i
ಚಿತ್ರದುರ್ಗದಲ್ಲಿ ನೂತನ ವೈದ್ಯಕೀಯ ಕಾಲೇಜಿನ ಭೂಮಿ ಪೂಜೆ ಶೀಘ್ರ-ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಕನಸನ್ನು ನನಸು ಮಾಡಲು ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಿ.ಸುಧಾಕರ ಮಾರ್ಗದರ್ಶನದಲ್ಲಿ ಶೀಘ್ರದಲ್ಲೇ ಚಿತ್ರದುರ್ಗ ನಗರದಲ್ಲಿ ನೂತನ ವೈದ್ಯಕೀಯ ಕಾಲೇಜಿನ ಭೂಮಿ ಪೂಜೆ ನಡೆಲಿದೆ, ನಗರದಲ್ಲಿ ಮಲ್ಟಿ ಸ್ಪೇಷಲಿಟಿ ಆಸ್ಪತ್ರೆ ಪ್ರಾರಂಭಿಸುವ ಯೋಜನೆ ಸಿದ್ದವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು, ನಗರದ ವಾಸವಿ ಮಹಲ್ನಲ್ಲಿ ವಾಸವಿ ಯುವಜನಸಂಘ ಮತ್ತು ವಾಸವಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಾಸವಿ ಯುವಜನಸಂಘ ತನ್ನ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಂಡಿದೆ. ಇಂದು ಕೆಲವು ಸಂಘಟನೆಗಳು ತಮ್ಮದೇಯಾದ ಜಾತಿ, ವರ್ಗಕ್ಕೆ ಸೀಮಿತವಾದರೆ ಆರ್ಯವೈಶ್ಯ ಸಮುದಾಯ ಸಮಸ್ತ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಕಾರ್ಯ ಮಾಡಿದೆ. ಈ ಪರಂಪರೆ ಹೀಗೆ ಮುಂದುವರೆಯಬೇಕು. ತಾಲ್ಲೂಕಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪ್ರಸ್ತುತ ವರ್ಷದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಗೌರವಿಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶುಭ ಹಾರೈಸುವ ಮೂಲಕ ಆರ್ಯವೈಶ್ಯ ಸಂಘ ಮತ್ತು ವಾಸವಿ ಯುವ ಜನಸಂಘ ಸಮಾಜಕ್ಕೆ ಮಾದರಿಯಾಗಿದೆ ಪ್ರಶಂಸೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಸವಿ ಯುವಜನಸಂಘದ ಅಧ್ಯಕ್ಷ ಆರ್.ಚೇತನ್ಕುಮಾರ್, ವಾಸವಿ ಯುವಜನಸಂಘ ಸಮಾಜದ ವಿವಿಧ ವರ್ಗಗಳ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಕಳೆದ ಸುಮಾರು ೪೦ ವರ್ಷಗಳಿಂದ ಮಾಡುತ್ತಾ ಬಂದಿದೆ. ನಮ್ಮ ಈ ಕಾರ್ಯಕ್ಕೆ ನಮ್ಮ ಸಮುದಾಯದ ಎಲ್ಲಾ ಸಂಘಟನೆಗಳ ಜೊತೆಗೆ ಸಮಾಜದ ಹಲವಾರು ಶಿಕ್ಷಣ ಪ್ರೇಮಿಗಳು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಶಿಕ್ಷಣ ಇಲಾಖೆಯೂ ಸಹ ನಮ್ಮ ಕಾರ್ಯಕ್ಕೆ ಹೆಚ್ಚು ಸಹಕಾರ ನೀಡುತ್ತಾ ಬಂದಿದೆ, ಮುಂದಿನ ದಿನಗಳಲ್ಲಿ ವಾಸವಿ ಯುವಜನಸಂಘದ ಎಲ್ಲಾ ಪದಾಧಿಕಾರಿಗಳ ಸಹಕಾರದೊಂದಿಗೆ ಇನ್ನೂ ಉತ್ತಮ ಕಾರ್ಯಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಜಿಲ್ಲಾ ಆರ್ಯವೈಶ್ಯ ಸಂಘದ ಅಧ್ಯಕ್ಷ ಎ.ಎನ್.ಚಿದಾನಂದಗುಪ್ತ, ತಾಲ್ಲೂಕು ಅಧ್ಯಕ್ಷ ವಿ.ಎಂ.ಕೃಷ್ಣಮೂರ್ತಿ, ವಾಣಿಜ್ಯೋದ್ಯಮಿ ಹಾಗೂ ಎಪಿಎಂಸಿ ಮಾಜಿ ನಾಮನಿರ್ದೇಶನ ಸದಸ್ಯರಾದ ರಘುನಾಥಬಾಬು, ಯುವ ಜನಸಂಘದ ಕೆ..ಎಸ್.ವಿಶ್ವನಾಥ, ಕಾರ್ತಿಕ್, ಎಂ.ರಾಘವೇಂದ್ರಗುಪ್ತ, ನಗರಸಭಾ ಸದಸ್ಯರಾದ ಸುಮಕ್ಕ, ಮಂಜುಳಾ, ಕವಿತಾ, ಸುಮಾ, ಸುಜಾತ, ಎಂ.ಆರ್.ಮಧು, ಫರೀದ್ಖಾನ್ ಮುಂತಾದವರು ಉಪಸ್ಥಿತರಿದ್ದರು.