ಚಂದ್ರವಳ್ಳಿ ನ್ಯೂಸ್, ಮೈಸೂರು:
ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ನಡೆದ ಶಾಂತಿ ಸಭೆಯಲ್ಲಿ ಇನ್ಸ್ಪೆಕ್ಟರ್ ಧನಂಜಯ್ ಅವರು ಆಡಿರುವ ವಿವಾದಾತ್ಮಕ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಗ್ರಾಸವಾಗಿದೆ.
ಶಾಂತಿ ಸಭೆಯಲ್ಲಿ ಮಾತನಾಡಿದ್ದ ಇನ್ಸ್ಪೆಕ್ಟರ್ ಧನಂಜಯ್, "ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ. ಅಕಸ್ಮಾತ್ ಹೋದರೆ ಏನು ಮಾಡುತ್ತೇವೆ ಎಂಬುದನ್ನು ಮಾಡಿ ತೋರಿಸ್ತೀನಿ.
ಈ ಬಾರಿ ಮಸೀದಿ ಮುಂದೆ ಪಟಾಕಿ ಹೊಡೆದರೆ ಗ್ರಹಚಾರ ಬಿಡಿಸ್ತೇನೆ" ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಅಲ್ಲಿ ಭದ್ರತೆ ಕಲ್ಪಿಸಲಾಗುವುದು ಎಂದ ಅವರು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮುನ್ನವೇ ಮೆರವಣಿಗೆಯ ನಿಗದಿತ ರೂಟ್ ಅನ್ನು ಕಡ್ಡಾಯವಾಗಿ ನೀಡಬೇಕು ಮತ್ತು ಯಾವುದೇ ಕಾರಣಕ್ಕೂ ಡಿಜೆ ಮಾದರಿಯ ಸ್ಪೀಕರ್ ಬಳಸಲು ಅವಕಾಶವಿಲ್ಲ ಎಂದು ಎಚ್ಚರಿಸಿದ್ದರು.
ಇನ್ಸ್ಪೆಕ್ಟರ್ ಅವರ ಈ ಒರಟು ಧ್ವನಿಯ ಮಾತುಗಳು ಹಿಂದೂ ಯುವಕರನ್ನು ಕೆರಳಿಸಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿ: ಇನ್ಸ್ಪೆಕ್ಟರ್ ಧನಂಜಯ್ ಅವರ ಹೇಳಿಕೆ ತೀವ್ರ ವಿವಾದ ಸೃಷ್ಟಿಸುತ್ತಿದ್ದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೊಮ್ಮೆ ಆ ರೀತಿಯಾಗಿ ಮಾತನಾಡಿದರೆ ಠಾಣೆಗೆ ನುಗ್ಗುವುದಾಗಿ ಸವಾಲು ಹಾಕಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, "ಇನ್ಸ್ಪೆಕ್ಟರ್ ಆದವರು ರೋಡ್ ಸೈಡ್ ತರ್ಲೆ ರೌಡಿಗಳಂತೆ ಮಾತನಾಡಿದ್ದಾರೆ. ಇದು ತೀರಾ ಖಂಡನೀಯ" ಎಂದು ಕಿಡಿಕಾರಿದರು. "ಆ ಮನುಷ್ಯ ವೀರಾವೇಶದಿಂದ ಮಾತನಾಡಿದ್ದಾರೆ, ಅಂತಹ ಬಹಳಷ್ಟು ಮಂದಿಯನ್ನು ನಾವು ನೋಡಿದ್ದೇವೆ. ಇನ್ಸ್ಪೆಕ್ಟರ್ ಸ್ಥಾನದಲ್ಲಿರುವವರು ಗೌರವಯುತವಾಗಿ ಮಾತನಾಡಬೇಕು. ಆ ಹುದ್ದೆಗೆ ತಕ್ಕಂತೆ ಸಂಯಮದಿಂದ ನಡೆದುಕೊಳ್ಳಬೇಕು" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.




