i
ವಿಧವಾ ವಿವಾಹದ ಬಗ್ಗೆ ಸಂಕುಚಿತ ಮನೋಭಾವ ಬೇಡ:ದೇವಕುಮಾರ್…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನಾನಾ ಕಾರಣಗಳಿಂದ ಜೀವನ ಸಂಗಾತಿಯನ್ನು ಕಳೆದು ಕೊಂಡ ವಿಯೋಗಿಗಳಿಗೆ ಸಾಂತ್ವಾನ, ಸಹಾನುಭೂತಿ ವ್ಯಕ್ತಪಡಿಸಿದರಷ್ಟೇ ಸಾಲದು, ಅವರು ಮತ್ತೆ ಬದುಕು ಕಟ್ಟಿ ಕೊಳ್ಳುವಂತಹ ವಾತಾವರಣ ರೂಪಿಸಬೇಕು. ಅದರಲ್ಲೂ ಮದುವೆಯಾಗಿ ಕೆಲವೇ ದಿನ ಅಥವಾ ವರ್ಷಗಳನ್ನು ಕಳೆದು ವಿಯೋಗಿಗಳಾದವರ ಪುನರ್ವಿವಾಹವನ್ನು ಸಮಾಜ ಪ್ರೋತ್ಸಾಹಿಸಬೇಕು. ವಿಧವಾ ವಿವಾಹದ ಬಗ್ಗೆ ಸಂಕುಚಿತ ಮನೋಭಾವ ದೂರವಾಗಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ, ಸಾಮಾಜಿಕ ಚಿಂತಕ ಎನ್.ಹೆಚ್. ದೇವಕುಮಾರ್ ಹೇಳಿದರು.
ಇಲ್ಲಿನ ಹೊಳೆಹೊನ್ನೂರು ರಸ್ತೆಯ ಅರಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ 33 ವರ್ಷದ ಸುನಿಲ್ ಎಂಬ ವಿಧುರ ಮತ್ತು 27 ವರ್ಷದ ಜ್ಯೋತಿ ಎಂಬ ವಿಧವೆಯ ವಿವಾಹದ ನೇತೃತ್ವ ವಹಿಸಿ ಅವರು ಮಾಂಗಲ್ಯಧಾರಣೆಯ ನಂತರ ಮಾತನಾಡಿದರು.
ವಿಯೋಗಿಗಳು ಶೂನ್ಯ ಭಾವದಿಂದ ಹೊರಬರಲು ಅವರ ಅಂತರಂಗವನ್ನು ಅರ್ಥ ಮಾಡಿಕೊಳ್ಳುವವರ ಸಾಂಗತ್ಯ ಬೇಕು. ಶೋಕ, ಒಂಟಿತನದಿಂದ ನೊಂದ ಮನಸ್ಸಿಗೆ ಭಾವನಾತ್ಮಕ ಆಸರೆ ಅಗತ್ಯ. ಸಂಗಾತಿಯನ್ನು ಕಳೆದು ಕೊಂಡಾಗ ಆವರಿಸುವ ದುಖಃದಿಂದ ಸಾವರಿಸಿಕೊಂಡ ಬಳಿಕ ವಿಧವೆ ಮತ್ತು ವಿಧುರರು ಸ್ಫೂರ್ತಿ ಹಾಗೂ ಆಶಾದಾಯಕವಾಗಿ ಜೀವನ ನಡೆಸಬಲ್ಲರು ಎಂದರು.
ಗಂಡ ಅಥವಾ ಹೆಂಡತಿಯನ್ನು ಕಳೆದು ಕೊಂಡವರು ಪುನರ್ವಿವಾಹವಾದ ನಂತರ ಮೊದಲಿನಂತೆ ತಮ್ಮ ದಾಂಪತ್ಯದ ಬದುಕನ್ನು ಪುನರಾರಂಭಿಸಬೇಕಾದರೆ ತಮ್ಮ ಸಂಗಾತಿಯ ನೆನಪನ್ನು ಉಳಿಸಿಕೊಳ್ಳುವುದರೊಂದಿಗೆ ಮುಂದಿನ ಬದುಕನ್ನು ನಡೆಸಲು ಮಾನಸಿಕವಾಗಿ ಸನ್ನದ್ಧರಾಗಬೇಕು. ಇಂತಹವರನ್ನು ಸಮಾಜ ಬೆಂಬಲಿಸಬೇಕೆಂದರು.
ನಿವೃತ್ತ ಸರ್ಕಾರಿ ಉದ್ಯೋಗಿ, ಸಾಮಾಜಿಕ ಕಾರ್ಯಕರ್ತೆ ಗೀತಾ ಚಂದ್ರಶೇಖರ್ ವಿವಾಹದ ಉಸ್ತುವಾರಿ ವಹಿಸಿದ್ದರು. ವಿಧವೆ ಜ್ಯೋತಿ ಅವರ ಮಾವ ಬಾಲರಾಜು ಮತ್ತು ಅತ್ತೆ ಆಶಾ ಖುದ್ದಾಗಿ ಮುಂದೆ ನಿಂತು ತಮ್ಮ ಸೊಸೆಯನ್ನು ಧಾರೆ ಎರೆದುಕೊಟ್ಟರು. ವಧುವಿನ ತಂದೆ- ತಾಯಿ ಸಹ ಈ ವಿವಾಹದಲ್ಲಿ ಪಾಲ್ಗೊಂಡಿದ್ದರು.