i
ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವ ಹಗಲುಗನಸು ಕಾಣುತ್ತಿದೆ–ಬಿ.ವೈ.ವಿಜಯೀಂದ್ರ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದೇಶದ ಎಲ್ಲಾ ರಾಜ್ಯಗಳ ಅಭಿವೃದ್ಧಿಯೂ ಸೇರಿದಂತೆ ಅಭಿವೃದ್ಧಿ ಹೊಂದಿದರಾಷ್ಟ್ರಗಳ ಸಾಲಿನಲ್ಲಿ ಭಾರತದೇಶವೂ ಸೇರಬೇಕೆಂಬ ಪ್ರಧಾನಿ ನರೇಂದ್ರಮೋದಿಯವರ ಉನ್ನತ ಕನಸನ್ನು ನಾವೆಲ್ಲರೂ ನನಸು ಮಾಡಬೇಕಿದೆ, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ತಮ್ಮ ಅಮೂಲ್ಯವಾದ ಮತವನ್ನು ಕಮಲದ ಗುರುತಿನ ಬಿಜೆಪಿ ಪಕ್ಷಕ್ಕೆ ನೀಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೀಂದ್ರ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ನೆಹರು ಮೈದಾನದಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವ ಹಗಲುಗನಸು ಕಾಣುತ್ತಿದೆ, ಮತ್ತೊಂದೆಡೆ ಅತಂತ್ರ ವಿಧಾನಸಭೆ ನಿರ್ಮಾಣವಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾದರೂ ಪರವಾಗಿಲ್ಲ, ಅಧಿಕಾರಕ್ಕೆ ಬರಬೇಕೆಂಬ ದುರಾಸೆ ಜೆಡಿಎಸ್ ನದ್ದು, ನಾಡಿನ ಭವಿಷ್ಯವನ್ನು ನಿರ್ಣಯ ಮಾಡುವಂತಹ ಮಹತ್ತರ ಚುನಾವಣೆಯಲ್ಲಿ ಜನರು ರಾಜ್ಯದ ಅಭಿವೃದ್ಧಿಗಾಗಿ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.
ಕಳೆದ ೭೫ ವರ್ಷಗಳಿಂದ ಗರೀಬ್ ಹಠಾವೋ ಎಂದು ಹೇಳಿಕೊಂಡು ಆಡಳಿತ ನಡೆಸಿದ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ದೇಶದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಕರ್ನಾಟಕದಲ್ಲೂ ಇದೀಗ ಸೋಲುವ ಭಯದಿಂದ ಗ್ಯಾರೆಂಟಿ ಕಾರ್ಡ್ ಗಳ ಮೂಲಕ ಸುಳ್ಳು ಆಶ್ವಾಸನೆ ನೀಡಲು ಮುಂದಾಗಿದ್ದು, ಈ ಯಾವ ಗ್ಯಾರೆಂಟಿ ಕಾರ್ಡ್ ಗಳು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗುವುದಿಲ್ಲ, ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕಿ ಪೂರ್ಣಿಮಾಶ್ರೀನಿವಾಸ್ , ರಾಜ್ಯ ಪ್ರವರ್ಗ-೧ ರ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ್, ಮುಖಂಡ ಯಶವಂತ್ ಸೇರಿದಂತೆ ಅಸಂಖ್ಯಾತ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.