
ಭೂ ಮಾಪನ ಕಚೇರಿಗಳ ಮೇಲೆ ಲೋಕಾಯುಕ್ತರ ದಿಢೀರ್ ದಾಳಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಸುತ್ತ ಮುತ್ತಲ ಭೂ ಮಾಪನ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿರುವ ಕುರಿತು ಸಾರ್ವಜನಿಕರಿಂದ ಕೇಳಿ ಬಂದ ದೂರುಗಳನ್ನು ಆಧರಿಸಿ ಬೆಂಗಳೂರು ಲೋಕಾಯುಕ್ತರು ಸೋಮವಾರ ದಿಢೀರ್ ದಾಳಿ ನಡೆಸಿ ಹಲವು ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದ್ದಾರೆ.
ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಒಟ್ಟು 11 ಭೂ ಮಾಪನ ಇಲಾಖೆಯ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಸರ್ವೆಗಳಿಗೆ ಸಂಬಂಧಿಸಿದ ಕಡತಗಳ ವಿಲೇವಾರಿಯಲ್ಲಿನ ಅಕ್ರಮ ಹಣಕ್ಕೆ ಬೇಡಿಕೆ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಭೂದಾಖಲೆ ನಿರ್ದೇಶಕರ ಕಚೇರಿ (ಡಿಡಿಎಲ್ಆರ್) ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ (ಎಡಿಎಲ್ಆರ್)ಗಳಲ್ಲಿ ಲೋಕಾಯುಕ್ತ ಕಾರ್ಯಾಚರಣೆ ಕೈಗೊಂಡಿದೆ. ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಮೇಲೆ ಖುದ್ದು ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ದೊಡ್ಡಬಳ್ಳಾಪುರ ಎಡಿಎಲ್ಆರ್,
ಡಿಡಿಎಲ್ಆರ್ ಕಚೇರಿ, ದೊಡ್ಡಬಳ್ಳಾಪುರ – ಚಪ್ರಕಲ್ಲು ರಸ್ತೆಯ ದೇವನಹಳ್ಳಿ ಎಡಿಎಲ್ಆರ್ ಕಚೇರಿ, ಆನೇಕಲ್ ಎಡಿಎಲ್ಆರ್ ಕಚೇರಿ, ಕೆ.ಆರ್.ಪುರಂ ಎಡಿಎಲ್ಆರ್, ಉತ್ತರ ವಿಭಾಗದ ಎಡಿಎಲ್ಆರ್, ಕಂದಾಯ ಭವನ
ಡಿಡಿಎಲ್ಆರ್, ಡಿಸಿ ಬೆಂಗಳೂರು ನಗರ, ಕಂದಾಯ ಭವನ, ನೆಲಮಂಗಲ ಎಡಿಎಲ್ಆರ್, ಹೊಸಕೋಟೆ ಎಡಿಎಲ್ಆರ್, ಎಡಿಎಲ್ಆರ್ ದಕ್ಷಿಣ, ಕಂದಾಯ ಭವನ, ಯಲಹಂಕ ಎಡಿಎಲ್ಆರ್ ಕಚೇರಿ ಮೇಲೆ ಲೋಕಾಯುಕ್ತರು ದಾಳಿ ಮಾಡಿ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದ್ದಾರೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಎಲ್ಲಾ ಎಡಿಎಲ್ಆರ್ ಕಚೇರಿಗಳನ್ನು ಸರ್ಪ್ರೈಸ್ ವಿಸಿಟ್ ಮಾಡಲಾಗುತ್ತಿದೆ. ರಿಜಿಸ್ಟರ್ ಸಹ ಸರಿಯಾಗಿ ನಿರ್ವಹಣೆ ಮಾಡಿಲ್ಲ ಸಾರ್ವಜನಿಕರ ಅರ್ಜಿಗಳನ್ನು ವಿನಾಕಾರಣ ರಿಜೆಕ್ಟ್ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದೇವೆಂದು ಲೋಕಾಯುಕ್ತ ಬಿ.ಎಸ್. ಪಾಟೀಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.