i
ಹೊಸ ಸಂಸತ್ ಭವನ ಮತ್ತು ಸೆಂಗೋಲ್ ಸ್ಥಾಪನೆ ಜನರನ್ನು ದಿಕ್ಕು ತಪ್ಪಿಸುವ ನಾಟಕವಷ್ಟೇ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸದ್ಯ ಅಮೆರಿಕ ಪ್ರವಾಸದಲ್ಲಿದ್ದು ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಯಾದ ನೂತನ ಸಂಸತ್ ಭವನ ಹಾಗೂ ಸೆಂಗೋಲ್ ಕುರಿತು ಕ್ಷುಲ್ಲಕವಾಗಿ ಮಾತನಾಡಿ ಅವಮಾನಿಸಿದ್ದಾರೆ ಎಂದು ಬಿಜೆಪಿ ಕಿಡಿ ಕಾರಿದೆ. ರಾಹುಲ್ ಗಾಂಧಿ ಅವರು ಅಮೆರಿಕಾದ ಮಾಧ್ಯಮಗಳೊಂದಿಗೆ ಮಾತನಾಡಿ ಹೊಸ ಸಂಸತ್ ಭವನ ಮತ್ತು ಸೆಂಗೋಲ್ ಸ್ಥಾಪನೆ ಜನರನ್ನು ದಿಕ್ಕು ತಪ್ಪಿಸುವ ನಾಟಕವಷ್ಟೇ. ಬಿಜೆಪಿ ದೇಶದ ನೈಜ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆ ಮತ್ತು ಕುಸಿಯುತ್ತಿರುವ ಶಿಕ್ಷಣದ ಮೌಲ್ಯದ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.
ಭಾರತ ದೇಶದಲ್ಲಿನ ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ದಲಿತ ಸಮುದಾಯಗಳು ಕೋಪ ಮತ್ತು ದ್ವೇಷ ಹರಡುವಿಕೆಯಿಂದಾಗಿ ಆಕ್ರಮಣಕ್ಕೆ ಒಳಗಾಗುತ್ತಿದ್ದಾರೆ. ಭಾರತದಲ್ಲಿ ಕೆಲವೇ ಜನರು ತಮಗೇ ಎಲ್ಲವೂ ತಿಳಿದಿದೆ ಎಂದು ಕೊಂಡಿದ್ದಾರೆ. ಬೇರೆಯವರ ಮಾತನ್ನವರು ಕೇಳುವುದಿಲ್ಲ. ಅವರು ಇತಿಹಾಸವನ್ನು ಇತಿಹಾಸಕಾರರಿಗೆ, ವಿಜ್ಞಾನವನ್ನು ವಿಜ್ಞಾನಿಗಳಿಗೆ ಮತ್ತು ಯುದ್ಧವನ್ನು ಸೈನ್ಯಕ್ಕೆ ವಿವರಿಸಬಹುದು ಎಂದು ಅವರು ಭಾವಿಸುತ್ತಾರೆ. ಆದರೆ ಅದರ ತಿರುಳು ಸಾಧಾರಣ, ಕೇಳಲು ಅವರು ಸಿದ್ಧರಿಲ್ಲ ಎಂದು ರಾಹುಲ್ ಗಾಂಧಿ ಅಮೆರಿಕದಲ್ಲಿ ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾಧ್ಯಮಗಳ ವಿರುದ್ಧ ಕೂಡಾ ಅಸಮಾಧಾನ ಹೊರಹಾಕಿದ್ದಾರೆ. ಮಾಧ್ಯಮಗಳು ತೋರಿಸುತ್ತಿರುವ ಭಾರತ ನೈಜವಲ್ಲ, ಮಾಧ್ಯಮಗಳು ಬಿಜೆಪಿಯ ಹಿತಾಸಕ್ತಿಗಾಗಿ ನಿರ್ದಿಷ್ಟ ನಿರೂಪಣೆಯನ್ನು ಬಿಂಬಿಸುತ್ತವೆ ಎಂದು ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೇ 30 ಅಮೆರಿಕಕ್ಕೆ ತೆರಳಿದ್ದು ಸ್ಯಾನ್ ಫ್ರಾನ್ಸಿಸ್ಕೋದಿಂದ ತಮ್ಮ ಪ್ರವಾಸವನ್ನು ಪ್ರಾರಂಭಿಸಿ ವಾಷಿಂಗ್ಟನ್ ಮತ್ತು ನ್ಯೂಯಾರ್ಕ್ ಗೂ ಭೇಟಿ ಕೊಡಲಿದ್ದಾರೆ. ಜೂನ್ 4 ರಂದು ನ್ಯೂಯಾರ್ಕ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನ್ಯೂಯಾರ್ಕ್ನ ಜಾವಿಟ್ಸ್ ಸೆಂಟರ್ನಲ್ಲಿ ಸಂವಾದ ಏರ್ಪಡಿಸಲಾಗಿದೆ. ಈ ಹಿಂದೆ ರಾಹುಲ್ ಗಾಂಧಿ ಬ್ರಿಟನ್ಗೆ ಭೇಟಿ ನೀಡಿದ್ದಾಗಲೂ ಭಾರತಕ್ಕೆ ಸಂಬಂಧಪಟ್ಟಂತೆ ದೊಡ್ಡ ವಿವಾದವನ್ನೇ ಹುಟ್ಟುಹಾಕಿದ್ದರು. ಭಾರತೀಯ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂದು ಹೇಳಿದ್ದನ್ನು ನಾವು ಸ್ಮರಿಸಬಹುದಾಗಿದೆ.