i
ಶಿವಲಿಂಗೇಗೌಡರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುವಂತೆ ಸವಾಲ್ ಹಾಕಿದ ರೇವಣ್ಣ…
ಚಂದ್ರವಳ್ಳಿ ನ್ಯೂಸ್, ಅರಸೀಕೆರೆ:
ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಆಣೆ ಪ್ರಮಾಣಗಳ ಆಹ್ವಾನ ಜೋರಾಗಿದ್ದು ಜೆಡಿಎಸ್ ಪಕ್ಷದ ನಾಯಕ ಎಚ್.ಡಿ.ರೇವಣ್ಣವರು ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡುವಂತೆ ಸವಾಲ್ ಹಾಕಿದ್ದಾರೆ.
ಅವರು ಅರಸೀಕೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ರೇವಣ್ಣ, ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ನನ್ನೊಂದಿಗೆ ನಡೆಸಿದ ಪೋನ್ ಸಂಭಾಷಣೆ ಸುಳ್ಳು ಎಂದಾದರೆ ಕೂಡಲೇ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಶಿವಲಿಂಗೇಗೌಡರು ನನ್ನೊಂದಿಗೆ ಫೋನ್ನಲ್ಲಿ ಮಾತನಾಡುತ್ತಾ, ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ ಎಂದು ಮಾತನಾಡಿರುವುದು ಸುಳ್ಳೆಂದು ಸಾಬೀತುಪಡಿಸಲಿ ಎಂದು ಸವಾಲ್ ಹಾಕಿದರು.
ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಮುಖ ನೋಡಿ ಅರಸೀಕೆರೆ ಕ್ಷೇತ್ರದಲ್ಲಿ ಯಾರೂ ಜೆಡಿಎಸ್ಗೆ ಮತ ಹಾಕುವುದಿಲ್ಲ ಎಂದು ಶಿವಲಿಂಗೇಗೌಡ ಅವರು ದೇವೇಗೌಡರ ಸಮ್ಮುಖದಲ್ಲೇ ಹೇಳಿದ್ದು ಎಲ್ಲರಿಗೂ ನೋವಿದೆ. ಶಾಸಕ ಶಿವಲಿಂಗೇಗೌಡಗೆ 250 ಕೋಟಿ ಗುತ್ತಿಗೆ ಕೆಲಸ ಕೊಡಿಸಿದ್ದೆ. ಆ ಬಗ್ಗೆ ಸದ್ಯದಲ್ಲೇ ಹೆಚ್ಚಿನ ವಿವರ ನೀಡುತ್ತೇನೆ. ಶಿವಲಿಂಗೇಗೌಡ ಅದೇನು ಬಿಚ್ಚಿಡುತ್ತಾರೋ ಬಿಚ್ಚಡಲಿ. 15 ವರ್ಷ ಶಾಸಕರನ್ನಾಗಿ ಬೆಳೆಸಿದ್ದಕ್ಕೆ ಮೋಸ ಮಾಡಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಎಂದು ರೇವಣ್ಣ ವಾಗ್ದಾಳಿ ಮಾಡಿದರು.