i
ಶ್ರೀಕಾಂತರಾವ್ ಪ್ರವೃತ್ತಿಗೆ ಎಂದಿಗೂ ದ್ರೋಹ ಮಾಡಲಿಲ್ಲ-ಚಿಕ್ಕಪ್ಪನಹಳ್ಳಿ ಷಣ್ಮುಖ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡಪ್ರಭ ಪತ್ರಿಕೆಯ ವರದಿಗಾರರಾಗಿದ್ದ ಹೊಸದುರ್ಗದ ಬೆಲಗೂರು ಶ್ರೀಕಾಂತರಾವ್ ನಿಧನಕ್ಕೆ ಪತ್ರಕರ್ತರ ಭವನದಲ್ಲಿ ಮಂಗಳವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಬೆಲಗೂರು ಶ್ರೀಕಾಂತರಾವ್ ಪ್ರವೃತ್ತಿಯಲ್ಲಿ ಪತ್ರಕರ್ತರಾಗಿದ್ದರು. ಸುದ್ದಿಯನ್ನು ಹೆಕ್ಕಿ ತೆಗೆಯುವುದರ ಜೊತೆಯಲ್ಲಿಯೇ ಮಕ್ಕಳಿಗೆ ಪಾಠ ಹೇಳಿಕೊಡುವಲ್ಲಿ ಎಂದಿಗೂ ದ್ರೋಹ ಮಾಡಲಿಲ್ಲ. ಎಲ್ಲರೊಡನೆಯೂ ಆತ್ಮೀಯರಾಗಿದ್ದರು ಎಂದು ಸ್ಮರಿಸಿದರು.
ಸುದ್ದಿಯ ವಿಚಾರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಸ್ವಭಾವ ಅವರದಲ್ಲಿ ನೇರ ನಿಷ್ಠುರವಾಗಿ ಬರೆಯುತ್ತಿದ್ದರು. ಅತಿಯಾದ ಹವ್ಯಾಸದಿಂದ ಜೀವಕ್ಕೆ ಕುತ್ತು ತಂದುಕೊಂಡರು. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಸುದ್ದಿಗಿಡುಗ ಪತ್ರಿಕೆಯ ಸಂಪಾದಕರಾದ ಶ.ಮಂಜುನಾಥ್ ಮಾತನಾಡುತ್ತ ಬೆಲಗೂರು ಶ್ರೀಕಾಂತರಾವ್ ಅತ್ಯುತ್ತಮ ಶಿಕ್ಷಕರಷ್ಟೆ ಅಲ್ಲ. ಉತ್ತಮ ಲೇಖಕರಾಗಿ ಜಿಲ್ಲೆಗೆ ಚಿರಪರಿಚಿತರಾಗಿದ್ದರು. ಕೂತಲ್ಲಿಯೇ ಸುದ್ದಿಯನ್ನು ಬರೆಯುವ ಚಾಣಕ್ಯತೆ ಅವರಲ್ಲಿತ್ತು. ಸುದ್ದಿಗಿಡುಗ ಪತ್ರಿಕೆಗೂ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದರು. ಮಕ್ಕಳಾಗಲಿಲ್ಲವಲ್ಲ ಎನ್ನುವ ಕೊರಗು ಅವರನ್ನು ಕಾಡುತ್ತಿತ್ತು. ಸಾಕಷ್ಟು ಸಲ ಮಕ್ಕಳನ್ನು ದತ್ತು ಪಡೆಯುವ ಪ್ರಯತ್ನಪಟ್ಟರು. ಆದರೆ ಕಾನೂನು ತೊಡಕಿನಿಂದ ಅವರ ಆಸೆ ಈಡೇರಲಿಲ್ಲ. ಸ್ವಯಂಕೃತ ಅಪರಾಧದಿಂದ ಇಷ್ಟು ಬೇಗನೆ ಎಲ್ಲರನ್ನು ಬಿಟ್ಟು ಅಗಲುವಂತಾಯಿತು ಎಂದು ದುಃಖಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ಗೌಡಗೆರೆ ಮಾತನಾಡಿ ಬೆಲಗೂರು ಶ್ರೀಕಾಂತರಾವ್ರವರಲ್ಲಿ ಚುನಾವಣಾ ಸಮೀಕ್ಷೆಗಳನ್ನು ಕರಾರುವಕ್ಕಾಗಿ ಹೇಳುವ ನೈಪುಣ್ಯತೆಯಿತ್ತು. ಶಿಕ್ಷಕ, ಪತ್ರಕರ್ತನೆಂಬ ಅಹಂ ಇರಲಿಲ್ಲ. ಜನಸಾಮಾನ್ಯರೊಂದಿಗೆ ಸದಾ ಬೆರೆಯುವ ಗುಣ ಅವರದು. ತಮ್ಮ ಸ್ವಂತ ಹಣದಿಂದ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಅವರ ಶಾಲೆಯಲ್ಲಿ ಚಿಕ್ಕ ಗ್ರಂಥಾಲಯವನ್ನೇ ನಿರ್ಮಿಸಿದ್ದರು. ಪದಗಳ ಜೋಡಣೆ ಸುಲಲಿತವಾಗಿತ್ತು. ಚಿಕ್ಕವರಿಂದ ಹಿಡಿದು ದೊಡ್ಡವರತನಕ ಎಲ್ಲರನ್ನು ಗೌರವದಿಂದ ಕಾಣುತ್ತಿದ್ದರು ಎಂದು ಗುಣಗಾನ ಮಾಡಿದರು.
ಹೊಸದಿಗಂತ ಪತ್ರಿಕೆ ವರದಿಗಾರ ತಿಪ್ಪೇಸ್ವಾಮಿ ಮಾತನಾಡುತ್ತ ನಿರ್ಮಲ ಮನಸ್ಸಿನ ವ್ಯಕ್ತಿತ್ವದವರಾಗಿದ್ದ ಬೆಲಗೂರು ಶ್ರೀಕಾಂತರಾವ್ ಎಲ್ಲರೊಡನೆ ಆತ್ಮೀಯವಾಗಿರುತ್ತಿದ್ದರು. ಶಿಕ್ಷಕ ವೃತ್ತಿಯ ಜೊತೆ ಕನ್ನಡಪ್ರಭ ಪತ್ರಿಕೆ ವರದಿಗಾರನಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಡಿ.ಕುಮಾರಸ್ವಾಮಿ, ಪತ್ರಕರ್ತ ಗೋವಿಂದಪ್ಪ ವೇದಿಕೆಯಲ್ಲಿದ್ದರು.
ಪತ್ರಕರ್ತರಾದ ನಾಗರಾಜ್, ನಾಕಿಕೆರೆ ತಿಪ್ಪೇಸ್ವಾಮಿ, ಓಂಕಾರಮೂರ್ತಿ, ಬ್ರಹ್ಮಗಿರಿ ಶ್ರೀನಿವಾಸ್, ಟಿ.ಲಕ್ಷ್ಮಣ್, ಹವ್ಯಾಸಿ ಪತ್ರಕರ್ತ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಇನ್ನು ಅನೇಕರು ಶ್ರದ್ದಾಂಜಲಿ ಸಭೆಯಲ್ಲಿ ಹಾಜರಿದ್ದರು.