i
ಮೀಸಲಾತಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಕೊಟ್ಟಿಲ್ಲ; ನಮ್ಮ ಆದೇಶವೇ ಊರ್ಜಿತ: ಸಿಎಂ ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ಹಾವೇರಿ:
ಸುಪ್ರೀಂ ಕೋರ್ಟ್ ಆದೇಶವನ್ನು ಯಾವ ರೀತಿ ತಿರುಚಬಹುದು ಎನ್ನುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖರಗತ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿಡಿಕಾರಿದರು.
ಮೀಸಲಾತಿ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಶಿಗ್ಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಸುಪ್ರೀಂ ಯಾವುದೇ ತಡೆಯಾಜ್ಞೆ ನೀಡಿಲ್ಲ. ನಾವು ಹೊರಡಿಸಿರುವ ಆಜ್ಞೆ ಇನ್ನೂ ಊರ್ಜಿತವಾಗಿದೆ ಎಂದರು.
ಕೋರ್ಟ್ ಪ್ರಕ್ರಿಯೆ ನಡೆಯುವಾಗ ವಿಚಾರಣೆ ಅಗುವರೆಗೂ ಅನುಷ್ಟಾನ ಮಾಡುವುದಿಲ್ಲ. ಇದೊಂದು ಪ್ರತೀತಿ. ಮಹದಾಯಿ ವಿಚಾರದಲ್ಲಿ ಕೂಡ ಹೀಗೆ ಆಗಿತ್ತು. ಕೋರ್ಟ್ನಲ್ಲಿ ಮುಂದಿನ ವಿಚಾರಣೆ ನಡೆಯುವರೆಗೆ ಅದನ್ನು ಅನುಷ್ಠಾನ ಮಾಡುವುದಿಲ್ಲ ಎಂಬುದು ಸರ್ಕಾರದ ಸ್ವಯಂ ಹೇಳಿಕೆ ಆಗಿರುತ್ತದೆ. ಇದನ್ನು ಕೋರ್ಟ್ ತಡೆ ನೀಡಿದೆ ಎಂದು ಬಿಂಬಿಸುವಂತಹ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಸತ್ಯದ ಮೇಲೆ ಹೊಡೆಯುವ ರೀತಿಯಲ್ಲಿ ಸುಳ್ಳು ಹೇಳಲಾಗುತ್ತಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರೇ ನೀವು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ನಿಮಗೆ ಮಾಡಲು ಆಗಲಿಲ್ಲ. ಆಂತರಿಕ ಮೀಸಲಾತಿ ಕೊಡಲು ಮನಸ್ಸು ಇರಲಿಲ್ಲ. ನಿಮ್ಮ ಪಕ್ಷ, ನಿಮ್ಮ ಸ್ನೇಹಿತರು ಸುಪ್ರೀಂ ಕೋರ್ಟ್ ಗೆ ಹೋಗಿ ಬಂಜಾರ್, ಭೋವಿ ಸಮಾಜವನ್ನು ಎಸ್ಸಿ, ಎಸ್ಟಿಯಿಂದ ತೆಗೆಯಲು ಹಿಂಬಾಗಿಲಿನಿಂದ ಹುನ್ನಾರ ಮಾಡಿದ್ದು ಕರ್ನಾಟಕದ ಜನತೆಗೆ ಗೊತ್ತಿದೆ ಎಂದರು.
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ, ಆಂತರಿಕ ಮೀಸಲಾತಿ ವಿಚಾರ ಕೋರ್ಟ್ ಗೆ ಬಂದಿಲ್ಲ. ಹಿಂದುಳಿದ ಸಮಾಜದೊಂದಿಗೆ ಸೇರಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುವುದು ಶೋಭೆ ತರುವುದಿಲ್ಲ. ನಾವು ಏನು ಮಾತನಾಡಿದ್ದೇವೆ, ಆ ರೀತಿ ನಡೆದುಕೊಂಡಿದ್ದೇವೆ. ಸಹಜವಾಗಿ ಇಂತಹ ವಿಚಾರದಲ್ಲಿ ಕೋರ್ಟ್ ನಲ್ಲಿ ವಿಚಾರಣೆ ಆಗುತ್ತದೆ. ಅದಕ್ಕೆ ಸಂವಿಧಾನ್ಮಕವಾಗಿ, ಕಾನೂನಾತ್ಮಕವಾಗಿ ಹೋರಾಟ ಮಾಡಲು ನಮ್ಮ ವಕೀಲರು ಸನ್ನದ್ಧರಾಗಿದ್ದೇವೆ. ಯಾವುದೇ ತಡೆ ಇಲ್ಲ. ನಾವು ಮೀಸಲಾತಿ ಹಂಚಿಕೆಗೆ ಬದ್ಧರಾಗಿದ್ದೇವೆ ಎಂದರು.
ಯಾವುದನ್ನು ಕಾಂಗ್ರೆಸ್ 70 ವರ್ಷದಿಂದ ಮಾಡಲು ಆಗಿರಲಿಲ್ಲ, ಅದನ್ನು ನಾನು ನಮ್ಮ ಸರ್ಕಾರ ಮಾಡಿದೆ. ಅದನ್ನು ಕಾಂಗ್ರೆಸ್ ಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ನ ತಿರುಚುವ ಹೇಳಿಕೆಯನ್ನು ನಂಬಬೇಡಿ. ಅನುಷ್ಠಾನ ಮುಂದೆ ಹಾಕಿದ್ದು, ಕೋರ್ಟ್ ನಲ್ಲಿ ನಾವು ವಿಜಯಶಾಲಿಯಾಗುವ ವಿಶ್ವಾಸ ನಮಗೆ ಇದೆ. ಕಾನೂನು, ಸಂವಿಧಾನ ನಮ್ಮ ಪರವಾಗಿದೆ ಎಂದರು.
ಕರ್ನಾಟಕದ ಎಲ್ಲ ವರ್ಗದ ಮತದಾರರು ಕಾಂಗ್ರೆಸ್ ನ ಇಷ್ಟು ವರ್ಷದ ಮೋಸದ, ಸುಳ್ಳಿನ ಆಟವನ್ನು ದಿಕ್ಕರಿಸಬೇಕು. ನಮ್ಮ ಬದ್ಧತೆಯಂತೆ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಬೇಕು. ಅದಕ್ಕೆ ನಾವು ಎಸ್ಸಿ, ಎಸ್ಟಿ ಜನಾಂಗಕ್ಕೆ ನ್ಯಾಯ ಕೊಡಲು ನಾವು ಬದ್ಧರಿದ್ದೇವೆ ಎಂದರು.