i
ಬಿತ್ತನೆ ಬೀಜಗಳ ಪ್ಯಾಕೇಟ್ಗಳ ಮೇಲೆ ಕ್ಯೂ-ಆರ್ ಕೋಡ್ ಕಡ್ಡಾಯ- ಉಲ್ಫತ್ಜೈಬಾ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರೈತ ಸಂಪರ್ಕ ಕೇಂದ್ರಗಳಲ್ಲಿ ಇದೇ ಪ್ರಥಮ ಬಾರಿಗೆ ಬಿತ್ತನೆ ಬೀಜಗಳ ಪ್ಯಾಕೇಟ್ಗಳ ಮೇಲೆ ಕ್ಯೂ-ಆರ್ ಕೋಡ್ ಇರುವ ಬಿತ್ತನೆ ಬೀಜದ ಪ್ಯಾಕೇಟ್ ದಾಸ್ತಾನು ಮಾಡಲಾಗುತ್ತಿದೆ ಎಂದು ಹಿರಿಯೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಉಲ್ಫತ್ಜೈಬಾ. ಜೆ ಮಾಹಿತಿ ನೀಡಿದರು.
ತಾಲೂಕಿನ ಯರಬಳ್ಳಿ ಗ್ರಾಮದ ಕೆ.ಓ.ಎಫ್ ಗೋಡನ್ ಮಳಿಗೆಯಲ್ಲಿ ಶೇಂಗಾ ಬಿತ್ತನೆ ಬೀಜದ ಗುಣಮಟ್ಟ ಪರಿಶೀಲಿಸಿ ಅವರು ಮಾತನಾಡಿದರು.
ತಾಲೂಕಿನ ಮುಖ್ಯ ಬೆಳೆಗಳಾದ ಶೇಂಗಾ, ರಾಗಿ, ಮೆಕ್ಕೇಜೋಳ, ಸೂರ್ಯಕಾಂತಿ ಇತ್ಯಾದಿ ಬೆಳೆಗಳನ್ನು ಬಿತ್ತುವುದು ಸಾಮಾನ್ಯವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗುಣಮಟ್ಟದ ಬಿತ್ತನೆ ಬೀಜಗಳ ದಾಸ್ತಾನಿಗೆ ಆದ್ಯತೆ ನೀಡಲಾಗಿದ್ದು, ಒಂದು ವೇಳೆ ಕಳಪೆ ಗುಣಮಟ್ಟ ಹೊಂದಿದ ಬಿತ್ತನೆ ಬೀಜಗಳು ಕಂಡುಬಂದಲ್ಲಿ ಸಂಬಂದಿಸಿದ ಸರಬರಾಜುದಾರರಿಗೆ ಹಿಂದಿರುಗಿಸಲಾಗುವುದು ಎಂದು ತಿಳಿಸಿದರು.
ರೈತರು ಸಹ ಖರೀದಿ ಮಾಡುವಾಗ ಸ್ಥಳದಲ್ಲಿ ಬಿತ್ತನೆ ಬೀಜಗಳ ಗುಣಮಟ್ಟ ಪರಿಶೀಲಿಸಿ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಶೇಂಗಾ, ತೊಗರಿ, ಮೆಕ್ಕೇಜೋಳ, ಸೂರ್ಯಕಾಂತಿ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದ್ದು, ವಿತರಣೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ರಸಗೊಬ್ಬರವನ್ನು ನಿಗಧಿತ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಕೃಷಿ ಪರಿಕರ ಮಾರಾಟಗಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.
ಬಿತ್ತನೆ ಬೀಜಗಳ ವಿತರಣೆ ಸಂದರ್ಭದಲ್ಲಿ ಕ್ಯೂ-ಆರ್ ಕೋಡ್ ಸ್ಕ್ಯಾನ್ ಮಾಡಿ ಸೀಡ್ ಎಂ.ಐ.ಎಸ್ ನಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿದ ನಂತರವೇ ಬಿಲ್ ಜನರೇಟ್ ಆಗುತ್ತದೆ ಎಂದು ತಿಳಿಸಿದರು.
ಕಸಬಾ, ಧರ್ಮಪುರ, ಐಮಂಗಲ ಹಾಗೂ ಜೆ.ಜಿ ಹಳ್ಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರವು ೧ ಕ್ವಿಂಟಾಲ್ ಶೇಂಗಾಕ್ಕೆ ಒಟ್ಟು 8850 ರೂ. ನಿಗಧಿ ಮಾಡಿದ್ದು, ಇದರಲ್ಲಿ 1400 ರೂ. ಸಾಮಾನ್ಯ ವರ್ಗದ ರೈತರಿಗೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ 2100 ರೂ. ರಿಯಾಯಿತಿ ಇರುತ್ತದೆ.
ಬಾರ್ ಕೋಡ್/ಕ್ಯೂ-ಆರ್ ಕೋಡ್: ಕೆ ಕಿಸಾನ್ ತಂತ್ರಾಂಶದ ನೆರವಿನಿಂದ ಈ ನೂತನ ಬಾರ್ ಕೋಡ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪರಿಕರಗಳನ್ನು ದಾಸ್ತಾನಿಗೆ ಸ್ವೀಕರಿಸುವ ಹಾಗೂ ರೈತರಿಗೆ ವಿತರಿಸುವ ಪ್ರಕ್ರಿಯೆ ಇದರಡಿ ನೆಡೆಯಲಿದೆ. ರೈತರು ಬಿತ್ತನೆ ಬೀಜ ಪಡೆಯಲು ಎಫ್.ಐ.ಡಿ ಕಾರ್ಡ್ /ಆಧಾರ್ ಕಾರ್ಡ್ ಅಗತ್ಯವಿರುತ್ತದೆ. ಬಾರ್ ಕೋಡ್ ತಂತ್ರಜ್ಞಾನ ಬಳಕೆಯಿಂದ ಕೃಷಿ ಪರಿಕರ ವಿತರಣೆಯಲ್ಲಿ ಪಾರದರ್ಶಕತೆ ಬರಲಿದೆ ಹಾಗೂ ಈ ವ್ಯವಸ್ಥೆಯ ನಿರ್ವಹಣೆಗೆ ಇಲಾಖಾ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಉಲ್ಫತ್ಜೈಬಾ. ಜೆ ಮಾಹಿತಿ ನೀಡಿದರು.