i
ಲಂಚ ಸ್ಪೀಕರಿಸುವಾಗ ಪಿಎಸ್ಐ ಮತ್ತು ಕಾನ್ಸ್ಟೆಬಲ್ ಲೋಕಾಯುಕ್ತ ಬಲೆಗೆ…
ಚಂದ್ರವಳ್ಳಿ ನ್ಯೂಸ್, ರಾಣೆಬೆನ್ನೂರು:
ಮನೆಯಲ್ಲಿ ಬಾಡಿಗೆ ಇದ್ದ ವ್ಯಕ್ತಿಯಿಂದ ಮನೆ ಬಾಡಿಗೆ ವಸೂಲಿ ಮಾಡಿಕೊಡಲು 40 ಸಾವಿರ ಲಂಚ ಪಡೆಯುತ್ತಿದ್ದಾಗ ಪಿಎಸ್ಐ ಮತ್ತು ಕಾನ್ಸ್ಟೆಬಲ್ ಇಬ್ಬರು ಆರೋಪಿಗಳು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದು ಈಗ ಜೈಲು ಕಂಬಿ ಎಣಿಸುತ್ತಿರುವ ಘಟನೆ ರಾಣೆಬೆನ್ನೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಜರುಗಿದೆ.
ಠಾಣೆಯ ಪಿಎಸ್ಐ ಸುನೀಲ ತೇಲಿ, ವಾಹನ ಚಾಲಕ ಹಾಗೂ ಕಾನ್ಸ್ಟೆಬಲ್ ಸಚಿನ್ ಓಲೇಕಾರ ಇವರುಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಈ ಮೂರು ಜನ ಆರೋಪಿಗಳ ಜೊತೆಗೆ ಉಡುಪಿ ಟಿಸ್ಟಾಲ್ ಮಾಲೀಕ ಸಂತೋಷ್ ಶೆಟ್ಟಿ ಅವರನ್ನು ಲೋಕಾಯುಕ್ತ ಬಂಧಿಸಿದ್ದು ಕೋರ್ಟ್ಗೆ ಹಾಜರುಪಡಿಸಿದ್ದಾರೆ.
ಸಿದ್ಧೇಶ್ವರ ನಗರದ ಅಫ್ರೋಜ್ ಅಹ್ಮದ್ ನೂರ ಅಹ್ಮದ್ಸಾಬ್ ಊದಗಟ್ಟಿ ಅವರ ಅಣ್ಣನ ಪತ್ನಿ ರೌನಕ್ ಖಾನ್ ಅವರೊಂದಿಗೆ ಮನೆ ಬಾಡಿಗೆ ವಿಚಾರದಲ್ಲಿ ವಿವಾದವಿತ್ತು. ರೌನಕ್ ರಾಣೆಬೆನ್ನೂರು ಠಾಣೆಯಲ್ಲಿ ದೂರು ನೀಡಿದ್ದರು.
ಈ ದೂರು ಹಿಂಪಡೆಯಲು ಪಿಎಸ್ಐ ಹಾಗೂ ಕಾನ್ಸ್ಟೆಬಲ್ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ 40 ಸಾವಿರ ಹಣ ಕೊಡಲು ಒಪ್ಪಿಕೊಂಡು ಲಂಚದ ಹಣವನ್ನು ಆರೋಪಿ ಪರವಾಗಿ ಟಿ ಸ್ಟಾಲ್ ಮಾಲೀಕನ ಮೂಲಕ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದರು.