ಚಂದ್ರವಳ್ಳಿ ನ್ಯೂಸ್, ಕಠ್ಮಂಡು:
ಭೋತೆ ಕೋಶಿ ನದಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳ, ಸಂಕಷ್ಟದ ಪರಿಸ್ಥಿತಿಯ ನಡುವೆಯೂ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದೆ.
ಭಾರತ, ಚೀನಾ ಹಾಗೂ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳು ಆಫರ್ ಮಾಡಿದ್ದ ತರಬೇತಿ ಪಡೆದ 'ಶೋಧ ಮತ್ತು ರಕ್ಷಣಾ' ಪಡೆಗಳು ಹಾಗೂ ಹೆಲಿಕಾಪ್ಟರ್ಗಳ ನೆರವನ್ನು ನೇಪಾಳ ಸರ್ಕಾರ ನಯವಾಗಿಯೇ ನಿರಾಕರಿಸಿದೆ. ದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ತಮ್ಮದೇ ಆಂತರಿಕ ಭದ್ರತಾ ಪಡೆಗಳು ಸಂಪೂರ್ಣ ಸಮರ್ಥವಾಗಿವೆ ಎಂದು ಪ್ರಧಾನಿ ಬಾಲೆನ್ ಶಾ ನೇತೃತ್ವದ ಸರ್ಕಾರ ಸ್ಪಷ್ಟಪಡಿಸಿದೆ.
ಆದರೆ, ಆಹಾರ, ಔಷಧ ಮತ್ತು ಆರ್ಥಿಕ ರೂಪದಲ್ಲಿ ನೀಡುವ ಪರಿಹಾರ ಸಾಮಗ್ರಿಗಳನ್ನು ಸ್ವೀಕರಿಸಲು ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದೆ. ವಿದೇಶಿ ರಕ್ಷಣಾ ತಂಡಗಳನ್ನು ನಿರಾಕರಿಸಿದ್ದೇಕೆ? ವಿದೇಶಿ ರಕ್ಷಣಾ ಪಡೆಗಳ ಪ್ರವೇಶಕ್ಕೆ ತಡೆ ನೀಡಲು 2015ರ ಭೀಕರ ಭೂಕಂಪದ ಕಹಿ ಅನುಭವವೇ ಮುಖ್ಯ ಕಾರಣ ಎನ್ನಲಾಗಿದೆ. ಅಂದು ವಿವಿಧ ದೇಶಗಳ ರಕ್ಷಣಾ ಪಡೆಗಳು ಹಾಗೂ ಸೇನಾ ವಿಮಾನಗಳು ಏಕಾಏಕಿ ಕಠ್ಮಂಡುಗೆ ಆಗಮಿಸಿದ್ದರಿಂದ ವಿಮಾನ ನಿಲ್ದಾಣ, ರಸ್ತೆ ಸಂಪರ್ಕ ಹಾಗೂ ಸಂವಹನ ವ್ಯವಸ್ಥೆಯ ಮೇಲೆ ತೀವ್ರ ಒತ್ತಡ ಉಂಟಾಗಿತ್ತು. ಜೊತೆಗೆ ವಿವಿಧ ದೇಶಗಳ ಪಡೆಗಳ ನಡುವೆ ಸಮನ್ವಯದ ಕೊರತೆ ಎದುರಾಗಿ ಆಡಳಿತಾತ್ಮಕ ಗೊಂದಲ ಸೃಷ್ಟಿಯಾಗಿತ್ತು. ಅಂತಹ ವ್ಯವಸ್ಥೆಯ ಗೊಂದಲ ಮರುಕಳಿಸಬಾರದು ಹಾಗೂ ಕಾರ್ಯಾಚರಣೆಯ ಸಂಪೂರ್ಣ ನಿಯಂತ್ರಣ ದೇಶೀಯ ಸಂಸ್ಥೆಗಳ ಕೈಯಲ್ಲೇ ಇರಬೇಕು ಎಂಬ ಉದ್ದೇಶದಿಂದ ನೇಪಾಳ ಈ ಕಠಿಣ ನಿರ್ಧಾರ ಕೈಗೊಂಡಿದೆ.
ನೆರವಿನ ದುರುಪಯೋಗ ತಡೆಯಲು 'ಏಕ ಗವಾಕ್ಷಿ' ವ್ಯವಸ್ಥೆ:ವಿದೇಶಗಳಿಂದ ಹರಿದುಬರುವ ಆರ್ಥಿಕ ನೆರವು ದುರುಪಯೋಗವಾಗದಂತೆ ತಡೆಯಲು, ಹಣವನ್ನು 'ಪ್ರಧಾನಮಂತ್ರಿ ಪರಿಹಾರ ನಿಧಿ'ಯ ಮೂಲಕವೇ ರವಾನಿಸುವಂತೆ ನೇಪಾಳ ಸರ್ಕಾರ ಸೂಚಿಸಿದೆ.
ಈ ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ತಲುಪುವ ಸಂಪನ್ಮೂಲವನ್ನು ಅಗತ್ಯವಿರುವ ಪ್ರದೇಶಗಳಿಗೆ ಸಮಾನವಾಗಿ ಹಂಚಿಕೆ ಮಾಡಲು ಯೋಜಿಸಲಾಗಿದೆ. ಈಗಾಗಲೇ ಅಮೆರಿಕ, ಬ್ರಿಟನ್, ವಿಶ್ವ ಬ್ಯಾಂಕ್ ಹಾಗೂ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ಗಳು ಪುನರ್ವಸತಿ ಕಾರ್ಯಕ್ಕೆ ಧನಸಹಾಯ ಪ್ರಕಟಿಸಿವೆ.
ಭಾರತದಿಂದ ಬೃಹತ್ ಮಾನವೀಯ ನೆರವು:ರಕ್ಷಣಾ ಪಡೆಗಳ ಪ್ರವೇಶಕ್ಕೆ ನಿರ್ಬಂಧವಿದ್ದರೂ, 'ನೆರೆಹೊರೆಗೆ ಮೊದಲ ಆದ್ಯತೆ' ನೀತಿಯಡಿ ಭಾರತವು ನೇಪಾಳಕ್ಕೆ ಭಾರಿ ಪ್ರಮಾಣದ ನೆರವು ಒದಗಿಸಿದೆ. ಭಾರತೀಯ ವಾಯುಪಡೆಯ C-130J ಮತ್ತು C-17 ಸರಕು ವಿಮಾನಗಳ ಮೂಲಕ ಬರೋಬ್ಬರಿ 47.5 ಟನ್ ತೂಕದ ಪರಿಹಾರ ಸಾಮಗ್ರಿಗಳನ್ನು (ತಾತ್ಕಾಲಿಕ ಟೆಂಟ್ಗಳು, ಕಂಬಳಿಗಳು, ಸೋಲಾರ್ ದೀಪಗಳು, ಔಷಧಗಳು ಹಾಗೂ ಆಹಾರ ಪೊಟ್ಟಣಗಳು) ಕಳುಹಿಸಿಕೊಡಲಾಗಿದೆ.
ಜೊತೆಗೆ ಕೊಚ್ಚಿಹೋಗಿರುವ ಸೇತುವೆಗಳ ಜಾಗದಲ್ಲಿ ತಕ್ಷಣ ಜೋಡಿಸಬಹುದಾದ 'ಬೇಲಿ ಬ್ರಿಡ್ಜ್'ಗಳನ್ನು ನಿರ್ಮಿಸಿಕೊಡಲು ನವದೆಹಲಿ ಮುಂದಾಗಿದೆ. "ನೇಪಾಳ ಸರ್ಕಾರದ ಬೇಡಿಕೆಗೆ ತಕ್ಕಂತೆ ನಾವು ತಕ್ಷಣವೇ ಸ್ಪಂದಿಸುತ್ತಿದ್ದೇವೆ" ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಪ್ರವಾಹದ ಭೀಕರತೆ ಮತ್ತು ನಾಪತ್ತೆಯಾದ ಭಾರತೀಯರು: ಪ್ರಸ್ತುತ ಪ್ರವಾಹದಲ್ಲಿ ಈವರೆಗೆ ಸುಮಾರು 400 ಮಂದಿ ಮೃತಪಟ್ಟಿದ್ದು, 1,300ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಕೈಲಾಸ ಮಾನಸಸರೋವರ ಹಾಗೂ ಗೋಸೈಕುಂಡ ಯಾತ್ರೆಗೆ ತೆರಳಿದ್ದ ಯಾತ್ರಿಕರು ಸೇರಿದಂತೆ 34 ದೇಶಗಳ 660ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.
ಇವರಲ್ಲಿ ಕನಿಷ್ಠ 290 ಭಾರತೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿದುಬಂದಿದ್ದು, ಈಗಾಗಲೇ 84 ಮಂದಿಯನ್ನು ರಕ್ಷಿಸಲಾಗಿದೆ. ವಿದೇಶಿ ಪ್ರಜೆಗಳ ರಕ್ಷಣೆ, ಮಾಹಿತಿ ದೃಢೀಕರಣ ಹಾಗೂ ವಿವಿಧ ರಾಯಭಾರ ಕಚೇರಿಗಳೊಂದಿಗೆ ಸಮನ್ವಯ ಸಾಧಿಸಲು ನೇಪಾಳದ ವಿದೇಶಾಂಗ ಇಲಾಖೆಯು 'ತುರ್ತು ಪ್ರತಿಕ್ರಿಯಾ ತಂಡ'ವನ್ನು ರಚಿಸಿ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.




