i
ಹಿರಿಯೂರು:
ರ್ಯಾಪಿಡ್ ಆಂಟಿಜನ್ ಟೆಸ್ಟ್ ಕಿಟ್ ಗಳನ್ನು ಸರ್ಕಾರ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಿದ್ದು, ಕೊರೊನಾ ಸೋಂಕಿನ ಫಲಿತಾಂಶವನ್ನು ಅತಿ ವೇಗವಾಗಿ ಅರ್ಧ ಗಂಟೆಯೊಳಗೆ ಪಡೆಯಬಹುದಾಗಿದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ಮೇಟಿಕುರ್ಕೆ ಅರಣ್ಯಧಾಮ ಪ್ರವಾಸಿ ಮಂದಿರ ಆವರಣದಲ್ಲಿ ಕೊರೊನಾ ನಿಯಂತ್ರಿಣ ಕುರಿತು ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಹಿಂದೆ ಶಂಕಿತ ಕೊರೊನಾ ರೋಗದ ವ್ಯಕ್ತಿಗಳಲ್ಲಿ ಸಂಗ್ರಹಿಸುತ್ತಿದ್ದ ಗಂಟಲ ದ್ರವವನ್ನು ದಾವಣಗೆರೆ, ಶಿವಮೊಗ್ಗಕ್ಕೆ ಕಳುಹಿಸುತ್ತಿದ್ದರು, ನಂತರ ಚಿತ್ರದುರ್ಗಕ್ಕೆ ಕಳುಹಿಸಲಾಯಿತು. ಈ ಎಲ್ಲಾ ಕಾರಣಗಳಿಂದ ರಿಪೋರ್ಟ್ ಬರುವುದು ತಡವಾಗುತ್ತಿದ್ದುದರಿಂದ ಸಾರ್ವ ಜನಿಕರಿಂದ ಅನೇಕ ದೂರುಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ನಮ್ಮ ಮನವಿಗೆ ಸ್ಪಂದಿಸಿದ ಸರ್ಕಾರ ಈಗ ನಮ್ಮ ಹಿರಿಯೂರು ಆಸ್ಪತ್ರೆಗೆ 100 ರ್ಯಾಪಿಡ್ ಕಿಟ್ ಗಳನ್ನು ವಿತರಣೆ ಮಾಡಿದ್ದು,ಇನ್ನು ಹೆಚ್ಚು ಕಿಟ್ ಗಳನ್ನು ವಿತರಣೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದೇವೆ. ಇದೀಗ ಕೇವಲ ಅರ್ಧ ಗಂಟೆಯಲ್ಲಿಯೇ ಕೊರೊನಾ ಪರೀಕ್ಷೆ ವರದಿಯನ್ನು ಪಡೆಯಬಹುದಾಗಿದೆ ಎಂದರು.
ತಾಲ್ಲೂಕಿನಲ್ಲಿ 37 ಪ್ರಕರಣಗಳು ಪಾಸಿಟಿವ್ ಬಂದಿರುವುದು ಆತಂಕದ ಸಂಗತಿ. ಇವುಗಳಲ್ಲಿ ಬಹುತೇಕ ಬೆಂಗಳೂರಿನ ಸಂಪರ್ಕಿತವಾಗಿವೆ. ಜುಲೈ 13 ಮತ್ತು 14 ರಂದು ಬೆಂಗಳೂರಿನಿಂದ ನಮ್ಮ ತಾಲ್ಲೂಕಿಗೆ ಬಂದಿರುವವರ ಮೇಲೆ ಹೆಚ್ಚು ನಿಗಾ ಇಡಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಧರ್ಮಪುರ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 20 ಸೋಂಕಿತರು ಗುಣಮುಖರಾಗಿ ಹೊರ ಹೋಗಿದ್ದಾರೆ. ನಮ್ಮಲ್ಲಿ 74 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದು, ಇತರೆ ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಸಮಿತಿ ರಚಿಸಿಕೊಂಡು ಬೆಂಗಳೂರು ಸೇರಿ ಹೊರಗಿನಿಂದ ಬರುವವರು ಮೇಲೆ ನಿಗಾ ವಹಿಸಿ ಕ್ವಾರಂಟೈನ್ ಗೆ ಒಳಪಡಿಸಲು ತಾಕೀತು ಮಾಡಿ ಇಲ್ಲವಾದಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ ಎಂಬುದಾಗಿ ಎಚ್ಚರಿಸಿದರು.
ಡಿವೈಎಸ್.ಪಿ ರೋಷನ್ ಜಮೀರ್ ಮಾತನಾಡಿ, ಹೊರಗಿನಿಂದ ಬಂದವರು ಕ್ವಾರಂಟೈನ್ ಆಗಲು ಹಿಂಜರಿಯುತ್ತಿರುವುದು ದೊಡ್ಡ ತಲೆನೋವಾಗಿದೆ. ಹಳ್ಳಿಗಳಿಂದ ಹೊಸದಾಗಿ ಬಂದವರ ಬಗ್ಗೆ ಯಾರೇ ಮಾಹಿತಿ ನೀಡಿದರೂ ತಕ್ಷಣ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಬೇಕು ಎಂದರು.
ತಹಶೀಲ್ದಾರ್ ಸತ್ಯನಾರಾಯಣ ಮಾತನಾಡಿ, ಕೊರೊನಾ ಕೇವಲ ಒಂದೆರಡು ಇಲಾಖೆಗೆ ಸಂಬಂಧಿ ಸಿದ್ದಲ್ಲ, ಅನಗತ್ಯವಾಗಿ ಸಂಚರಿಸುವ ವಾಹನ ಸವಾರರ ಮೇಲೆ ನಿರ್ಧಾಕ್ಷಣ್ಯವಾಗಿ ಕೇಸು ದಾಖಲು ಮಾಡಬೇಕು ಎಂದರು. ಪೌರಾಯುಕ್ತೆ ಲೀಲಾವತಿ, ಸಿಪಿಐ ರಾಘವೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ರಾಮಯ್ಯ, ಇಒ ಹನುಮಂತಪ್ಪ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಉಪಸ್ಥಿತರಿದ್ದರು.