿದಿದ್ದ ಭೂ ಪರಿಹಾರ ಬಿಡುಗಡೆ-ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ನಾಯಕನಹಟ್ಟಿ:
ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಜಮೀನು ನೀಡಿದರವರಿಗೆ ತಡೆ ಹಿಡಿದಿದ್ದ 30ಲಕ್ಷ ಪರಿಹಾರವನ್ನು ಸಭೆ ನಡೆಸಿ ಮತ್ತೆ ಕೊಡಿಸಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಾಯಕನಹಟ್ಟಿ ಸಮೀಪದ ಬೆಳಘಟ್ಟ ಗ್ರಾಮದಲ್ಲಿ ದುರ್ಗಾಭಿಂಕಾ ದೇವಸ್ಥಾನ ಸೇವಾ ಸಮಿತಿ ಮತ್ತು ರೈತರು ಆಯೋಜಿಸಿದ್ದ ಅಭಿನಂದನಾ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರೈತರು ಕಷ್ಟದಲ್ಲಿ ಬದುಕು ನಡೆಸುತ್ತಿದ್ದಾರೆ. ಕಳೆದ ವರ್ಷ ಸ್ವಲ್ಪ ಮಳೆ ಚೆನ್ನಾಗಿ ಆಯಿತು ಎಂದು ನೋಡುವಷ್ಟರಲ್ಲಿ ಹೆಚ್ಚಿನ ಮಳೆಯಾಗಿ ನಷ್ಟವಾಯಿತು. ಆದರೆ ಅಂತರ್ಜಲ ಹೆಚ್ಚಿದ್ದು ನೀರಾವರಿಗೆ ಸಹಕಾರಿಯಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಾಲುವೆಗೆ ರೈತರ ಜಮೀನುಗಳನ್ನು ವಶಪಡಿಸಿಕೊಂಡು ಬೆಳೆ ಪರಿಹಾರ ನೀಡಿದ್ದರು ಪ್ರಕ್ರಿಯೆ ಪೂರ್ಣಗೊಳ್ಳದೇ ಅವರಿಗೆ ಪರಿಹಾರ ಬಂದಿರಲಿಲ್ಲ. ಇದು ನನ್ನ ಗಮನಕ್ಕೆ ಬಂದಾಗ ಅಧಿಕಾರಿಗಳ ಜೊತೆ ಸಭೆ ನಡಸಿ ಪರಿಹಾರದ ಹಿಂದಿನ ಒಂದು ವರ್ಷದ ಬೆಳೆ ಪರಿಹಾರವನ್ನು ಸುಮಾರು 30 ಕ್ಕೂ ಹೆಚ್ಚು ರೈತರಿಗೆ 30 ಲಕ್ಷ ರೂಪಾಯಿ ಪರಿಹಾರ ಹಣವನ್ನು ಬಿಡುಗಡೆ ಮಾಡಿಸಿದ್ದೇನೆ ಎಂದರು.
ಸುಮಾರು 40 ವರ್ಷಗಳಿಂದ ದುರ್ಭಾಭಿಂಕ ದೇವರ ಜಾತ್ರೆ ಬೆಳಗಟ್ಟ ಗ್ರಾಮದಲ್ಲಿ ಹಲವು ಅಡೆತಡೆಗಳಿಂದ ಎರಡು ಗುಂಪುಗಳ ಸಮಸ್ಯೆಯಿಂದ ನಡೆಸಿರಲಿಲ್ಲ. ಆದರೆ ನನ್ನ ಕ್ಷೇತ್ರದಲ್ಲಿ ಇಂತಹ ಸಮಸ್ಯೆ ಇಲ್ಲದೇ ಸಂತೋಷವಾಗಿ ಹಬ್ಬ ಹರಿದಿನಗಳನ್ನು ಆಚರಿಸಬೇಕು ಎಂಬ ದೃಷ್ಟಿಯಿಂದ ಹಲವು ವರ್ಷಗಳಿಂದ ಸಭೆ ನಡೆಸಿ ಎರಡು ಗುಂಪುಗಳ ಸಂಧಾನ ಮಾಡುವ ಮೂಲಕ ಐತಿಹಾಸಿಕ ಜಾತ್ರೆ ಕಳೆದ ತಿಂಗಳ ಹಿಂದೆ ಸಂಭ್ರಮದಿಂದ ಜರುಗಿತು. ಇದಕ್ಕೆ ಈ ಊರಿನ ಗ್ರಾಮಸ್ಥರು ಮತ್ತು ರೈತರು ನನಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದಾಗ ನಾನು ಬೇಡ ನಾನು ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನದು ಜನಸೇವೆ ಕಾರ್ಯ ಎಂದರೂ ಕೇಳಲಿಲ್ಲ ಆದರೆ ಅವರ ಪ್ರೀತಿಗೆ ತಲೆ ಬಾಗಿ ಸನ್ಮಾನ ಸ್ವೀಕರಿಸಿದ್ದು ಅವರ ಪ್ರೀತಿಗೆ ನಾನು ಋಣಿಯಾಗಿರುತ್ತೇನೆ ಎಂದು ಶಾಸಕ ರಘುಮೂರ್ತಿ ತಿಳಿಸಿದರು.
ಪ್ರತಿ ಹಳ್ಳಿಯಲ್ಲಿ ಶಾಂತಿಯುತ ವಾತವರಣ, ಅಭಿವೃದ್ಧಿ, ಸರ್ವಧರ್ಮ ಸಮಾನತೆಗೆ ಹೆಚ್ಚು ಗೌರವ ನೀಡುತ್ತೇನೆ. ಯಾರೋ ಸ್ವಲ್ಪ ಜನ ನಮ್ಮ ಜನರನ್ನು ಹಣದಿಂದ ಬೆಲೆ ಕಟ್ಟಲು ಆಗಲ್ಲ. ನಮ್ಮ ಜನರು ಉಪವಾಸ ಇದ್ದರು ಸಹ ಸ್ವಾಭಿಮಾನ ಬಿಟ್ಟು ಕೊಡವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿ ಮತ್ತು ನೆಮ್ಮದಿ ಜೀವನಕ್ಕೆ ಮತ್ತೆ ನೀವು ಬೇಕು ಎಂದು ಕ್ಷೇತ್ರದಲ್ಲಿ ಎಲ್ಲಾ ಕಡೆ ಹೇಳುತ್ತಿದ್ದು ಅವರ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳಗಟ್ಟ ಗ್ರಾಪಂ ಅಧ್ಯಕ್ಷ ಅಶೋಕ ರೆಡ್ಡಿ, ಉಪಾಧ್ಯಕ್ಷೆ ಕವಿತಾ ದೃಶ್ಯಂತಕುಮಾರ್, ಮಾಜಿ ಜಿ.ಪಂ.ಸದಸ್ಯ ಬಾಬುರೆಡ್ಡಿ, ಬೆಳಗಟ್ಟ ದುರ್ಗಾಂಬಿಕಾ ದೇವಸ್ಥಾನದ ಸಮಿತಿಯ ಅಧ್ಯಕ್ಷ ರಾಮಚಂದ್ರರೆಡ್ಡಿ ಮತ್ತು ಸದಸ್ಯರಾದ ಯಲ್ಲಪ್ಪ ರೆಡ್ಡಿ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಸ್ಥಳೀಯ ಮುಖಂಡರು ಹಾಜರಿದ್ದರು.