i
ಪ್ರಧಾನಿಯವರ ವೈಯಕ್ತಿಕ ಕಾರ್ಯವಲ್ಲ, ದೇಶದ ಕಾರ್ಯ. ಸಂಸತ್ ಭವನ ಉದ್ಘಾಟನೆಗೆ ಹೋಗುವೆ-ದೇವೇಗೌಡ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ಅಥವಾ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿರೋಧಿಸಲು ಸಾಕಷ್ಟು ವಿಷಯಗಳಿವೆ. ಆದರೆ ನೂತನ ಸಂಸತ್ ಭವನ ಉದ್ಘಾಟನೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ, ಇದರಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.
ಅವರು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಂಸತ್ ಭವನ ಉದ್ಘಾಟನೆ ಯಾರೊಬ್ಬರ ವೈಯಕ್ತಿಕ ವಿಷಯವಲ್ಲ, ಬಿಜೆಪಿ. ಆರ್.ಎಸ್.ಎಸ್. ಕಚೇರಿಯಲ್ಲ, ಅದು ದೇಶದ ಆಸ್ತಿ, ಸಂಸತ್ ಭವನ ಉದ್ಘಾಟನೆಗೆ ನಾನು ಹೋಗುತ್ತೇನೆ ಎಂದು ಹೇಳಿದರು.
ಈ ದೇಶದ ಜನರ ತೆರಿಗೆ ಹಣದಿಂದ ನೂತನ ಸಂಸತ್ ಭವನ ನಿರ್ಮಿಸಲಾಗಿದೆ. ಪ್ರಧಾನಿ ಮೋದಿ ಅವರು ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಅದು ಪ್ರಧಾನಿಯವರ ವೈಯಕ್ತಿಕ ಕಾರ್ಯಕ್ರಮವಲ್ಲ, ದೇಶದ ಕಾರ್ಯಕ್ರಮವಾಗಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ನಾನು ಕೆಲಸ ಮಾಡಿದ್ದು, ಈಗಲೂ ರಾಜ್ಯಸಭೆ ಸದಸ್ಯನಾಗಿದ್ದೇನೆ. ಬಿಜೆಪಿ ವಿರೋಧಿಸಲು ನನಗೆ ಅನೇಕ ಕಾರಣಗಳಿವೆ. ಆದರೆ, ಸಂಸತ್ ಭವನ ವಿಚಾರದಲ್ಲಿ ರಾಜಕೀಯ ಮಾಡುವುದರಲ್ಲಿ ನನಗೆ ಇಷ್ಟವಿಲ್ಲ ಎಂದು ದೇವೇಗೌಡರು ಸ್ಪಷ್ಟ ಪಡಿಸಿದ್ದಾರೆ.