i
ಹಿರಿಯೂರು ನಗರಸಭೆ ಅಧಿಕಾರಿಗಳ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಸಚಿವ ಸುಧಾಕರ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವಂತಿದ್ದರೆ ಉಳಿಯಬೇಕು, ಇಲ್ಲ ಜಾಗ ಖಾಲಿ ಮಾಡಿಕೊಂಡು ಹೋಗಬೇಕು ಎಂದು ಸಚಿವ ಡಿ.ಸುಧಾಕರ್ ತೀವ್ರ ರೀತಿಯ ಎಚ್ಚರಿಕೆಯನ್ನು ನಗರಸಭೆ ಅಧಿಕಾರಿ, ಸಿಬ್ಬಂದಿಗಳಿಗೆ ನೀಡಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಇಸ್ವತ್ತು ಮಾಡಿಕೊಡಲು ಅಧಿಕಾರಿಗಳು ಸಾರ್ವಜನಿಕರನ್ನು ಅಲೆಸಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲಾಗುವುದು. ಮಧ್ಯವರ್ತಿಗಳ ಮೂಲಕ ಕೆಲಸ ಮಾಡಿಕೊಡುವ ಅನಿಷ್ಟ ಪದ್ದತಿ ಇಂದೇ ಕೊನೆಗೊಳ್ಳಬೇಕು. ಇಸ್ವತ್ತು ಸೇರಿದಂತೆ ಯಾವುದೇ ರೀತಿಯ ಕೆಲಸ ಕಾರ್ಯಗಳಿಗೆ ನಗರಸಭೆ ಅಧಿಕಾರಿ, ಸಿಬ್ಬಂದಿಗಳು ಹಣಕ್ಕೆ ಬೇಡಿಕೆ ಇಟ್ಟರೆ ನನ್ನ ಗಮನಕ್ಕೆ ತರುವಂತೆ ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸಾರ್ವಜನಿಕರು ಹಣಕ್ಕೆ ಬೇಡಿಕೆ ಇಟ್ಟು ಹಣ ನೀಡದಿದ್ದರೆ ಸಾರ್ವಜನಿಕರಿಗೆ ಆಗಬೇಕಾದ ಕೆಲಸ ಕಾರ್ಯಗಳು ವಿಳಂಬವಾದರೆ ಪ್ರತಿಯೊಬ್ಬರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು. ನಗರಸಭೆ ಆಡಳಿತ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಜಿಡ್ಡುಗಟ್ಟಿದ ಆಡಳಿತ ಇಂದೇ ಕೊನೆಗೊಳ್ಳಬೇಕು. ಯಾವ ಹಂತದಲ್ಲಿ ಸಾರ್ವಜನಿಕರ ಕಡತ ವಿಳಂಬವಾಗಿದೆ ಎಂದು ತಿಳಿದು ಬಂದರೆ ಕೂಡಲೇ ಅಂತಹ ಅಧಿಕಾರಿ ಮನೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಚಿವರು ಮಾತನಾಡುವ ಮೊದಲು ನಗರಸಭೆ ಅಧಿಕಾರಿಗಳ ವಿರುದ್ಧ ಸದಸ್ಯರು ನೂರಾರು ದೂರುಗಳನ್ನು ಸಚಿವರ ಎದುರೇ. ಹೇಳಿ ಆಕ್ರೋಶ ವ್ಯಕ್ತಪಡಿಸಿದರು. ಬಹುತೇಕ ಸದಸ್ಯರು ನಗರಸಭೆಯ ಕೆಲಸ ಕಾರ್ಯಗಳು ಆಗದೆ ವಿಳಂಬ ಆಗುತ್ತಿರುವುದಕ್ಕೆ ದೂರುಗಳ ಸುರಿ ಮಳೆಗೈದರು.
ನಗರಸಭೆಯಲ್ಲಿ ಸದಸ್ಯರಿಗೆ ಬಿಡಿಗಾಸಿನ ಬೆಲೆ ಇಲ್ಲ. ಸದಸ್ಯರು ಹೇಳುವ ಯಾವ ಕೆಲಸ ಆಗುವುದಿಲ್ಲ. ಆದರೆ ಮಧ್ಯವರ್ತಿಗಳ ಮೂಲಕ ಬಂದರೆ ಒಂದೇ ದಿನದಲ್ಲಿ ಎಲ್ಲ ಕೆಲಸಗಳು ಸಲೀಸಾಗಿ ಆಗಲಿವೆ. ಹೀಗಾದರೆ ಸದಸ್ಯರು ವಾರ್ಡ್ ಗಳಲ್ಲಿ ಏನು ಕೆಲಸ ಮಾಡಬೇಕು. ನೀವೇ ಹೇಳಿ ಸ್ವಾಮಿ ಎಂದು ಸಚಿವರನ್ನು ಪ್ರಶ್ನಿಸಿದರು.
ನಗರಸಭೆ ಆಡಳಿತ ಸಂಪೂರ್ಣ ಜಿಡ್ಡುಗಟ್ಟಿದೆ. ಯಾವುದೇ ಕೆಲಸ ಕಾರ್ಯಗಳು ಸುಲಭವಾಗಿ ಆಗುತ್ತಿಲ್ಲ, ಮತ ನೀಡಿದ ವಾರ್ಡ್ ಮತದಾರರಿಗೆ ಸದಸ್ಯರು ಹೇಗೆ ಉತ್ತರಿಸಬೇಕೆಂದು ನಗರಸಭೆ ಸದಸ್ಯರು ಸಚಿವ ಸುಧಾಕರ್ ಅವರ ಬಳಿ ಅಳಲು ತೋಡಿಕೊಂಡರು.
ಇ-ಸ್ವತ್ತು ಮಾಡಿಕೊಡಲು ಎರಡು ಮೂರು ಸರಿ ಹೇಳಿದರೂ ಮಾಡಿಕೊಡುವುದಿಲ್ಲ ಅದೇ ಮಧ್ಯವರ್ತಿಗಳ ಮೂಲಕ ಹೋದರೆ ಬೇಗ ಇ-ಸತ್ತು ಕೈಗೆ ಸಿಗುತ್ತದೆ. ನಗರಸಭೆಯಲ್ಲಿ ಮಧ್ಯವರ್ತಿಗಳಿಗೆ ಇರುವ ಬೆಲೆ ಸದಸ್ಯರಿಗೆ ಇಲ್ಲ. ಇಂತಹ ಅಧಿಕಾರಿಗಳು ಬೇಕಾ ಎಂದು ನಗರ ಸಭೆ ಸದಸ್ಯರು ಬೇಸರ ವ್ಯಕ್ತಪಡಿಸಿದರು. ನಗರಸಭೆಯಲ್ಲಿ ಬಹಳಷ್ಟು ಸಿಬ್ಬಂದಿಗಳು ನಿರ್ವಹಿಸುತ್ತಿರುವ ಹುದ್ದೆಗೆ ಬೇಕಿರುವ ವಿದ್ಯಾರ್ಹತೆ ಹೊಂದಿಲ್ಲ. ಪ್ರಥಮ ದರ್ಜೆ ಸಹಾಯಕರಿಗೆ ಕಂದಾಯ ಅಧಿಕಾರಿ ಹುದ್ದೆ, ದ್ವಿತೀಯ ದರ್ಜೆ ಸಹಾಯಕರಿಗೆ ಪ್ರಥಮ ದರ್ಜೆ ಸಹಾಯಕರ ಹುದ್ದೆ ನೀಡಲಾಗಿದೆ. ಪ್ರಸ್ತುತ ನಗರಸಭೆಯಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವಿದೆ. ಹುದ್ದೆಗೆ ತಕ್ಕವರನ್ನ ನೇಮಕ ಮಾಡಬೇಕೆಂದು ಸದಸ್ಯರು ಸಚಿವರಲ್ಲಿ ಮನವಿ ಮಾಡಿದರು.
ಬಿಜೆಪಿ ಆಡಳಿತ ಅವಧಿಯಲ್ಲಿ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತ ಇದೆ ಎಂಬ ಕಾರಣಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬರಲಿಲ್ಲ. ತಾವು ಶಾಸಕರಾಗಿದ್ದ ಅವಧಿಯಲ್ಲಿ ಸಾಕಷ್ಟು ಅನುದಾನ ಬಳಕೆ ಮಾಡಲಾಗಿದೆ. ನಗರದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಲು ಸಂಬಂಧಪಟ್ಟವರಿಗೆ ಸೂಚಿಸಿ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸಬೇಕೆಂದು ನಗರಸಭೆ ಸದಸ್ಯರು ಮನವಿ ಮಾಡಿದರು.
ಚರಂಡಿ ರಸ್ತೆಗಳ ಅಭಿವೃದ್ಧಿ, ಮಳೆಯ ನೀರಿನಿಂದ ಹಾನಿಯಾಗದಂತೆ ತಡೆಯುವ ವ್ಯವಸ್ಥೆ, ಉದ್ಯಾನವನಗಳು ಅಭಿವೃದ್ಧಿ ಆಗಬೇಕಿದೆ. ಸ್ವಚ್ಛತೆ ನಿವಾರಣೆಗೆ ಅಗತ್ಯ ಇರುವಷ್ಟು ಪೌರ ಕಾರ್ಮಿಕರನ್ನ ನೇಮಿಸುವ ವ್ಯವಸ್ಥೆ ಆಗಬೇಕಿದೆ ಎಂದು ಸದಸ್ಯರು ಸಚಿವರ ಗಮನಕ್ಕೆ ತಂದರು.