ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕುಟುಂಬ ಉದ್ಯಮಗಳು ರಾಜ್ಯದ ಆರ್ಥಿಕ ಪ್ರಗತಿಯ ಚಾಲಕ ಶಕ್ತಿಯಾಗಿದ್ದು, ಪ್ರಸ್ತುತ 50 ಲಕ್ಷ ನೋಂದಾಯಿತ ಎಂ.ಎಸ್.ಎಂ.ಇ ಗಳು 2.3 ಕೋಟಿ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿವೆ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು.
ನಗರದ ಪ್ರೆಸ್ಟೀಜ್ ಟವರ್ಸ್ನಲ್ಲಿ ಎಫ್ಐಸಿಸಿಐ (FICCI) ಮತ್ತು ಯುಕೆ ಅಂಡ್ ಕೋ (UK & Co) ಜಂಟಿಯಾಗಿ ಆಯೋಜಿಸಿದ್ದ ‘ಭಾರತ ಕುಟುಂಬ ಉದ್ಯಮ ಶೃಂಗಸಭೆ’ಯನ್ನು ಉದ್ಘಾಟಿಸಿ ಹಾಗೂ ‘ಕರ್ನಾಟಕದ ಮುಂದಿನ ಬೆಳವಣಿಗೆಯ ಅಲೆ – SMEs ಸಾಮರ್ಥ್ಯವನ್ನು ಅನಾವರಣಗೊಳಿಸುವುದು’ ಕುರಿತ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಎಂ.ಎಸ್.ಎಂ.ಇ ಗಳು ರಾಜ್ಯದ ಒಟ್ಟು ರಾಜ್ಯ ದೇಶೀಯ ಉತ್ಪನ್ನಕ್ಕೆ ಶೇಕಡಾ 8.30ರಷ್ಟು ಕೊಡುಗೆ ನೀಡುತ್ತಿವೆ. ಅಲ್ಲದೆ, ಉತ್ಪಾದನಾ ವಲಯದ ಶೇಕಡಾ 45ರಷ್ಟು ಹಾಗೂ ಒಟ್ಟು ರಫ್ತಿನ ಶೇಕಡಾ 40ರಷ್ಟು ಕೊಡುಗೆ ಈ ವಲಯದಿಂದಲೇ ಬರುತ್ತಿದೆ. ದೇಶದ ದೊಡ್ಡ ಕಂಪನಿಗಳ ಬೇರುಗಳು ಕುಟುಂಬ ಆಧಾರಿತ ಸಣ್ಣ ಉದ್ಯಮಗಳಲ್ಲೇ ಇವೆ ಎಂದು ಹೇಳಿದರು.
ಕೈಗಾರಿಕಾ ಮತ್ತು ಸೇವಾ ವಲಯಗಳ ಸಮೀಕ್ಷೆಯಲ್ಲಿ ಭಾಗವಹಿಸಿದ ಬಹುಪಾಲು ಉದ್ಯಮಿಗಳು ಕರ್ನಾಟಕ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಸಣ್ಣ ಉದ್ಯಮಗಳಲ್ಲಿ ಪ್ರತಿಭಾ ಸಂಪನ್ಮೂಲ ಬಲಪಡಿಸುವುದು ಮತ್ತು ಸರ್ಕಾರಿ ಯೋಜನೆಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ಶಿಫಾರಸುಗಳನ್ನು ಸರ್ಕಾರ ಸ್ವಾಗತಿಸಿದೆಎಂದು ಹೇಳಿದರು.
ಬದಲಾಗುತ್ತಿರುವ ಜಾಗತಿಕ ವಾತಾವರಣ ಮತ್ತು ಸವಾಲುಗಳು: ಕುಟುಂಬ ಉದ್ಯಮಗಳು ದಶಕಗಳ ಸುದೀರ್ಘ ದೃಷ್ಟಿಕೋನ ಮತ್ತು ಮೌಲ್ಯಗಳ ತಡಿಹದಿಯ ಮೇಲೆ ನಿರ್ಮಾಣವಾಗಿವೆ. ಆದಾಗ್ಯೂ, ಇಂದಿನ ತಂತ್ರಜ್ಞಾನ ಆಧಾರಿತ ಯುಗದಲ್ಲಿ ಜಾಗತಿಕ ಪೂರೈಕೆ ಸರಪಳಿ, ಹಣಕಾಸು ಲಭ್ಯತೆ ಮತ್ತು ಗ್ರಾಹಕರ ನಿರೀಕ್ಷೆಗಳು ಬದಲಾಗುತ್ತಿವೆ. ಹೀಗಾಗಿ, ಪ್ರಸ್ತುತ ಉದ್ಯಮಗಳ ಮುಂದೆ ಕೇವಲ ಹಳೆಯದನ್ನು ಉಳಿಸಿಕೊಳ್ಳುವುದಲ್ಲದೆ, ಭವಿಷ್ಯಕ್ಕಾಗಿ ಪರಿವರ್ತನೆಗೊಳ್ಳುವ ಪ್ರಮುಖ ಸವಾಲಿದೆ.
ವಿಶೇಷವಾಗಿ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಉದ್ಯಮದ ಮಾಲೀಕತ್ವ ವರ್ಗಾಯಿಸುವಾಗ ಬರಿ ಅಧಿಕಾರವನ್ನಷ್ಟೇ ಅಲ್ಲದೆ ಮೌಲ್ಯ, ಜ್ಞಾನ ಮತ್ತು ಜವಾಬ್ದಾರಿಯನ್ನು ಹಸ್ತಾಂತರಿಸಬೇಕು. ಹೊಸ ಪೀಳಿಗೆಗೆ ನವೀನತೆ ಮತ್ತು ಸೃಜನಶೀಲತೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮಹಿಳಾ ಉದ್ಯಮಶೀಲತೆಗೆ ವಿಶೇಷ ಪ್ರೋತ್ಸಾಹ: ರಾಜ್ಯದಲ್ಲಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಕುಟುಂಬದ ಯಜಮಾನಿಯರಾದ 2 ಕೋಟಿಗೂ ಹೆಚ್ಚು ಮಹಿಳೆಯರಿಗೆ ತಿಂಗಳಿಗೆ ರೂ. 2,000 ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಇದು ಸಣ್ಣ ಉದ್ಯಮಗಳಿಗೆ ಬಂಡವಾಳದ ಆಧಾರವಾಗುತ್ತಿದೆ. 3 ರಿಂದ 4 ಮಹಿಳೆಯರು ಸೇರಿ 'ಜಂಟಿ ಹೊಣೆಗಾರಿಕೆ ಗುಂಪು' (ಜೆ.ಎಲ್.ಜಿ) ರಚಿಸಿಕೊಂಡರೆ ಯಾವುದೇ ಬ್ಯಾಂಕ್ ಮೇಲಾಧಾರ (Collateral Security) ಇಲ್ಲದೆ ಸಾಲ ಸೌಲಭ್ಯ ದೊರೆಯಲಿದೆ. ಜತೆಗೆ ಉಚಿತ ಸಾರ್ವಜನಿಕ ಸಾರಿಗೆ ಸೌಲಭ್ಯವು ಮಹಿಳೆಯರ ವ್ಯಾಪಾರ-ವಹಿವಾಟಿನ ಸಂಚಾರಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ ಎಂದರು.
ಸುಲಭ ವಹಿವಾಟು ಹಾಗೂ ಮೂಲಸೌಕರ್ಯ ಬದ್ಧತೆ: ಉದ್ಯಮಿಗಳು ಆತ್ಮವಿಶ್ವಾಸದಿಂದ ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಿದೆ. ವ್ಯವಹಾರ ನಡೆಸುವುದನ್ನು ಸುಲಭಗೊಳಿಸುವುದು (Ease of Doing Business), ಮೂಲಸೌಕರ್ಯ ಬಲಪಡಿಸುವುದು, ಕೌಶಲ್ಯಯುತ ಮಾನವ ಸಂಪನ್ಮೂಲ ರೂಪಿಸುವುದು ಹಾಗೂ ಜಾಗತಿಕ ಮೌಲ್ಯ ಸರಪಳಿಯೊಂದಿಗೆ ಸ್ಥಳೀಯ ಎಸ್.ಎಂ.ಇ ಗಳನ್ನು ಜೋಡಿಸಲು ಸರ್ಕಾರ ಬದ್ಧವಾಗಿದೆ.
ಶೃಂಗಸಭೆಯಲ್ಲಿ ಭಾಗವಹಿಸಿರುವ ಉದ್ಯಮಿಗಳು ಈ ವೇದಿಕೆಯನ್ನು ಕೇವಲ ಚರ್ಚೆಗೆ ಸೀಮಿತಗೊಳಿಸದೆ, ಪರಸ್ಪರ ಅನುಭವ ಹಂಚಿಕೊಳ್ಳಲು, ನವೀನ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಹಾಗೂ ಹೊಸ ಸಹಭಾಗಿತ್ವಗಳನ್ನು ಅನ್ವೇಷಿಸಲು ಬಳಸಿಕೊಳ್ಳಬೇಕೆಂದು ಮುಖ್ಯ ಕಾರ್ಯದರ್ಶಿ ಕರೆ ನೀಡಿದರು.




