ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಭಾರಿ ಬಹುಮತದ ಸರ್ಕಾರವಿದ್ದರೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇವಲ ಮುಖ್ಯಮಂತ್ರಿ ಸ್ಥಾನದ ಹಗಲುಗನಸು ಕಾಣುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ಲೇವಡಿ ಮಾಡಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ತಿರುಗೇಟು ನೀಡಿರುವ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಹಾಗೂ ಡಿಕೆಶಿ ಅವರ ಆಂತರಿಕ ರಾಜಕೀಯ ಹಂಬಲಗಳನ್ನು ಬಹಿರಂಗವಾಗಿ ಟೀಕಿಸಿದ್ದಾರೆ.
"ಮೊದಲು ನಿಮ್ಮ ಬೋರ್ಡ್ ನಿಜ ಮಾಡಿಕೊಳ್ಳಿ"-
"ಡಿ.ಕೆ. ಅಣ್ಣ, ನೀವು 136 ಜನ ಶಾಸಕರ ಭಾರಿ ಬಹುಮತ ಬೆನ್ನಿಗಿಟ್ಟುಕೊಂಡು ಈ ಮೂರು ವರ್ಷಗಳಿಂದ ಹರಿದಿದ್ದೇನು ಗೊತ್ತಾ?" ಎಂದು ನಿಖಿಲ್ ಕುಮಾರಸ್ವಾಮಿ ನೇರವಾಗಿ ಪ್ರಶ್ನಿಸಿದ್ದಾರೆ.
"ನಿಮ್ಮದೇ ಆಫೀಸಿನಲ್ಲಿ 'ಡಿ.ಕೆ. ಶಿವಕುಮಾರ್ ಆದ ನಾನು...' ಅಂತ ಮುಖ್ಯಮಂತ್ರಿ ಆಗುವ ಹಗಲುಗನಸಿನ ಬೋರ್ಡ್ಹಾಕಿಕೊಂಡು ಕಾಯುತ್ತಾ ಕುಳಿತಿರುವುದು! ಮೊದಲು ಆ ಬೋರ್ಡ್ ನಿಜ ಮಾಡಿಕೊಳ್ಳಿ, ಆಮೇಲೆ ಬೇರೆಯವರ ಸಂಖ್ಯಾಬಲದ ಬಗ್ಗೆ ಮಾತನಾಡಿ" ಎಂದು ಅವರು ಸವಾಲು ಹಾಕಿದ್ದಾರೆ.
ಕೊಟ್ಟ ಕುದುರೆ ಏರದ ಡಿಕೆಶಿ!-
ಕಾಂಗ್ರೆಸ್ ಪಕ್ಷದ ಆಂತರಿಕ ಅಧಿಕಾರ ಹಂಚಿಕೆಯ ಕದನವನ್ನು ಪ್ರಸ್ತಾಪಿಸಿದ ನಿಖಿಲ್, "ಕೊಟ್ಟ ಕುದುರೆಯನ್ನು ನೀವೇ ಏರಿದ್ದೀರೋ ಅಥವಾ ಬೇರೆಯವರು ನಿಮ್ಮನ್ನು ಕೆಳಗೆ ಇಳಿಸಿದ್ದಾರೋ ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತು" ಎಂದು ಟಾಂಗ್ ನೀಡಿದ್ದಾರೆ. ಅಧಿಕಾರಕ್ಕೆ ಬಂದು ಇಷ್ಟು ವರ್ಷಗಳಾದರೂ ಮುಖ್ಯಮಂತ್ರಿ ಹುದ್ದೆ ಸಿಗದೇ ಒದ್ದಾಡುತ್ತಿರುವ ಡಿಕೆಶಿ ಸ್ಥಿತಿಯನ್ನು ಜನ ಗಮನಿಸುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.
ವಿರೋಧ ಪಕ್ಷಗಳ ಸಂಖ್ಯಾಬಲದ ಬಗ್ಗೆ ಮಾತನಾಡುವ ಮುನ್ನ ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ವಪಕ್ಷದೊಳಗಿನ ಸ್ಥಿತಿಗತಿ ಹಾಗೂ ತಮ್ಮದೇ ಕಚೇರಿಯಲ್ಲಿರುವ ಸಿಎಂ ಕನಸಿನ ಬೋರ್ಡ್ ಕಡೆ ಗಮನ ಹರಿಸಲಿ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.


