i
ಆನೆ ದಂತ, ಪೆಂಗೋಲಿಯನ್ ಚಿಪ್ಪು ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಭಾಗಿ?…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಅಮೂಲ್ಯವಾದ ಅರಣ್ಯ ಮತ್ತು ವನ್ಯ ಜೀವಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ವಶಕ್ಕೆ ಪಡೆದಿರುವ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಭಾಗಿ ಆಗಿರುವ ಸಾಧ್ಯತೆ ಇದ್ದು ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸುವುದು ಅಗತ್ಯವಾಗಿದೆ. ಇಂತಹ ಕೃತ್ಯಗಳಲ್ಲಿ ಕಳ್ಳರು ಭಾಗಿಯಾಗಿದ್ದು ಇವರು ಅರಣ್ಯಾಧಿಕಾರಿಗಳಿಗೆ ಸ್ನೇಹಿತರಾಗಿರುವುದನ್ನು ತಳ್ಳಿ ಹಾಕುವಂತಿಲ್ಲ.
ಪೊಲೀಸರು ವಶ ಪಡಿಸಿಕೊಂಡಿರುವ 91 ಕೆ.ಜಿ 3೦೦ ಗ್ರಾಂ ಶ್ರೀಗಂಧ, 15 ಕೆ.ಜಿ 5೦೦ ಗ್ರಾಂ ರಕ್ತ ಚಂದನ, 25 ಕೆ.ಜಿ 4೦೦ ಗ್ರಾಂ ತೂಕದ 2 ಆನೆ ದಂತಗಳು, 34 ಕೆ.ಜಿ 1೦೦ ಗ್ರಾಂ ತೂಕದ ಪೆಂಗೋಲಿನ್ ಚಿಪ್ಪುಗಳ ಪತ್ತೆ ಪ್ರಕರಣದ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳು ಭಾಗಿ ಆಗಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಆನೆ ದಂತಗಳು, ಪೆಂಗೋಲಿಯನ್ ಚಿಪ್ಪುಗಳು ಆರೋಪಿತರ ಬಳಿ ಇರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡುತ್ತದೆ. ಆಕಸ್ಮಿಕವೋ ಉದ್ದೇಶ ಪೂರಕದಿಂದಲೋ ಆನೆ, ಹುಲಿ ಇತರೆ ವನ್ಯ ಜೀವಿಗಳು ಸತ್ತ ನಂತರ ಪೋಸ್ಟ್ ಮಾರ್ಟನ್ ಮಾಡುವ ಸಂದರ್ಭದಲ್ಲಿ ಪಶು ವೈದ್ಯರು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಮಾತ್ರ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಅಮೂಲ್ಯವಾದ ಮತ್ತು ಅಧಿಕ ಬೆಲೆ ಬಾಳುವ ವನ್ಯ ಜೀವಿಗಳ ವಸ್ತುಗಳನ್ನು ಸಂಗ್ರಹ ಮಾಡುವ ಸಾಧ್ಯತೆ ಇರುತ್ತದೆ. ಈ ವಿಷಯ ಆರ್ಎಫ್ಒ, ಎಸಿಎಫ್, ಡಿಎಫ್, ಡಿಸಿಸಿಎಫ್ ಇತರೆ ಮೇಲಾಧಿಕಾರಿಗಳ ಗಮನಕ್ಕೆ ಇರುವ ಸಾಧ್ಯತೆ ಇದ್ದು ಇಂತಹ ಎಲ್ಲ ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮಾಡಿದರೆ ಮತ್ತೊಷ್ಟು ರೋಚಕ ವಿಷಯಗಳು ಬಯಲಿಗೆ ಬರುವ ಸಾಧ್ಯತೆ ಇರುತ್ತದೆ.
ಇಲ್ಲದಿದ್ದರೆ ಆನೆ ದಂತಗಳು, ಪೆಂಗೋಲಿಯನ್ ಚಿಪ್ಪುಗಳು, ಹುಲಿ ಉಗುರುಗಳು ಅರಣ್ಯ ಪ್ರದೇಶದಿಂದ ಹೊರಗೆ ಬಂದು ಜನ ಸಾಮಾನ್ಯರಿಗೆ ಸಿಗುವುದಾದರೂ ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ. ಆನೆ, ಹುಲಿ ಸೇರಿದಂತೆ ಯಾವುದೇ ವನ್ಯ ಜೀವಿಗಳು ಸತ್ತರೆ ಆಳವಾದ ಗುಣಿ ತೋಡಿ ಭೂಮಿ ಒಳಗೆ ಹೂತು ಹಾಕಬೇಕು ಇಲ್ಲ ಸುಡಬೇಕು. ಇಂತಹ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳೇ ಬೆಲೆ ಬಾಳುವಂತ ಆನೆ ದಂತ, ಹುಲಿ ಉಗುರು ಮತ್ತಿತರ ವನ್ಯ ಜೀವಿಗಳ ವಸ್ತುಗಳನ್ನು ಸಂಗ್ರಹಿಸಿ ಮಾವ ಮಾರ್ಗದಲ್ಲಿ ಮಾರಾಟ ಮಾಡುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ದಟ್ಟವಾಗಿದೆ. ಹಿರಿಯೂರು ಮತ್ತು ಹೊಸದುರ್ಗ ನಗರದಲ್ಲಿ ಬಾಡಿಗೆ ಮನೆ ಮಾಡಿರುವ ಎ1 ಪ್ರಮುಖ ಆರೋಪಿ ಬೋಟಿ ಚಂದ್ರ ಎನ್ನುವವರು ಹಿರಿಯೂರು ನಗರದಲ್ಲಿ ಅರಣ್ಯ ಇಲಾಖೆಯ ಎಸಿಎಫ್ ಮನೆಯ ಬಳಿಯೇ ಬಾಡಿಗೆ ಮನೆ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಬೇಕಾಗಿದೆ ಎನ್ನುವುದು ಚಂದ್ರವಳ್ಳಿ ಪತ್ರಿಕೆಯ ಕಳಕಳಿಯಾಗಿದೆ.