ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸುಮಾರು 40-50 ವರ್ಷಗಳಿಂದ ಹಾಲೇನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಪರಿಶಿಷ್ಟ ಜಾತಿ ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ಹಾಗೂ ಸರ್ಕಾರಿ ಗೋಮಾಳ ಜಮೀನನ್ನು ಕಬಳಿಸಲು, ಯಾವುದೇ ಅನುಭವವಿಲ್ಲದಿದ್ದರೂ ಅಕ್ರಮವಾಗಿ ರೆಕಾರ್ಡ್ ಹಾಗೂ ಪೋಡಿ ಸೃಷ್ಟಿಸಿ ದಲಿತರನ್ನು ಆರ್ಥಿಕವಾಗಿ ಕುಗ್ಗಿಸುವ ಮತ್ತು ದೌರ್ಜನ್ಯ ಎಸಗುತ್ತಿರುವ ವ್ಯಕ್ತಿಗಳು ಹಾಗೂ ಶಾಮೀಲಾಗಿರುವ ಸರ್ವೇ ಅಧಿಕಾರಿ ಮತ್ತು ಸುಳ್ಳು ಸಾಕ್ಷಿದಾರರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಈ ಮೂಲಕ ಆಗ್ರಹಿಸುತ್ತೇವೆ ಎಂದು ಜಾಂಬವ ಯುವಸೇನಾ ರಾಜ್ಯಾಧ್ಯಕ್ಷ ಡಾ.ಎಂಎಸ್ ರಮೇಶ್ ಚಕ್ರವರ್ತಿ ತಿಳಿಸಿದರು.
ಜಾಂಬವ ಯುವ ಸೇನಾ ವತಿಯಿಂದ (ಹಾಲೇನಹಳ್ಳಿ)
ಮಾದಿಗ ಜನಾಂಗದವರ ಮೇಲಿನ ದೌರ್ಜನ್ಯ ಹಾಗೂ ಭೂ ಕಬಳಿಕೆ ಆಕ್ರಮಣವನ್ನು ಖಂಡಿಸಿ ಬೃಹತ್ ತಮಟೆ ಚಳುವಳಿಯಲ್ಲಿ ಅವರು ಭಾಗವಹಿಸಿ ಮಾತನಾಡಿದರು ದಲಿತರ ಮೇಲೆ ಇಂದಿಗೂ ದೌರ್ಜನ್ಯಗಳು ನಿಂತಿಲ್ಲ, ಜೀವನಧಾರವಾಗಿ ಕೃಷಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುವ ದಲಿತರ ಭೂಮಿಗಳನ್ನು ಬಲಾಢ್ಯರು ನಕಲಿ ದಾಖಲೆಗಳನ್ನು ಸೃಷ್ಟಿಕೊಂಡು ಭೂ ಕಬಳಿಕೆಗೆ ಮುಂದಾಗುತ್ತಿದ್ದಾರೆ. ಇದನ್ನು ಸರ್ಕಾರ ಗಮನಿಸಬೇಕು ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ದಲಿತ ಜನಾಂಗದ ಕುಟುಂಬಗಳು ಜೀವನ ಕಟ್ಟಿಕೊಳ್ಳಲು ಸಹಕರಿಸಬೇಕು ಎಂದರು.
ಇಂದು ತಾಲೂಕಿನ ಮದುರೆ ಹೋಬಳಿಯ ಹಾಲೇನಹಳ್ಳಿ ಗ್ರಾಮದಲ್ಲಿನ ಹಲವು ಸಮಸ್ಯೆಗಳನ್ನು ಕುರಿತು ಅಧಿಕಾರಿಗಳ ಗಮನಕ್ಕೆ ತರಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ, ಸ್ಥಳೀಯವಾಗಿ ಯಾವುದೇ ಅನುಭವದಲ್ಲಿ ಇಲ್ಲದಿದ್ದರೂ ಅಕ್ರಮವಾಗಿ ರೆಕಾರ್ಡ್ ಹಾಗೂ ಪೋಡಿ ಸೃಷ್ಟಿಸಿ ದಲಿತರ ವ್ಯವಸಾಯ ಮಾಡುತ್ತಿರುವ ಜಮೀನನ್ನು ಕಸಿದುಕೊಳ್ಳಲಾಗಿದೆ. ಜೊತೆಗೆ ಸ್ಥಳೀಯ ಸಮುದಾಯ ಭವನ ಹಾಗೂ ಸ್ಮಶಾಣ ಹದ್ದುಬಸ್ತು ವಿಚಾರವಾಗಿ ದೊಡ್ಡಬಳ್ಳಾಪುರ ಡೈರಿ ವೃತ್ತದಿಂದ ತಹಶೀಲ್ದಾರ್ ಕಛೇರಿಯವರೆಗೆ ಬೃಹತ್ ಮೆರವಣಿಗೆ ಮೂಲಕ ಬಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಗ್ರಾಮದ ನಿವಾಸಿ ಶ್ರೀನಿವಾಸ್ ಗೌಡ ಮಾತನಾಡಿ ನಮ್ಮ ಗ್ರಾಮದಲ್ಲಿ 198 ಎಕರೆ ಗೋಮಾಳ ಜಮೀನಿತ್ತು , ಆದರೆ ಸಂಪೂರ್ಣ ಜಮೀನನ್ನು ಬಲಾಡ್ಯರು ಒತ್ತುವರಿ ಮಾಡಿದ್ದಾರೆ ಆದರೆ ಈವರೆಗೂ ಯಾವುದೇ ಅಧಿಕಾರಿಗಳು ತೆರವುಗೊಳಿಸುವ ಕಾರ್ಯವನ್ನು ಮಾಡಿಲ್ಲ , ದಲಿತರಿಗೆ ಬಡವರಿಗೆ ಉಳುಮೆ ಮಾಡಲು ಭೂಮಿ ಇಲ್ಲ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ನಮ್ಮ ಗ್ರಾಮದಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ತಿರುಮಗೊಳಿಸಿ ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂದರು.
ಪ್ರತಿಭಟನಾನಿರತರ ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಮಲ್ಲಪ್ಪ.ಕೆ.ಯರಗೋಳ, ಹಾಲೇನಹಳ್ಳಿ ಗ್ರಾಮದ ದಲಿತರು ಭೂ ಮಂಜೂರಾತಿ ಸಮಿತಿಗೆ ಸಲ್ಲಿಸಿರುವ ಅರ್ಜಿಗಳನ್ನ ಕುಲಂಕುಷವಾಗಿ ಪರಿಶೀಲನೆ ಮಾಡಲಾಗುವುದು, ನನ್ನ ವ್ಯಾಪ್ತಿಯಲ್ಲಿಯೇ ಇರುವ ಅರ್ಜಿಗಳನ್ನ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು, ಜಿಲ್ಲಾಧಿಕಾರಿಗಳಿಗೆ ಸಂಬಂಧಿಸಿದ ಅರ್ಜಿಗಳನ್ನ ಅವರ ಗಮನಕ್ಕೆ ತರುವ ಕೆಲಸ ಮಾಡುವುದ್ದಾಗಿ ಭರವಸೆ ನೀಡಿದ ಅವರು ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು
ಪ್ರತಿಭಟನೆಯಲ್ಲಿ ಮದುರೆ ಹೋಬಳಿ ಮಾದರ ಮಹಾಸಭಾ ಅಧ್ಯಕ್ಷ ಕನಸವಾಡಿ ಶಶಿಕುಮಾರ್, ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಮುಖಂಡರಾದ ಜಯರಾಮಯ್ಯ, ಶ್ರೀನಿವಾಸ್ ಗೌಡ, ಲಿಂಗರಾಜು ರಮೇಶ್ ಎನ್ ಭೀಮ (ಹಾಲೇನಹಳ್ಳಿ ),ಪೂಜಾಹನುಮಯ್ಯ,ಬೈಲಪ್ಪ,ಲಕ್ಷ್ಮಣ, ರಮೇಶ್, ಗಿರಿರಾಜು,ಹೊನ್ನರಾಜು, ಬಸಪ್ಪ ಕಸಗಟ್ಟ, ವೆಂಕಟೇಶ್ ಸೇರಿದಂತೆ ಹಲವರು ಹಾಜರಿದ್ದರು.



