i
ಹೊಸದುರ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಸ್ಪರ್ಧಿಸಿದ್ದಾರೆಂದು ತಿಳಿದು ಲಿಂಗಮೂರ್ತಿ ಗೆಲ್ಲಿಸಿ-ಯಡಿಯೂರಪ್ಪ…
ಚಂದ್ರವಳ್ಳಿನ್ಯೂಸ್, ಹೊಸದುರ್ಗ:
ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಈ ಕ್ಷೇತ್ರದಲ್ಲಿ ಯಡಿಯೂರಪ್ಪನವರು ಸ್ಪರ್ಧಿಸಿದ್ದಾರೆಂದು ತಿಳಿದು ಎಲ್ಲರೂ ಒಗ್ಗಟ್ಟಿನಿಂದ ಅಭ್ಯರ್ಥಿ ಲಿಂಗಮೂರ್ತಿ ಗೆಲ್ಲಿಸುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.
ಅವರು ಹೊಸದುರ್ಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಅಭ್ಯರ್ಥಿ ಲಿಂಗಮೂರ್ತಿ ಪರವಾಗಿ ಮತಯಾಚನೆ ಮಾಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಹೊಸದುರ್ಗ ಕ್ಷೇತ್ರದಲ್ಲಿ ಲಿಂಗಮೂರ್ತಿ ಗೆದ್ದರೆ ನಾನು ಗೆದ್ದಂತೆ, ಹಾಗಾಗಿ ಸಣ್ಣಪುಟ್ಟ ಮನಸ್ತಾಪಗಳಿದ್ದರೆ ಮರೆತು ಲಿಂಗಮೂರ್ತಿ ಗೆಲ್ಲಿಸುವಂತೆ ಯಡಿಯೂರಪ್ಪನವರು ಪದೇ ಪದೇ ಮನವಿ ಮಾಡಿದರು.
ಬಿಜೆಪಿ ನೀಡಿರುವ ಪ್ರಜಾ ಪ್ರಣಾಳಿಕೆಯಂತೆ 5 ಕೆ.ಜಿ.ಅಕ್ಕಿ ಜೊತೆ ಹೆಚ್ಚುವರಿ 5 ಕೆಜಿ ಸಿರಿಧಾನ್ಯ ನೀಡಲಾಗುವುದು, ಹಬ್ಬಗಳಿಗೆ ಮೂರು ಉಚಿತ ಸಿಲಿಂಡರ್, ರಾಜ್ಯದಲ್ಲಿ 10 ಲಕ್ಷ ಮನೆಗಳ ನಿರ್ಮಾಣ ಮಾಡಲಾಗುವುದು ಬಿಜೆಪಿ ನೀಡಿರುವ ಪ್ರಣಾಳಿಕೆ ಜನ ಸಾಮಾನ್ಯರಿಗೆ ತಲುಪುವ ಮೂಲಕ ನಾಡಿನ ಜನರ ಹಿತಾಸಕ್ತಿಗಳನ್ನು ಈಡೇರಿಸಲು ಡಬಲ್ ಇಂಜಿನ್ ಸರ್ಕಾರ ಬದ್ಧವಾಗಿದೆ ಎಂದರು.
ಹೊಸದುರ್ಗದ ಬಿಜೆಪಿ ಅಭ್ಯರ್ಥಿ ಲಿಂಗಮೂರ್ತಿ ಅವರನ್ನು ಹೆಚ್ಚಿನ ಮತಗಳು ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಚುನಾಯಿಸಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಎಸ್.ಲಿಂಗಮೂರ್ತಿ ಮಾತನಾಡಿ ತಾಲೂಕಿನ ಅಭಿವೃದ್ಧಿಗೆ ಬಿಜೆಪಿ ಹೆಚ್ಚಿನ ಅನುದಾನ ನೀಡಿದೆ. ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಅವರು ಹೊಸದುರ್ಗ ತಾಲ್ಲೂಕಿನ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಬಿಜೆಪಿಗೆ ಮತ ನೀಡುವ ಮೂಲಕ ಎರಡು ಬಾರಿ ಸೋತಿರುವ ನನಗೆ ಈ ಬಾರಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಕಲ್ಮಠ್, ಡಾ:ಸ್ವಾತಿ ಪ್ರದೀಪ್, ಎಂ.ಲಕ್ಕ್ಮಣ್, ಅಜ್ಜಪ್ಪ, ಹೆಬ್ಬಳ್ಳಿ ಓಂಕಾರಪ್ಪ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಎಂ.ಪಿ.ರಂಗೇಶ್, ಸರೋಜಮ್ಮ ಮಲ್ಲೇಶಪ್ಪ, ಈ ನಂದೀಶ್, ಮೀನಾಕ್ಷಿ ನಂದೀಶ್, ಹನುಮಂತಪ್ಪ ಹಾಜರಿದ್ದರು.