i
ಮುಸ್ಲಿಂರು ಸೇರಿದಂತೆ ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಐದು ವರ್ಷ ಸಂಪೂರ್ಣ ಅಧಿಕಾರ ನೀಡಿ-ಇಬ್ರಾಹಿಂ…
ಚಂದ್ರವಳ್ಳಿ ನ್ಯೂಸ್, ಗುಬ್ಬಿ:
ಜೆಡಿಎಸ್ನಲ್ಲಿ ಎಲ್ಲ ಅನುಭವಿಸಿ ಕಾಂಗ್ರೆಸ್ಸಿಗೆ ಜಿಗಿದಿರುವ ಶ್ರೀನಿವಾಸ್ ಪಥ ವಿಪರ್ಯಾಸ. ಜನರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ತಿಳಿಸಿದರು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕುನ್ನಾಲದಲ್ಲಿ ಏರ್ಪಡಿಸಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿವೃದ್ಧಿ ಮಾಡಿದ್ದರೆ ಕುಕ್ಕರ್ ಹಂಚುವ ಪ್ರಮಯವೇ ಬರುತ್ತಿರಲಿಲ್ಲ. ಮತದಾರರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆಂದು ವಾಗ್ದಾಳಿ ಮಾಡಿದರು.
ಜೆಡಿಎಸ್ ಪಕ್ಷಕ್ಕೆ ಮುಸ್ಲಿಂರು ಸೇರಿದಂತೆ ರಾಜ್ಯ ಜನತೆ ಐದು ವರ್ಷ ಅಧಿಕಾರ ನೀಡಿದರೆ ಕರ್ನಾಟಕ ಮಾದರಿ ರಾಜ್ಯವಾಗಲಿದೆ. ಜೆಡಿಎಸ್ ಪಕ್ಷದಿಂದ ಮಾತ್ರ ಅಲ್ಪಸಂಖ್ಯಾತರ ಅಭಿವೃದ್ಧಿ ಸಾಧ್ಯವಾಗುವುದು. ಮುಸ್ಲಿಮರ ಆಹಾರ ಪದ್ಧತಿಯ ಮೇಲೆ ನಿಯಂತ್ರಣ ತರುವ ಉದ್ದೇಶದಿಂದಲೇ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಹಾಲುಕೊಡದ, ಉಳುಮೆಗೆ ಬಾರದ ರಾಸುಗಳನ್ನು ಸಾಕುವುದು ರೈತರಿಗೆ ಹೊರೆಯಾಗಲಿದ್ದು ಸರ್ಕಾರವೇ ಅದನ್ನು ಕೊಂಡುಕೊಳ್ಳುವ ರೀತಿ ಕಾನೂನನ್ನು ಏಕೆ ಜಾರಿಗೊಳಿಸಿಲ್ಲ ಎಂದು ಪ್ರಶ್ನಿಸಿದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ಜೆಡಿಎಸ್ ಪಕ್ಷ ಶಿಕ್ಷಣ, ರೈತ, ಯುವಕರು, ಮಹಿಳೆಯರ ಕುರಿತು ಆಸಕ್ತಿ ವಹಿಸಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಸರ್ಕಾರಿ ಶಾಲೆಗಳನ್ನು ಪರಿವರ್ತಿಸಿ ಬಡವರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡಲಾಗುವುದು. ತಾಲೂಕಿನಲ್ಲಿ ಒಂದು ಅವಕಾಶ ನೀಡಿದರೆ ಅಪೂರ್ಣಗೊಂಡಿರುವ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಿ ತಾಲೂಕಿನ ಜನರ ಋುಣ ತೀರಿಸುವೆ ಎಂದು ತಿಳಿಸಿದರು.
ಮಹಿಳಾ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ನಜ್ಮಾ ನಜೀರ್ ಮಾತನಾಡಿ, ಮುಸ್ಲಿಮರ ಸಂಪ್ರದಾಯ ಉಡುಗೆಯಾಗಿರುವ ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನೇ ಬೆಂಬಲಿಸಿದೆ. ಆದರೆ ಜೆಡಿಎಸ್ ಮುಸ್ಲಿಮರ ಪರವಾಗಿ ನಿಂತಿದ್ದು ಹೋರಾಟ ನಡೆಸುತ್ತಿದೆ. ಕುಕ್ಕರ್ ಹಾಗೂ ಸೀರೆಗಾಗಿ ಮತ ಚಲಾಯಿಸಬೇಡಿ. ಅಭಿವೃದ್ಧಿಯ ದೃಷ್ಟಿಯಿಂದ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವಂತೆ ಕರೆ ನೀಡಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಚಿಕ್ಕವೀರಯ್ಯ, ತಾಲೂಕು ಪಂಚಾಯತಿ ಮಾಜಿ ಸದಸ್ಯೆ ಸಿದ್ದಗಂಗಮ್ಮ, ಮಾಜಿ ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್, ಮುಖಂಡರಾದ ಅಲಿಂಸಾಬ್, ಸಲೀಂ ಪಾಷಾ, ಇಲಾಯತ್ ಹುಸೇನ್, ಅಕ್ರಮ್, ಬೆಹಜಾನ್, ಸುರೇಶ್ ಗೌಡ, ಶಿವಲಿಂಗೇಗೌಡ, ವಿಜಯ್ಕುಮಾರ್, ತೊಪಿಕ್ ಅಹಮದ್ ಸೇರಿದಂತೆ ಇನ್ನಿತರರು ಹಾಜರಿದ್ದರು.