i
ಬುದ್ಧ ಪೂರ್ಣಿಮೆ ಹಾಗೂ 2567ನೇ ಬುದ್ಧ ಜಯಂತಿ ವಿಶೇಷತೆ-ವಡ್ಡಗೆರೆ ನಾಗರಾಜಯ್ಯ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಭವವನ್ನು ನಾಶ ಮಾಡುವುದು ಯಾವುದೋ ಅದೇ ಭವನಾಶಿ”. ಇಲ್ಲಿ ಭವ ಮತ್ತು ನಾಶಿ ಎಂಬ ಎರಡು ಶಬ್ದಗಳಿವೆ. ಭವಿಗಳ ಭವದ ಕ್ಲೇಶವನ್ನು ನೀಗಿಕೊಳ್ಳುವ ದಾರಿಯಲ್ಲಿ ಮೊದಲಿಗೆ ನಮಗೆ ಭಿಕ್ಷು(ಕ್ಖು)ಗಳು ಮಾದರಿಯಾಗಿದ್ದಾರೆ. ಪಾಳಿ ಭಾಷೆಯ ಭಿಕ್ಕೆಯೇ ಭಿಕ್ಷೆಯಾಗಿಯೂ ಭಿಕ್ಖುವೇ ಭಿಕ್ಷುವಾಗಿಯೂ ಅರ್ಥ ವ್ಯಂಜಿಸಿ ನೋಡಿದಾಗ ಅಂದಿನ ಬೌದ್ಧಭಿಕ್ಖುಗಳು ಪ್ರಧಾನವಾಗಿ ಭಿಕ್ಷೆಯನ್ನೇ ಸರಳ ಜೀವನಮಾರ್ಗವನ್ನಾಗಿ ನೆಚ್ಚಿದವರಾಗಿದ್ದರು. ಯಾವ ಜೀವನ ಕ್ರಮವು ಪ್ರಕೃತಿಯನ್ನು ದುಂದುಗಾರಿಕೆಗೆ ಬಳಸದೆ ಸರಳತೆಗೆ ಒಲಿಯುವುದೋ ಹಾಗೂ ಸಕಲ ಚರಾಚರ ಜೀವಿಗಳಿಗೆ ಲೇಸು ಬಯುಸುವ ವಿಧಾನವಾಗಿರುತ್ತದೋ ಅದು ಸಕಲ ಭವಬಂಧನಗಳ ವ್ಯಸನದಿಂದ ದೂರವಾಗಿರುತ್ತದೆ. ಶರಣಂ ಗಚ್ಛಾಮಿ ಎಂದ ಇದೇ ದಯಾದರ್ಶ ಕರುಣಾಮೈತ್ರಿಯ ಗುಣಗಳೇ ಅನೇಕ ಯೋಗಧಾರೆಗಳಲ್ಲಿ ಮುಂದುವರೆದು ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣ ಪ್ರಮಥರಲ್ಲೂ ಮುಂದುವರೆಯಿತು. ಬುದ್ಧನ ಕಾಲದ ಶರಣಂ ಎಂಬುದೇ ಬಸವಣ್ಣನ ಕಾಲದ ಶರಣ ಹಾಗೂ ಮಹಾವೀರನ ಕಾಲದ ಶ್ರಮಣ ಧಾರೆಯಾಗಿದೆ. ಇದಕ್ಕಿಂತಲೂ ಹಿಂದೆ ಕಾಪಾಲಿಕನಾಥ ಸಿದ್ಧರು ಮತ್ತು ಅಘೋರಿಗಳು ಕಪಾಲವ ಹಿಡಿದು ಭಿಕ್ಷೆ ಬೇಡುವವರಾಗಿದ್ದರು. ಇವೆಲ್ಲವೂ ಭವಕ್ಲೇಶಗಳನ್ನು ನಾಶಮಾಡಿಕೊಳ್ಳುವ ಉಪಕ್ರಮಗಳನ್ನು ತೋರಿಸಿಕೊಟ್ಟಿವೆ. ಇಂತಹ ಉಪಕ್ರಮಗಳು ವೈಷ್ಣವ ಪಂಥದಲ್ಲೂ ಅನ್ವಯಗೊಂಡಿವೆ. ನಾಮಪ್ರದ್ಧಾ ತೀರ್ಥ ಮತ್ತು ಹಾಗೂ ಭಿಕ್ಷಾಪಾತ್ರೆ ಹಿಡಿದ ದಾಸಪ್ಪಗಳು ಸಂಸಾರವಂದಿಗರಾಗಿಯೂ ಇಂತಹ ಧಾರೆಯ ಜೀವನಾಡಿಯನ್ನು ಸಂಗೋಪಿಸಿ ಮುನ್ನಡೆದರು. ಇದೇ ಭವಂನಾಸ್ತಿ ಎಂದು ಭವಕ್ಲೇಶಗಳನ್ನು ನೀಗಿಕೊಳ್ಳುವ ಭವನಾಶಿಯ ಆಧಾರ ಸೂತ್ರ. ಅದು ಕೇವಲ ಭಿಕ್ಷಾಪಾತ್ರೆಯಾಗಿ ಭವಿಗಳ ಪಾಲಿಗೆ ಕಾಣಿಸಿದರೂ ದಾಸಪ್ಪನವರ ಪಾಲಿಗೆ ಭವಪಾಶ ಮತ್ತು ಭವಕ್ಲೇಶಗಳನ್ನು ನಾಶಪಡಿಸಿಕೊಳ್ಳುವ ಲಾಂಛನವಾಗಿದೆ. ಜನಪದರಲ್ಲಿ ಭವಂನಾಸ್ತಿ ಎಂಬುದೇ ಬೋನಾಸಿ, ಭವನಾಸಿ ಅಥವಾ ಭವನಾಶಿ ಆಗಿರುತ್ತದೆ.
“ಭಕ್ತಂಗೆ ಅಘೋರ ನರಕ ತಪ್ಪುದು ಆಗಳಂತೇ ಭವಿಗೆ ಮಾಡಿದ ಹುಳುಗೊಂಡವು ಆ ಭಕ್ತಂಗಪ್ಪುದು ತಪ್ಪುದು ಆ ಭವಿಗೆ ಭವಂನಾಸ್ತಿ ಕಾಣಾ ರಾಮನಾಥ” ಎಂದಿದ್ದಾನೆ ವಚನಕಾರ ದೇವರ ದಾಸಿಮಯ್ಯ.
ಇಂತಹ ಅಘೋರ ನರಕದ ಭವದಿಂದ ಪಾರಾಗಲೆಂದು ಬಯಸಿದ ವೈಷ್ಣವ ಭವಿ ಭಕ್ತರು ಭವನಾಶಿ ಹಿಡಿದು ಭಿಕ್ಷೆ ಬೇಡುತ್ತಾ ತಿರುಮಂತ್ರಗಳ ಮೊರೆಹೋಗುತ್ತಾರೆ.
ತಿರುಮಂತ್ರ ಕೂಗುವ ವಿಧಗಳು:
ಭೋ ಶಂಭೋ ಭವತಿ ಭಿಕ್ಷಾಂದೇಹಿ.. ಶ್ರೀಮದ್ ರಮಾ ರಮಣ ನಾರಾಯಣ ಶ್ರೀಹರಿ ಗೋವಿಂದಾ…. ಗೋ……….ವಿಂದ! (ಅಥವಾ…. ಶ್ರೀ ಲಕ್ಷ್ಮೀರಮಣ ಶ್ರೀಹರಿ ಗೋವಿಂದಾ…. ಗೋ……….ವಿಂದ!)
ಶ್ರೀ ತಿರುಪತಿ ವೆಂಕಟಾಪತೇ ಶ್ರೀಹರಿ ಗೋವಿಂದಾ…… ಗೋ……. ವಿಂದ! ( ಅಥವಾ.. ತಿರುಪತಿ ವೇಂಕಟರಮಣಸ್ವಾಮಿ ಪಾದಕ್ಕ್ ಗೋವಿಂದಾ…… ಗೋ…….ವಿಂದ!) ಶ್ರೀ ಕದರಿ ನರಸಿಂಹಸ್ವಾಮಿ ಪಾದಕ್ಕ್ ಗೋವಿಂದಾ….. ಗೋ……..ವಿಂದ! (ಕೆಲವು ಪ್ರದೇಶಗಳಲ್ಲಿ : ಬಿಳಿಗಿರಿ ಶ್ರೀ ರಂಗನಾಥಸ್ವಾಮಿ ಪಾದಕ್ಕ್ ಗೋವಿಂದಾ…..ಗೋ…………..ವಿಂದ!, ಶ್ರೀ ಮುಡುಕ್ತೊರೆ ಮಲ್ಲಿಕಾರ್ಜುನ ಸ್ವಾಮಿ ಪಾದಕ್ಕ್ ಗೋವಿಂದಾ…..ಗೋ……..ವಿಂದ!
ಶ್ರೀ ಮುತ್ತೆತ್ತರಾಯ(ಮುತ್ತರಾಯ) ಸ್ವಾಮಿ ಪಾದಕ್ಕ್ ಗೋವಿಂದಾ…..ಗೋ……..ವಿಂದ! ಇತ್ಯಾದಿ)
ಶ್ರಾವಣ ಶನಿವಾರಗಳಲ್ಲಿ ದಾಸಪ್ಪನವರು ತಲೆಗೆ ಮೈಸೂರು ಪೇಟಾ – ಬಲದ ಕಂಕುಳಲ್ಲಿ ತಾಮ್ರದ ಅಥವಾ ಕಂಚಿನ ಭವನಾಶಿ – ಎಡದ ಕಂಕುಳಲ್ಲಿ ಜೋಳಿಗೆ ಶಂಖ ಅಥವಾ ಹಿತ್ತಾಳೆ ಬಾಂಕಿ – ಬಲದ ಕೈಯಲ್ಲಿ ಕಂಚಿನ ಜಾಗಟೆ – ಎಡದ ಕೈಯಲ್ಲಿ ಗರಡುಗಂಭ – ಹಣೆಯಲ್ಲಿ ಭಸಿತದ ಮೂರು ತಿರುನಾಮ ಲಾಂಛನ – ಕಸ್ತೂರಿ ತಿಲಕ – ಭ್ರೂಮಧ್ಯ ಕುಂಕುಮ- ಮೈಮೇಲೆ ತುಂಬುತೋಳಿನ ಬಿಳಿಯಂಗಿ ಮೇಲೆ ಕರಿಕೋಟು – ಕಾಲಲ್ಲಿ ಕಿರುಗೆಜ್ಜೆ – ಪಂಚಪಾತ್ರೆ – ಉದ್ಧರಣೆ – ಗರುಡಗಂಭಕ್ಕೆ ಬಿಗಿಸಿದ ಪಂಚಲೋಹದ ದೇವರ ಚಿತ್ರ- ಬಾಯಲ್ಲಿ ತಿರುಮಂತ್ರ ಜಪ – ಪಾದಗಳ ಮೇಲೆ ವಿಭೂತಿ – ಪಾದದ ಉಗುರುಗಳ ಮೇಲೆ ಕುಂಕುಮ . ಇವು ಪ್ರಚಲಿತವಾಗಿರುವ ಪ್ರಮುಖ ವೈಷ್ಣವ ಪಂಥದ ಸಂಪ್ರದಾಯಗಳಲ್ಲಿ ದಾಸಯ್ಯಗಳ ವಿಶಿಷ್ಟ ಲಾಂಛನಗಳು. ಅವರ ಧಾರ್ಮಿಕ ಆಚರಣೆಗಳಲ್ಲಿ ಬಳಸಲಾಗುವ ಬಿರುದುಗಳಾದ ಭವನಾಸಶಿ, ಬಾಂಕಿ, ಶಂಖ, ಕಂಚಿನ ಜಾಗಟೆ, ಪಂಚಪಾತ್ರೆ-ಉದ್ದರಣೆ, ಕಂಚಿನ ಗಂಟೆ, ಹೊಕ್ಕುಳ ಗಂಟೆ – ಕೈಕಡಗ, ಕಾಲ್ಗೆಜ್ಜೆ ಗಗ್ಗರಿ, ಪಂಚಲೋಹದ ಆಂಜನೇಯನ ವಿಗ್ರಹ, ತಿಮ್ಮಪ್ಪನ ಅಥವಾ ಚೆಲುವ ನಾರಾಯಣನ ಅಥವಾ ತಿರು ಪೆರುಮಾಳು ನಾಮಪ್ರದ್ಧಾ, ಬೆತ್ತದ ಕೋಲು , ಅತ್ತಿಮರ ಅಥವಾ ಭೂತಾಳೆ ಮರದಿಂದ ತಯಾರಿಸಿದ ವಿಶಿಷ್ಠವಾದ ಹರಿಗೆಗಳು (ಬಾಣದರಂಗ- ಬಿಲ್ಲದರಂಗ ಅಥವಾ ಕರಿಯಣ್ಣ-ಕೆಂಚಣ್ಣ) ನಮ್ಮ ತುಮಕೂರು ಸೀಮೆಯಲ್ಲಿ ಹರಿಸೇವೆ ಮಾಡಲು ಈ ಹರಿಗೆಗಳು ಬೇಕೇಬೇಕು.ಹರಿಗೆಗಳಿಲ್ಲದಿದ್ದರೆ ಹರಿಸೇವೆಯೇ ಇಲ್ಲ ಇವೆಲ್ಲಾ ಬಿರುದು ಪಟಾವಳಿಗಳನ್ನು ವೇದಾದ್ರಿ,-ಯಾದವಾದ್ರ-, ಯತಿಶೈಲ,- ಭೂ ವೈಕುಂಠ ಎನ್ನಿಸಿದ ಶ್ರೀ. ಚೆಲುವನಾರಾಯಣ ಸ್ವಾಮಿಯ ದಿವ್ಯಕ್ಷೇತ್ರವೆಂದು ಪ್ರಸಿದ್ಧಿಯಾದ ಮಂಡ್ಯ ಜಿಲ್ಲೆಯ ಮೇಲುಕೋಟೆ (ತಿರುನಾರಾಯಣಪುರ) ಯಲ್ಲಿ, ಪವಿತ್ರ ಪಂಚಕಲ್ಯಾಣಿಯ ತಟದಲ್ಲಿ ಧಾರ್ಮಿಕಾಚರಣೆಯಿಂದ ಪಡೆಯಲಾಗುತ್ತದೆ. ಈ ಪೂಜಾ ಸಾಮಗ್ರಿಗಳನ್ನು ವಿಧಿಬದ್ಧವಾಗಿ ತೊಳೆದು – ಅವುಗಳಿಗೂ ಪುಣ್ಯಸ್ನಾನವ ಮಾಡಿಸಿ, ದಾಸಯ್ಯಗಳು ತುಳಸಿ ತಿರುನಾಮಪ್ರದ್ಧಾ ಧರಿಸಿ, ಹೂವು – ಹೊಂಬಾಳೆ- ದವನಗಳನ್ನು ಬಿರುದುಗಳಿಗೆ ಮುಡಿಸಿ ಪೂಜಿಸಿ ನೈವೇದ್ಯ ಎಡೆ ಇರಿಸಲಾಗುತ್ತದೆ. ಇದು ನಮ್ಮ ಜನಪದ ದಾಸಯ್ಯನವರಲ್ಲಿ ಕಂಡುಬರುವ ವಿಶಿಷ್ಟ ಸಂಪ್ರದಾಯ.. ಆಂದ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಸಂಗಮೇಶ್ವರನ ದೇವಾಲಯ ಬಳಿ ಕೃಷ್ಣ, ವೇಣಿ, ತುಂಗ, ಭದ್ರ, ಮಲಪಹಾರಿ, ಭೀಮ, ಭವನಾಸಿ ಎಂಬ ಏಳು ನದಿಗಳು ಒಂದೆಡೆ ಸಂಗಮವಾಗಿ ಹರಿಯುವ ಸಂಗಮೇಶ್ವರ ಸ್ಥಳದಲ್ಲಿಯೂ ದಾಸಪ್ಪಗಳು ದಾಸಯ್ಯನ ದೀಕ್ಷೆಯೊಂದಿಗೆ ಸಕಲ ಬಿರುದು ಪಟಾವಳಿಗಳನ್ನು ಪಡೆಯುತ್ತಾರೆ.
ರಾಮಾನುಜಾಚಾರ್ಯನು ಶೂದ್ರರಿಗೆ ವೈಷ್ಣವ ದೀಕ್ಷೆ ಕೊಟ್ಟು ವೈಷ್ಣವರನ್ನಾಗಿ ಮಾಡಿದ ಉತ್ಪಾತದ ಉತ್ಪನ್ನವೇ ಈ ದಾಸಯ್ಯಗಳು. ಶೈವರ ಮೇಲಿನ ಅಸಹನೆಗೆ ಶೂದ್ರರನ್ನು ಒಡೆದ ಬಳಿಕ ವೈಷ್ಣವ ಶ್ರೇಷ್ಟತೆಯ ಭ್ರಮೆಗೆ ಸಿಲುಕಿದ ಶೂದ್ರರು ವೈಷ್ಣವವನ್ನು ಪ್ರಚಾರ ಮಾಡುವ ಪರಿಚಾರಕರಾದರು. ಜೋಗಯ್ಯಗಳು ಶೈವರ ಪರವಾದ ಆಚರಣೆಗಳನ್ನು ಕೈಗೊಳ್ಳುತ್ತಾ ಶೈವದ ಭಾಗವಾದರು. ಅಂತೆಯೇ ದೇಸಿ ಶೈವ ಗುರುಪಂಥದ ಅಚಲಿಗ ತತ್ವಪದಕಾರರು ಬೌದ್ಧ ವಿಕಸಿತ ಶರಣ ಪರಂಪರೆಯ ಪರಿಚಾರಕರಾದರು. ಬ್ರಾಹ್ಮಣ ಬುದ್ದಿಯ ಜನ ಒಡೆದು ಆಳುವ ಧಾರ್ಮಿಕ ಸನಾತನ ಏಕಸ್ವಾಮ್ಯದ ಪ್ರತಿಷ್ಟಾಪನಾರ್ಥ ಸೃಷ್ಟಿಯಾದ ಶೈವ- ವೈಷ್ಣವ ಎಂಬ ಸಂಘರ್ಷದ ಭೇದಗಳು ಸಾಮಾಜಿಕ ಆಚರಣೆಗಳಾಗಿ ಉಳಿದುಹೋದವು. ಪ್ರೊ. ಹಿ.ಚಿ.ಬೋರಲಿಂಗಯ್ಯ ಮತ್ತು ಡಾ.ರಾಜೇಗೌಡ ಹೊಸಹಳ್ಳಿ ಅವರ ಪುಸ್ತಕಗಳಲ್ಲಿ ಈ ಅಂಶಗಳು ದಾಖಲಾಗಿವೆ. ರಾಮಾನುಜಾಚಾರ್ಯರು ಶೂದ್ರರಲ್ಲಿ ತಿರುನಾಮ ಬಿರುದು ಪಟಾವಳಿಗಳನ್ನು ವ್ಯಾಪಕಗೊಳಿಸಿರುವರೇ ಹೊರತು ಮೊದಲಿಗೆ ಅವರೇ ನೀಡಿದವುಗಳಲ್ಲ. ಆಂಧ್ರಪ್ರದೇಶ ತಮಿಳುನಾಡು ಮಹಾರಾಷ್ಟ್ರದಲ್ಲಿಯೂ ಈ ಪರಂಪರೆಯಿದೆ. ಇದು ಹೇಗೆಂದರೆ, ದಲಿತರಿಗೆ ಬಸವಣ್ಣ ಲಿಂಗಧಾರಣೆ ಮಾಡುವ ಮೊದಲೇ ದಲಿತರು ಲಿಂಗ ಧರಿಸಿದ್ದರು. ಬಸವಣ್ಣ ಲಿಂಗಧಾರಣೆಯನ್ನು ಮತ್ತಷ್ಟು ವ್ಯಾಪಕಗೊಳಿಸಿದರು.
ಕರ್ನಾಟಾಂಧ್ರದಲ್ಲಿ ರಾಮಾನುಜಾಚಾರ್ಯನ ಪ್ರವೇಶದೊಂದಿಗೆ ಶೈವ- ವೈಷ್ಣವ ಕಲಹ ಉರ್ಕರ್ಷಾವಸ್ಥೆ ಮುಟ್ಟಿತು. ರಾಮಾನುಜಾಚಾರ್ಯ ಬರುವ ಮೊದಲೇ ಇಲ್ಲಿ ವೈಷ್ಣವ ಪಂಥ ಇತ್ತಾದರೂ ಅದು ಶೂದ್ರರನ್ನು ಈ ಪರಿಯಾಗಿ ಒಡೆದು ಹಾಕಿರಲಿಲ್ಲ.
ಹಲ್ಮಿಡಿ ಶಾಸನವೇ ಕನ್ನಡದ ಮೊದಲ ಶಾಸನವೆಂದುಕೊಳ್ಳುತ್ತಿರುವಾಗಲೇ, ಅದಕ್ಕಿಂತಲೂ ಪೂರ್ವದ ಕನ್ನಡದ ಮೊದಲ ಶಾಸನ ತಾಳಗುಂದದ ಸಿಂಹಕಟಾಂಜನ ಶಾಸನ (ಕ್ರಿಶ.370) ಸಿಕ್ಕಿತು. ಶಾಸನ ಸಿಕ್ಕಿತೆಂದ ಮಾತ್ರಕ್ಕೆ ಕನ್ನಡ ಭಾಷಿಕ ಗುರುತುಗಳ ಇತಿಹಾಸ ಪ್ರಾರಂಭವಾಗಿದ್ದು ಅಲ್ಲಿಂದಲೇ ಎಂದು ತಿಳಿಯಬಾರದು. ಅದಕ್ಕಿಂತಲೂ ಮೊದಲು ಕನ್ನಡ ಇತ್ತು. ಹಾಗೆಯೇ ದಾಸಯ್ಯ ಸಂಪ್ರದಾಯವನ್ನೂ ಗ್ರಹಿಸಬೇಕು. ಹೇಳಿಕೇಳಿ ದಾಸಯ್ಯನವರು ಧಾರ್ಮಿಕ ಭಿಕ್ಷುಕರು. ಧಾರ್ಮಿಕ ಭಿಕ್ಷೆಯ ಆದಿಮ ರೂಪ ಬೌದ್ಧದ ಭಿಕ್ಖೆ ತಾನೆ? ಅಲ್ಲಿಯವರೆಗೂ ಇದರ ಬಿಂಬಗಳು ಹೋಗಬಹುದೋ ಏನೋ…. ಸಾಂಸ್ಕೃತಿಕ ಇತಿಹಾಸಕಾರರು ಇದನ್ನು ನಿರ್ವಚಿಸಿ ಹೇಳಬೇಕಿದೆ.
ಲೇಖನ-ಡಾ.ವಡ್ಡಗೆರೆ ನಾಗರಾಜಯ್ಯ
8722724174