i
ಹೆಸರಿಗೆ ಸರ್ಕಾರಿ ಹೈಟೆಕ್ ಆಸ್ಪತ್ರೆ, ರೋಗಿಗಳ ಯಾತನೆ ಆ ದೇವರಿಗೆ ಪ್ರೀತಿ…
ವರದಿ-ಮಧು ಗಿಲ್ಕೆ
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಹೊರಗಡೆಯಿಂದ ನೋಡಿದರೆ ಯಾವುದೇ ಖಾಸಗಿ ಹೈಟೆಕ್ ಆಸ್ಪತ್ರೆಗೆ ಕಮ್ಮಿ ಇಲ್ಲದಂತೆ ಹೈಟೆಕ್ ಟಚ್ ನೀಡಲಾಗಿದೆ. ಆದರೆ ಹೊರಗಡೆಯ ಹೈಟೆಕ್ ಸ್ಪರ್ಶ ನೋಡಿ ಒಳ ರೋಗಿಯಾಗಿ ದಾಖಲಾಗುವ ರೋಗಿಗಳ ಕಥೆ ಆ ದೇವರಿಗೆ ಪ್ರೀತಿಯಾಗಿದ್ದು ಅಗತ್ಯ ಮೂಲ ಸೌಲಭ್ಯಗಳಿಲ್ಲದೆ ರೋಗಿಗಳು ನರಕಯಾಚನೆ ಅನುಭವಿಸುತ್ತಿದ್ದಾರೆ.
ಹೊಳಲ್ಕೆರೆ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲವೂ ಇಲ್ಲಗಳದೆ ಕಾರುಬಾರು, ರೋಗಿಗಳು ಚಿಕಿತ್ಸೆಗೆಂದು ಬಂದರೆ ಯಾವುದೇ ರಿಸ್ಕ್ ತೆಗೆದುಕೊಳ್ಳದ ವೈದ್ಯರು, ನರ್ಸ್ ಗಳು ರೋಗಿಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರೆಫರ್ ಮಾಡುತ್ತಿದ್ದಾರೆ. ಹಣ ಇರುವವರು ಅಥವಾ ಜೀವ ಉಳಿದರೆ ಸಾಕು ಎನ್ನುವವರು ದಾವಣಗೆರೆ, ಶಿವಮೊಗ್ಗ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಕೆಲವು ರೋಗಿಗಳನ್ನು ಅಡ್ಮಿಟ್ ಮಾಡಿಕೊಂಡರು ಸಹ ಔಷಧಿಗಳನ್ನು ಹೊರಗಡೆಯಿಂದ ತೆಗೆದುಕೊಂಡು ಬರುವುದಕ್ಕೆ ಹೇಳುತ್ತಾರೆ. ರಾತ್ರಿ ಪಾಳಿಯಲ್ಲಿರುವ ವೈದ್ಯರು ನಿಯಮಿತವಾಗಿ ವಾರ್ಡ್ ಗಳಿಗೆ ಭೇಟಿ ರೋಗಿಗಳ ಆರೋಗ್ಯ ತಪಾಸಣೆ ಮಾಡುತ್ತಿಲ್ಲ ಎನ್ನುವ ಆರೋಪ ಸಾಕಷ್ಟಿದೆ. ಆಸ್ಪತ್ರೆಗೆ ಬರುವಂತ ರೋಗಿಗಳನ್ನು ವೈದ್ಯರು ಸರಿಯಾಗಿ ತಪಾಸಣೆ ಮಾಡುವುದಿಲ್ಲ. ದಾದಿಯರ ವರ್ತನೆಯನ್ನಂತು ಕೇಳುವುದಿಲ್ಲ, ನರ್ಸ್ ಗಳು ರೋಗಿಗಳಿಗೆ ಯಾವ ರೀತಿಯಿಂದಲೂ ಸ್ಪಂದಿಸುವುದಿಲ್ಲ ಎನ್ನುವ ಆರೋಪವನ್ನು ರೋಗಿಗಳು ಮಾಡುತಲ್ಲೆ ಇದ್ದರೂ ಆಸ್ಪತ್ರೆ ವ್ಯವಸ್ಥೆ ಮಾತ್ರ ಸುಧಾರಣೆ ಆಗುತ್ತಿಲ್ಲ.
ಬೇಸಿಗೆ ಕಾಲ ಬೇರೆ, ಹಗಲು ವಿಪರೀತ ಸೆಕೆ ಆದರೆ ರಾತ್ರಿ ಸೊಳ್ಳೆಗಳ ಹಾವಳಿ, ಆಸ್ಪತ್ರೆಯಲ್ಲಿ ಹೆಸರಿಗೆ ಮಾತ್ರ ಪ್ಯಾನ್ ಇವೆ. ಆದರೆ ಆ ಪ್ಯಾನ್ ಗಳು ತಿರುಗುವುದಿಲ್ಲ. ರಾತ್ರಿ ಸೊಳ್ಳೆ ಕಾಟ ತಾಳಲಾರದ ಎಲ್ಲೆಂದರಲ್ಲಿ ಮಲಗುತ್ತಿದ್ದಾರೆ. ಖಾಯಿಲೆ ಗುಣ ಪಡಿಸಿಕೊಂಡು ಮನೆಗೆ ಹೋಗುವ ಕನಸು ಕಾಣುತ್ತಿರುವ ರೋಗಿಗಳು ಮತ್ತು ರೋಗಿಗಳಿಗೆ ಆರೈಕೆ ಮಾಡಲು ಜೊತೆಗೆ ಬರುವಂತ ಸಹಾಯಕರಿಗೆ ನೂರಷ್ಟು ರೋಗ ಅಂಟಿಸಿಕೊಂಡು ವಾಪಸ್ ಮನೆಗೆ ಹೋಗುವಂತ ಪರಿಸ್ಥಿತಿ ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಯಲ್ಲಿದೆ.
ರೋಗಿಗಳ ಕಡೆಯವರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲ. ಹೀಗಾಗಿ ರೋಗಿಗಳ ಜತೆ ಬರುವವರು ರೋಗಿಗಳಾಗಿ ತೆರಳುವಂತಹ ಪರಿಸ್ಥಿತಿ ಇದೆ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೊಠಡಿ ಮಾತ್ರ ಅತ್ಯಂತ ಹೈಟೆಕ್ ನಲ್ಲಿದ್ದು ವೈದ್ಯಾಧಿಕಾರಿಗಳು ಮಾತ್ರ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಹಲವು ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆಂದು ರೋಗಿಗಳು ಆರೋಪಿಸುತ್ತಿದ್ದಾರೆ. ಒಳ ರೋಗಿಯಾಗಿ ದಾಖಲಾಗಿರುವ ನನಗೆ ಬಿಪಿ ವ್ಯತ್ಯಾಸ ಆಗಿ ತುಂಬಾ ಸುಸ್ತಾಗಿದ್ದೆ. ವೈದ್ಯರನ್ನು ಕರೆಯಲು ಹೋದರೆ ಯಾರು ಇರಲಿಲ್ಲ. ದಾದಿಯರು ಕೂಡ ಬಂದು ವಿಚಾರಿಸಲಿಲ್ಲ. ಕಸ ಗುಡಿಸುವುದಕ್ಕೆ ಬರುವ ಸಿಬ್ಬಂದಿ ತುಂಬಾ ಸಿಟ್ಟಿನಿಂದ ಮಾತನಾಡುತ್ತಾರೆ. ಇಡೀ ವಾರ್ಡ್ಗೆ ಒಂದೇ ಫ್ಯಾನ್ ಹಾಕಲಾಗಿದೆ. ದಾದಿಯರಿಗೆ ಹೇಳಿದರೆ ಅದು ನಮ್ಮ ಕೆಲಸವಲ್ಲ ಎನ್ನುತ್ತಾರೆ. ಕಿಟಕಿ ಓಪನ್ ಮಾಡಿ ಮಲಗಿದರೆ ಸೊಳ್ಳೆ ಕಾಟ. ಖಾಸಗಿ ಆಸ್ಪತ್ರೆಗೆ ಹೋಗಿ ದುಬಾರಿ ವೆಚ್ಚ ಭರಿಸುವುದಕ್ಕೆ ನಮ್ಮಂತ ಬಡವರಿಗೆ ಆಗಲ್ಲ ಎಂಬ ಕಾರಣಕ್ಕೆ ಇಲ್ಲಿಗೆ ಬಂದು ಅಡ್ಮಿಟ್ ಆಗಿದ್ದೇನೆ. ಆದರೆ ಇಲ್ಲಿನ ಅವ್ಯವಸ್ಥೆ ನೋಡಿದರೆ ಸಾಲ ಮಾಡಿಯಾದರು ಖಾಸಗಿ ಆಸ್ಪತ್ರೆಗೆ ಹೋಗಬೇಕು ಎನಿಸುತ್ತಿದೆ ಎಂದು ಒಳ ರೋಗಿಗಳ ವಿಭಾಗದಲ್ಲಿ ಅಡ್ಮಿಟ್ ಆಗಿರುವ ಮಂಜುಳಾ ನೋವು ತೋಡಿಕೊಂಡಿದ್ದಾರೆ.
ಇನ್ನೂ ಸರ್ಕಾರಿ ಆಸ್ಪತ್ರೆಯ ಶೌಚಾಲಯ ಕೊಠಡಿ ದುರಸ್ಥಿ ಮಾಡಲು ತೆಗೆದುಕೊಂಡಿದ್ದೇವೆ. ಏಜೆನ್ಸಿ ವಹಿಸಿಕೊಂಡಿರುವ ವ್ಯಕ್ತಿಯ ತಾಯಿ ಐಸಿಯುನಲ್ಲಿದ್ದರು ಅಂತ ಮೂರು ತಿಂಗಳು ಅಲ್ಲಿಯೇ ಇದ್ದರು. ಹಾಗಾಗಿ ಶೌಚಾಲಯ ಕೊಠಡಿ ರಿಪೇರಿ ಮಾಡುವುದು ವಿಳಂಬವಾಗಿದೆ. ಮುಂದಿನ ಒಂದು ವಾರದೊಳಗೆ ದುರಸ್ಥಿ ಮಾಡಿಕೊಡುತ್ತೇವೆ ಎಂದು ಆಸ್ಪತ್ರೆ ಕಟ್ಟಡದ ಗುತ್ತಿಗೆ ಎಇಇ ಉಮೇಶ್ ಹೇಳಿದ್ದಾರೆ.
ಹೊಳಲ್ಕೆರೆ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ ಕುರಿತು ಇತ್ತೀಚೆಗೆ ಚಂದ್ರವಳ್ಳಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯಾಧಿಕಾರಿ ವಿನಯ್ ಪ್ರತಿಕ್ರಿಯೆ ನೀಡಿದ್ದು, ಪೌಷ್ಠಿಕಾಂಶದ ಕೊರತೆ ಇರುವ ಮಕ್ಕಳನ್ನು ಅಡ್ಮಿಟ್ ಮಾಡಿಕೊಂಡು ತೂಕ ಹೆಚ್ಚಳ ಮಾಡಿ ಮನೆಗೆ ಕಳುಹಿಸುತ್ತಿದ್ದೇವೆ. ಹೆರಿಗೆ, ಆರ್ನಿಯಾ, ಅಪೆಂಡಿಕ್ಸ್, ಅಬ್ಡಮನ್ ಸರ್ಜರಿ, ಕಣ್ಣು, ಕಿವಿ, ಮೂಗು ವಿಭಾಗಕ್ಕೆ ಸಂಬಂಧಿಸಿದ ಸಣ್ಣ-ಸಣ್ಣ ಆಪರೇಷನ್ಸ್ ಇಲ್ಲಿಯೇ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಆರ್ಥೋಪಿಡಿಕ್ ಸಂಬಂಧಿಸಿದ ಕೆಲವು ಉಪಕರಣಗಳು ಇನ್ನು ಬರಬೇಕಿದೆ. ಅವುಗಳು ಲಭ್ಯವಾದ ತಕ್ಷಣವೇ ಆಪರೇಷನ್ಸ್ ಶುರುಮಾಡುತ್ತೇವೆ. ಹೊಸ ಬಿಲ್ಡಿಂಗ್ಗೆ ಶಿಫ್ಟ್ ಮಾಡುವ ಕೆಲಸ ನಡೆಯುತ್ತಿದೆ. ಡೆಂಟಲ್ ವಿಭಾಗ ಶಿಫ್ಟ್ ಆಗಿದೆ. ಮಹಿಳಾ ವಾರ್ಡ್ಗಳಿಗೆ ಕರ್ಟನ್ ಹಾಕಿಸಲಾಗುವುದು, ತುರ್ತಾಗಿ ಟಾಯ್ಲೆಟ್ ರೂಮ್ ರಿಪೇರಿ ಮಾಡಿಕೊಟ್ಟರೆ ಅಲ್ಲಿಗೆ ಎಲ್ಲವೂ ಪರಿಪೂರ್ಣವಾಗಲಿದೆ ಎಂದು ವೈದ್ಯಾಧಿಕಾರಿ ವಿನಯ್ ಹೇಳಿದ್ದಾರೆ.