i
ಬಂಗಾರದ ಆಭರಣಗಳ ಕಳವು ಮಾಡುತ್ತಿದ್ದ ಆರೋಪಿಗಳ ಬಂಧನ…
ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಪಟ್ಟಣದ ಜನರಿಗೆ ವಂಚಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ೨೦ ಲಕ್ಷ ರೂ. ಬೆಲೆ ಬಾಳುವ ೪೦೮ ಗ್ರಾಂ ಬಂಗಾರದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಜನರಿಗೆ ವಂಚನೆ ಮಾಡಿ ಬಂಗಾರದ ಒಡವೆಗಳನ್ನು ಕಳುವು ಮಾಡುತ್ತಿದ್ದ ಪಟ್ಟಣದ ಮೊಬಾರಕ್ ಮೊಹಲ್ಲಾದ ವಾಸಿಯಾದ ಎಸ್.ರಾಧಿಕಾ ೨೮ ವರ್ಷ ಹಾಗೂ ಈಕೆಯ ಗಂಡನಾದ ಆಂದ್ರದ ಕಲ್ಯಾಣದುರ್ಗ ಟೌನ್ ನ ಚಿನ್ನಂಪಲ್ಲಿ ಪಾರ್ಥಸಾರಥಿ ೩೧ ವರ್ಷ ಪತ್ತೆ ಹಚ್ಚಲಾಗಿದೆ. ಪಟ್ಟಣದ ಭೋವಿ ಕಾಲೋನಿ, ಮಾರುತಿ ಬಡಾವಣೆ ಸೇರಿದಂತೆ ಇನ್ನಿತರ ಪಟ್ಟಣ ವ್ಯಾಪ್ತಿಯ ಕೆಲ ಕುಟುಂಬಸ್ಥರಿಗೆ ನಿಮ್ಮ ಮನೆಗಳಲ್ಲಿನ ಕುಟುಂಬದ ಸಮಸ್ಯೆಗಳನ್ನು ಯಲ್ಲಮ್ಮದೇವಿಯ ಪೂಜೆ ಮಾಡುವ ಮೂಲಕ ನಿವಾರಣೆ ಮಾಡುತ್ತೇವೆಂದು ಜನರನ್ನು ನಂಬಿಸಿ ಅವರವರ ಮನೆಗಳಲ್ಲಿ ಯಲ್ಲಮ್ಮದೇವಿಯ ಪೂಜೆ ಮಾಡುವ ಸಮಯದಲ್ಲಿ ದೂರುದಾರರಾದ ಚಂದ್ರಕಲಾ ಹಾಗೂ ಇತರೆಯವರ ಬಂಗಾರದ ಒಡವೆಗಳನ್ನು ಪೂಜೆಗೆ ಇಡಿಸಿ , ಅವರಿಗೆ ಕಣ್ಣು ಮುಚ್ಚಿ ಧ್ಯಾನ ಮಾಡಲು ಹೇಳಿ ದೂರುದಾರರಿಗೆ ಕಾಣದಂತೆ ಪೂಜೆಗೆ ಇಟ್ಟಿದ್ದ ಬಂಗಾರದ ಒಡವೆಗಳನ್ನು ನಂಬಿಸಿ ಕಳುವು ಮಾಡಿದ್ದಾರೆ. ಕಳುವು ಮಾಡಿದ ಬಂಗಾರದ ಒಡವೆಗಳನ್ನು ಹೋದ ಆರೋಪಿಗಳು ಮೊಳಕಾಲ್ಮೂರು ಪಟ್ಟಣದಲ್ಲಿರುವ ಆಸೀರ್ವಾದ್ ಮೈಕ್ರೋ ಫೈನಾನ್ಸ್ ಹಾಗೂ ಆಂದ್ರದ ರಾಯದುರ್ಗ ಪಟ್ಟಣದ ಮಣಿಪುರಂ ಫೈನಾನ್ಸ್ ಮತ್ತು ಮುತ್ತೂಟ್ ಫೈನಾನ್ಸ್ ನಂತರ ಆಂದ್ರದ ಕಲ್ಯಾಣದುರ್ಗದ ಮುತ್ತೂಟ್ ಫೈನಾನ್ಸ್ ಗಳಲ್ಲಿ ಗಿರವಿ ಇಟ್ಟು ಈ ಎಲ್ಲಾ ಫೈನಾನ್ಸ್ ಗಳಲ್ಲಿ ನಗದು ಹಣವನ್ನು ಸಾಲ ತೆಗೆದುಕೊಂಡು ಬಹುತೇಕ ಕುಟುಂಬಸ್ಥರಿಗೆ ಮೋಸ ಮಾಡಿರುತ್ತಾರೆ. ಮೋಸ ಹೋದ ಬಿ.ಚಂದ್ರಕಲಾ ರವರು ಮೊಳಕಾಲ್ಮೂರು ಠಾಣೆಯಲ್ಲಿ ಏಪ್ರಿಲ್ ೧೧ ರಂದು ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದಂತೆ ಆರೋಪಿಗಳಾದ ಎಸ್.ರಾಧಿಕಾ ಹಾಗೂ ಗಂಡ ಪಾರ್ಥಸಾರಥಿ ರವರು ತಲೆ ಮರೆಸಿಕೊಂಡಿದ್ದರು. ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಕೆ.ಕುಮಾರಸ್ವಾಮಿ ಮಾರ್ಗದರ್ಶನದ ಮೇರೆಗೆ ಡಿ.ವೈ.ಎಸ್.ಪಿ. ರಮೇಶ್ ಕುಮಾರ್. ಹೆಚ್.ಬಿ., ಪೊಲೀಸ್ ವೃತ್ತ ನಿರೀಕ್ಷಕ ಎನ್.ಸತೀಶ್ ರವರ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಜಿ.ಪಾಂಡುರಂಗ, ಕ್ರೈಂ ಪಿ.ಎಸ್.ಐ. ಈರೇಶ್ , ಎ.ಎಸ್.ಐ. ತಿಮ್ಮಣ್ಣ, ಮಂಜಣ್ಣ, ಸಿ.ಹೆಚ್.ಸಿ. ಗಳಾದ ದೇವರಾಜ ಈ.ಎಂ.ಬಾಷಾ, ವೀರಣ್ಣ, ಸಿ.ಪಿ.ಸಿ. ಖಾದರ್ ಬಾಷಾ, ಶಿವಾನಂದ, ಮಾರಣ್ಣ, ಮುರಿಗೇಂದ್ರಪ್ಪ, ಮಹಿಳಾ ಪೊಲೀಸ್ ಸಿಬ್ಬಂದಿ ಸರಸ್ವತಿ ಹಾಗೂ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ ಆರೋಪಿತರಿಂದ ೨೦ ಲಕ್ಷ ರೂ.ಮೌಲ್ಯದ ೪೦೮ ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಸ್ವಾದೀನ ಪಡಿಸಿಕೊಳ್ಳಲಾಗಿದೆ. ಹಾಗೆಯೇ ೧೦ ಲಕ್ಷ ರೂ.ಬೆಲೆ ಬಾಳುವ ಒಟ್ಟು ೨೧೩ ಗ್ರಾಂ, ೯೩೦ ಮಿಲಿ ಬಂಗಾರದ ಒಡವೆಗಳನ್ನು ರಾಯದುರ್ಗ ಮತ್ತು ಕಲ್ಯಾಣದುರ್ಗದ ಮುತ್ತೂಟ್ ಫೈನಾನ್ಸ್ ಗಳಲ್ಲಿ ಅಡವಿಟ್ಟ ಮಾಹಿತಿ ಪತ್ತೆ ಮಾಡಿ ದಾಖಲೆಗಳನ್ನು ಸಂಗ್ರಹಿಸಿ ಕಾನೂನು ಕ್ರಮ ಕೈಗೊಂಡಿರುತ್ತದೆ ಎಂದು ತಿಳಿಸಲಾಗಿದೆ.