i
ಲೆಕ್ಕಪತ್ರಗಳ ನಿರ್ವಹಣೆ ಮರೆತ ನಗರ ಸ್ಥಳೀಯ ಸಂಸ್ಥೆಗಳು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ಪೌರ ಸಭೆಗಳ ಕಾಯ್ದೆ 1964 ಸೆಕ್ಷನ್ 289 ರ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಮಾಸಿಕ ಮತ್ತು ವಾರ್ಷಿಕ ಲೆಕ್ಕಪತ್ರಗಳನ್ನು ತಯಾರಿಸಿ ಸಾಮಾನ್ಯ ಸಭೆ ಪರಿಶೀಲನೆ ಮತ್ತು ಅನುಮೋದನೆಗಾಗಿ ಮಂಡಿಸತಕ್ಕದ್ದು ಎನ್ನುವ ಕಾನೂನು ಇದೆ. ಆದರೆ ಈ ಕಾನೂನನ್ನೇ ಸ್ಥಳೀಯ ಸಂಸ್ಥೆಗಳು ಮರೆತಿವೆ ಎಂದು ಪೌರ ಸೇವಾ ನೌಕರರ ಹಾಗೂ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಎಲ್.ನಾರಾಯಣಾಚಾರ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಮಾಸಿಕ ಮತ್ತು ವಾರ್ಷಿಕ ಲೆಕ್ಕಪತ್ರಗಳನ್ನು ಸಾಮಾನ್ಯ ಸಭೆಗೆ ಮಂಡಿಸುವ ಮೊದಲು ಸ್ಟ್ಯಾಂಡಿಂಗ್ ಕಮಿಟಿಗೆ ಮಂಡಿಸಬೇಕು. ಮೈಸೂರಿನ ನಗರಾಭಿವೃದ್ಧಿ ಸಂಸ್ಥೆಯು, ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮತ್ತು ನೌಕರರಿಗೆ ಆಗಿಂದಾಗ್ಗೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದಂತೆ ಕಾಲ-ಕಾಲಕ್ಕೆ ತರಬೇತಿ ನೀಡಿಕೊಂಡು ಬರುತ್ತಿದೆ.
ತರಬೇತಿ ಸಂಸ್ಥೆಯಲ್ಲಿ ವಾಸ್ತವ್ಯ, ಊಟದ ವ್ಯವಸ್ಥೆ, ಹೋಗಿ ಬರಲು ಟಿ.ಎ., ಡಿ.ಎ. ಇದರೊಂದಿಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅರ್ಥವಾಗುವ ರೀತಿಯಲ್ಲಿ ಸೂಕ್ತ ಕೈಪಿಡಿಗಳನ್ನು ನೀಡುತ್ತಾ ಬಂದಿದೆ. ಅದರಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿಗಳು ವೆಚ್ಚವಾಗುತ್ತಿವೆ.
ಅಲ್ಲಿ ಹೋಗಿ ತರಬೇತಿ ಪಡೆದು ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಬಂದ ನಂತರ, ಕೈಪಿಡಿಗಳು ಮಂಗಮಾಯ. ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ಕೊಡಬೇಕಾಗಿದ್ದನ್ನು ಮರೆತ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳು, ಆಯವ್ಯಯ ಸಾರಾಂಶದ ಅಂಕಿ ಅಂಶಗಳನ್ನು ನೀಡಬೇಕು.
ಕರ್ನಾಟಕ ಪೌರಸಭೆಗಳ ಕಲಂ 301 ರಂತೆ, ಸ್ಥಳೀಯ ಸಂಸ್ಥೆಗಳು ತ್ರೈಮಾಸಿಕ ಹಾಗೂ ವಾರ್ಷಿಕ ಲೆಕ್ಕಪತ್ರಳಾದ, ಸ್ವೀಕೃತಿ ಮತ್ತು ವೆಚ್ಚಗಳನ್ನು ಬಜೆಟ್ ರೀತಿ ಅಂದಾಜಿಸಲಾದ ವಿವರಗಳನ್ನು ಸಾರ್ವಜನಿಕರ ಪರಿಶೀಲನೆಗೆ ಇಡಬೇಕು, ಈ ಬಗ್ಗೆ ತಿಳಿಸಲಾಗಿರುವಂತೆ ಕಡ್ಡಾಯವಾಗಿ ಪ್ರಕಟಣೆ ನೀಡಬೇಕೆಂದು ಇರುತ್ತದೆ, ಪೌರಾಡಳಿತ ನಿರ್ದೇಶಕರು ಈ ಬಗ್ಗೆ ಗಮನ ಹರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.