i
ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿ-ನಾರಾಯಣಾಚಾರ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಯ ಮೀಸಲಾತಿ ಪ್ರಕಟಿಸುವಂತೆ ಕರ್ನಾಟಕ ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್. ನಾರಾಯಣಾಚಾರ್ ಹಿರಿಯೂರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ರಾಜ್ಯದ ಮೀಸಲಾತಿ ಅವಧಿ ಮುಗಿದ ನಗರಸಭೆಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರಿಗೆ ನಗರಸಭೆಗೆ ಜಿಲ್ಲಾಧಿಕಾರಿ, ಪುರಸಭೆಗೆ ಉಪವಿಭಾಗಾಧಿಕಾರಿ, ಪಟ್ಟಣ ಪಂಚಾಯಿತಿಗೆ ತಾಲೂಕು ತಹಸೀಲ್ದಾರರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿರುತ್ತದೆ.
ಈ ಅಧಿಸೂಚನೆಯಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮ 1964, ಕಲಂ 42 ಉಪ ಕಲಂ (5) ನ್ನು ಕಾಣಿಸಿದೆ, ಈ ಕಲಮಿನಲ್ಲಿ ಸ್ಪಷ್ಟತೆ ಇದೆ, ಈ ನಿಯಮದಲ್ಲಿ ಆಡಳಿತ ಅಧಿಕಾರಿಗಳ ಪದ ಇರುವುದಿಲ್ಲ. ನಂತರ ಅದೇ ಅಧಿಸೂಚನೆಯ ಎರಡನೇ ಪ್ಯಾರದಲ್ಲಿ, ಕಲಂ 315ನ್ನು ಉಲ್ಲೇಖಿಸಿ ಅಂತಿಮವಾಗಿ ಆಡಳಿತ ಅಧಿಕಾರಿಗಳನ್ನಾಗಿ ನೇಮಿಸಿದೆ. ಅದರಂತೆ ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಆಡಳಿತಾಧಿಕಾರಿಗಳಾಗಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದು ತಪ್ಪೆಂದು ಇದಕ್ಕೆ ತಿದ್ದೋಲೆ ತರಲು ಸರ್ಕಾರಕ್ಕೆ ಅವರು ಮನವಿ ಮಾಡಿದ್ದರೂ ಸರ್ಕಾರ ಗಂಭೀರ ಪ್ರಯತ್ನ ಮಾಡಿಲ್ಲ ಅಲ್ಲದೆ ಆ ಮನವಿಯನ್ನು ಕಾನೂನಾತ್ಮಕ ಸರ್ಕಾರ ಪರಿಗಣಿಸಲಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ ಮತ್ತು ತಹಸೀಲ್ದಾರರುಗಳಿಗೆ, ಅವರದೇ ಆದ ಕಾರ್ಯ ಒತ್ತಡ ಇರುವುದರಿಂದ ಸ್ಥಳೀಯ ಸಂಸ್ಥೆಗಳ ಆಡಳಿತದ ಮೇಲೆ ಗಮನಹರಿಸುವುದು ಕಷ್ಟ ಸಾಧ್ಯವಾಗಿರುತ್ತದೆ. ಹಿಂದಿನ ರಾಜ್ಯ ಸರ್ಕಾರ ಸಹ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸದೇ ಇದ್ದಿದ್ದು ಅತ್ಯಂತ ವಿಪರ್ಯಾಸದ ಸಂಗತಿ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಕುಂಟಿತವಾಗಲಿದೆ ಎಂದು ನಾರಾಯಣಾಚಾರ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಸರಿಯಾದ ಸಮಯಕ್ಕೆ ಮೀಸಲಾತಿ ಕುರಿತು ಅಧಿಸೂಚನೆ ಹೊರಡಿಸದೇ, ಅಧ್ಯಕ್ಷ ಉಪಾಧ್ಯಕ್ಷರ ಅಧಿಕಾರ ಅವಧಿನ್ನು ಮೊಟಕುಗೊಳಿಸುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆ ಮಾಡಿದಂತಾಗುತ್ತದೆ, ಕಾರಣ ಈ ಕೂಡಲೇ ಮೀಸಲಾತಿ ಅಧಿಸೂಚನೆ ಹೊರಡಿಸಿ, ಈ ಅಪಕೀರ್ತಿಗೆ ತಮ್ಮ ಸರ್ಕಾರ ಗುರಿಯಾಗುವುದನ್ನು ತಪ್ಪಿಸಲು ಅವರು ಎಚ್ಚರಿಸಿದ್ದಾರೆ.
ವಿಧಾನಸಭೆಯ ಚುನಾಯಿತ ಸದಸ್ಯರಿಗೆ ಮಾತ್ರ ಒಂದು ಕಾನೂನು, ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರಿಗೆ ಇನ್ನೊಂದು ಕಾನೂನು ಎಷ್ಟು ಸಮಂಜಸ? ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನೂತನ ಸರ್ಕಾರ ಎಚ್ಚೆತ್ತುಕೊಂಡು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ವಿಳಂಬ ಮಾಡದೆ ಪ್ರಕಟಿಸುವಂತೆ ಕರ್ನಾಟಕ ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್. ನಾರಾಯಣಾಚಾರ್ ಹಿರಿಯೂರು ಒತ್ತಾಯಿಸಿದ್ದಾರೆ.