i
ಪರಿಶಿಷ್ಟ ಪಂಗಡದ ಮೀಸಲಾತಿ ಹೋರಾಟಕ್ಕೆ ಕಾಡುಗೊಲ್ಲ ಮುಖಂಡರ ಕರೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿಂದುಳಿದ ಬುಡಕಟ್ಟು ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಅತಿ ಶೀಘ್ರದಲ್ಲೇ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಸಮಾಜದ ಮುಖಂಡರು ತಿಳಿಸಿದರು.
ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಒಂದೆಡೆ ಸೇರಿದ ಮುಖಂಡರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ,
ತಾಲ್ಲೂಕಿನದ್ಯಾಂತ ಮೀಸಲಾತಿ ಜಾಗೃತಿ ಆರಂಭಿಸಿದರು.
ತಾಲ್ಲೂಕಿನ ಬಬ್ಬೂರು ಗೊಲ್ಲರಹಟ್ಟಿ, ಚಿತ್ರದೇವರಹಟ್ಟಿ, ಟಿಬಿ ಗೊಲ್ಲರಹಟ್ಟಿ, ಕೂಡ್ಲಹಳ್ಳಿ, ಈಶ್ವರಗೆರೆ ಗೊಲ್ಲರಹಟ್ಟಿ, ಗೊಲ್ಲಹಳ್ಳಿ, ಹರಿಯಬ್ಬೆ ಈಗೆ ವಿವಿಧ ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿದ ಮುಖಂಡರು ಹಟ್ಟಿಯ ಪೂಜಾರಿ, ಗೌಡ, ಹಿರಿಯರು, ಕಿರಿಯರನ್ನು ಭೇಟಿ ಮಾಡಿ, ಸಮುದಾಯದ ಎಸ್ಟಿ ಹೋರಾಟದ ಬಗ್ಗೆ ವಿವರಿಸಿದರು.
ಡಿಸೆಂಬರ್ 4 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಹಿರಿಯೂರಿನ ಎಪಿಎಂಸಿ ಆವರಣದಲ್ಲಿ ತಾಲೂಕು ಮಟ್ಟದ ಸಭೆ ಕರೆಯಲಾಗಿದೆ ತಾಲ್ಲೂಕಿನ ನಮ್ಮ ಸಮಾಜದ ಮಹಿಳೆಯರು, ಪುರುಷರು, ಯುವಕರು, ಚಿಂತಕರು, ಹೋರಾಟಗಾರರು ಸಭೆಗೆ ಆಗಮಿಸಬೇಕು ಎಂದು ತಿಳಿಸಿದರು.
ವಿಶಿಷ್ಟ ಬುಡಕಟ್ಟು ಲಕ್ಷಣಗಳನ್ನು ಹೊಂದಿರುವ ನಮ್ಮ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದೆ. ಇತರೇ ಸಮುದಾಯಗಳಂತೆ ನಾವು ಎಲ್ಲಾ ಕ್ಷೇತ್ರಗಳಲ್ಲೂ ಅಸ್ತಿತ್ವ ಕಂಡುಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಮೀಸಲಾತಿ ಹೋರಾಟ ನಡೆಸುವ ಅವಶ್ಯಕತೆ ಇದೆ ಎಂದರು.
ಮುಖಂಡರು ಹಟ್ಟಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಸರ್ಕಾರದಿಂದ ನಮಗೆ ಯಾವುದೇ ರೀತಿಯ ಸೌಲಭ್ಯಗಳು ದೊರೆಯುತ್ತಿಲ್ಲ. ಗ್ರಾಮಕ್ಕೆ ಕುಡಿಯುವ ನೀರು, ರಸ್ತೆ, ಮನೆಗಳು ಸಿಗುತ್ತಿಲ್ಲ, ನಮ್ಮ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿಲ್ಲ. ನಾವು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೆವೆ. ನಾವು ಹಲವಾರು ವರ್ಷಗಳಿಂದ ಗುಡಿಸಿಲಿನಲ್ಲಿ ವಾಸ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ನಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳಿಕೊಳ್ಳೋಣ ಎಂದು ಮುಖಂಡರ ಮುಂದೆ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಮುಖಂಡರಾದ ಸಿದ್ದೇಶ್ ಯಾದವ್, ಜಿಪಂ ಮಾಜಿ ಸದಸ್ಯ ಸಿಬಿ ಪಾಪಣ್ಣ, ಮೂಡಲಗಿರಿಯಪ್ಪ, ಕೆಟಿ ತಿಪ್ಪೇಸ್ವಾಮಿ, ರಾಜ್ ಕುಮಾರ್, ಎಸ್.ಆರ್. ತಿಪ್ಪೇಸ್ವಾಮಿ, ಚಿತ್ರಜಿತ್ ಯಾದವ್, ಹೇಮಂತ್, ಪುಟ್ಟೇಗೌಡ, ಪೂಜಾರಿ ರಂಗಯ್ಯ, ಕೇಶವ್, ಆಲದಮರದ ಹಟ್ಟಿ ರಂಗಯ್ಯ, ಕೇಂದ್ರ ಸಚಿವವ ಆಪ್ತ ಸಹಾಯಕ ಉಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.