i
ಕಾಂಗ್ರೆಸ್ ಪಕ್ಷದ ಜಯಭೇರಿ ಈ ಕ್ಷೇತ್ರದಿಂದಲೇ ಆರಂಭ: ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ: congress nyg
ಬಿಜೆಪಿ ಪಕ್ಷದಲ್ಲಿ ತಳಸಮುದಾಯಗಳಿಗೆ ಉಸಿರುಗಟ್ಟುವ ವಾತಾವರಣ ಇದೆ. ಆ ಕಾರಣದಿಂದಲ್ಲೇ ನಾನು ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿದೆ ಎಂದು ಮೊಳಕಾಲ್ಮೂರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು.
ಅವರು, ಶನಿವಾರ ನೇರಲಗುಂಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬ್ಯಾಂಕ್ ನಿವೃತ್ತ ಅಧಿಕಾರಿ ಸೂರನಾಯಕರವರ ಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ಈ ಭಾರಿ ಕರ್ನಾಟಕದ ಕಾಂಗ್ರೆಸ್ ಪಕ್ಷದ ವಿಜಯ ಸಾಧನೆ ಮೊಳಕಾಲ್ಮೂರು ಕ್ಷೇತ್ರದಿಂದಲೇ ಆರಂಭವಾಗಬೇಕು, ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ ಟಿಕೆಟ್ ಬಯಸಿದ ಎಲ್ಲರೂ ತಾತ್ಕಾಲಿಕವಾಗಿ ಅಸಮದಾನಗೊಂಡರೂ ಮುಂದೆ ಚುನಾವಣೆಯಲ್ಲಿ ನನಗೆ ಸಹಕಾರ ನೀಡುತ್ತಾರೆಂಬ ಭರವಸೆ ಇದೆ. ಕಳೆದ ಸುಮಾರು 40 ವರ್ಷಗಳ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬೇರೆ ಪಕ್ಷದ ಕಡೆ ಎಂದೂ ದೃಷ್ಠಿ ಹಾಯಿಸಿಲ್ಲ. ಆದರೆ, ೨೦೧೮ರಲ್ಲಿ ಮಾತ್ರ ಪಕ್ಷದ ಕೆಲವು ವಿರೋಧಿ ಶಕ್ತಿಗಳು ನನಗೆ ಟಿಕೆಟ್ ನೀಡದಂತೆ ಕುತಂತ್ರ ನಡೆಸಿದ ಫಲವಾಗಿ ಅನಿವಾರ್ಯವಾಗಿ ಬಿಜೆಪಿಗೆ ಸೇರ್ಪಡೆಯಾದೆ. ಅಲ್ಲಿಯೂ ಸಹ ಉತ್ತಮ ವಾತಾವರಣ ಹಾಗೂ ಸಹಕಾರ ದೊರೆಯದ ಹಿನ್ನೆಲೆಯಲ್ಲಿ ಈ ಭಾಗದ ಕಾರ್ಯಕರ್ತರ, ಮುಖಂಡರ ಅಭಿಪ್ರಾಯದಂತೆ ಬಿಜೆಪಿಗೆ ರಾಜೀನಾಮೆ ನೀಡಿ ಮತ್ತೊಮ್ಮೆ ಪಕ್ಷದ ಅಭ್ಯರ್ಥಿಯಾಗಿ ನಿಮ್ಮ ಮುಂದೆ ಮತಯಾಚನೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಈ ಹಿಂದೆ ೧೯೯೩ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದಾಗ ಇಲ್ಲಿಯೇ ಪೂಜೆ ಮಾಡಿದ್ದನ್ನು ನೆನಪಿಸಿಕೊಂಡರು. ಕೂಡ್ಲಿಗಿ ಮತ್ತು ಬಳ್ಳಾರಿ ಗ್ರಾಮಾಂತರ ಪ್ರದೇಶದ ಶಾಸಕನಾಗಿ ಕೆಲಸ ಮಾಡಿದ ನಂತರ ನನ್ನಲ್ಲಿ ಇನ್ನೂ ಬಡವರಿಗಾಗಿ ದುಡಿಯುವ ಕಾರ್ಯಕರ್ತರ ಕಷ್ಟಸುಖಗಳಿಗೆ ಸ್ಪಂದಿಸುವ ಆತ್ಮವಿಶ್ವಾಸ ಹೆಚ್ಚಾಗಿತ್ತು. ನನ್ನ ಹಿರಿಯ ಸಹೋದರ, ನಿವೃತ್ತ ನ್ಯಾಯಾಧೀಶ ಎನ್.ವೈ.ಹನುಮಂತಪ್ಪರವರ ಬಳಿ ಚರ್ಚಿಸಿದಾಗ ಈ ಕ್ಷೇತ್ರದಲ್ಲಿ ಮುಂದುವರೆಯುವಂತೆ ತಿಳಿಸಿದರು. ಇಂದು ಅಭ್ಯರ್ಥಿಯಾಗಿ ಕಣದಲ್ಲಿದ್ದು, ಪಕ್ಷದ ಎಲ್ಲರೂ ಸೇರಿ ಸಹಕಾರ ನೀಡಿದರೆ ಗೆಲುವು ನಮ್ಮದಾಗುತ್ತದೆ. ಪಕ್ಷದ ಗೆಲುವನ್ನು ಎಲ್ಲರೂ ಸವಾಲಾಗಿ ಸ್ವೀಕರಿಸಿ ಕಾರ್ಯನಿರ್ವಹಿಸಬೇಕು ಎಂದರು.
ಬ್ಯಾಂಕ್ ನಿವೃತ್ತ ಅಧಿಕಾರಿ ಸೂರನಾಯಕ ಮಾತನಾಡಿ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚುಬಾರಿ ಗೆಲುವು ಸಾಧಿಸಿದೆ. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಪಡೆಯಲು ಪ್ರಯತ್ನ ನಡೆಸುವುದು ಸ್ವಾಭಾವಿಕ. ಆದರೆ, ಪಕ್ಷ ಅಭ್ಯರ್ಥಿಯನ್ನು ನಿಗದಿಗೊಳಿಸಿದ ಮೇಲೆ ಅಭ್ಯರ್ಥಿಯ ವಿಜಯಕ್ಕಾಗಿ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕು. ಎನ್.ವೈ.ಗೋಪಾಲಕೃಷ್ಣ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯರಂತಹ ಮಹಾನ್ ನಾಯಕರ ಸಮಕಾಲೀನರು ಅವರ ಗೆಲುವು ನಮ್ಮೆಲ್ಲರ ಆತ್ಮವಿಶ್ವಾಸದ ಪ್ರಶ್ನೆಯಾಗಿದೆ. ಎಲ್ಲರೂ ಸಂಘಟಿತರಾಗಿ ಗೆಲ್ಲಿಸಲು ಇಂದೇ ಸಂಕಲ್ಪ ಮಾಡೋಣವೆಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಲರಾಜು, ಭಕ್ತರಾಮೇಗೌಡ, ಬಂಡೆಕಪ್ಲೆ ಓಬಣ್ಣ, ಪ್ರಭುಸ್ವಾಮಿ, ಜಿ.ತಿಮ್ಮಾರೆಡ್ಡಿ ಮುಂತಾದವರು ಮಾತನಾಡಿದರು. ಜಿ.ತಿಪ್ಪೇಶ್ಕುಮಾರ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೆ.ತಿಪ್ಪೇಸ್ವಾಮಿ, ಜಿ.ತಿಪ್ಪೇಸ್ವಾಮಿ, ಕಾಟಯ್ಯ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.